ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ‘ಓವರ್ಹೆಡ್ ಟ್ಯಾಂಕ್’ಗೆ ಕೋತಿಗಳು ಬಿದ್ದು, ಸಾವನ್ನಪ್ಪಿವೆ. ಈ ಬಗ್ಗೆ ತಿಳಿಯದ ಗ್ರಾಮಸ್ಥರು ಅದೇ ನೀರನ್ನು ಕುಡಿದು, ಅಸ್ವಸ್ಥರಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಖಾನಾಪೂರ ಗ್ರಾಮದ ಸುಮಾರು 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ನೀರಿನ ಟ್ಯಾಂಕ್ನಲ್ಲಿ ನೀರು ಕುಡಿಯಲು ಹೋಗಿದ್ದ ಮಂಗಗಳು ಟ್ಯಾಂಕ್ ಒಳಗೆ ಬಿದ್ದು ಸಾವನ್ನಪ್ಪಿವೆ. ಆದರೆ, ಕೋತಿಗಳು ನೀರಿನಲ್ಲಿ ಬಿದ್ದಿರುವ ಬಗ್ಗೆ ತಿಳಿಯದೆ, ಮೂರು ದಿನಗಳ ಕಾಲ ಅದೇ ನೀರನ್ನು ಗ್ರಾಮದ ಜನರಿಗೆ ನಲ್ಲಿಗಳ ಮೂಲಕ ಸರಬರಾಜು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೋತಿಗಳು ಸತ್ತು ಕಲುಷಿತವಾಗಿದ್ದ ನೀರನ್ನೇ ಗ್ರಾಮದ ಜನರು ಕುಡಿದಿದ್ದಾರೆ. ಕೆಲವರು ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.