ಭಾರತದ ಎಲ್ಲ ಶಾಸನಗಳ ತಾಯಿಯೇ ನಮ್ಮ ಸಂವಿಧಾನ. ಹೀಗಾಗಿ ಪ್ರತಿಯೊಬ್ಬರು ಸಂವಿಧಾನಕ್ಕೆ ಗೌರವವನ್ನು ಕೊಡಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಹನುಮಂತ ಅನಂತರಾವ್ ಸಾತ್ವಿಕ ಹೇಳಿದರು.
ಭಾನುವಾರ (ಡಿ.10) ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವವಿಜ್ಞಾನ ವಸತಿ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಇವರುಗಳ ಸಹಯೋಗದಲ್ಲಿ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದಲ್ಲಿ ಎಷ್ಟೋ ಹಕ್ಕುಗಳಿವೆ. ಆದರೆ, ಮೂಲಭೂತ ಹಕ್ಕುಗಳನ್ನು ಯಾರು ಕೂಡ ಉಲ್ಲಂಘನೆ ಮಾಡಲು ಬರುವುದಿಲ್ಲ. ನಾವು ಅನುಭವಿಸಲು ಮೂಲಭೂತ ಹಕ್ಕುಗಳು ಇರುವಂತೆ. ಮೂಲಭೂತ ಕರ್ತವ್ಯಗಳು ಕೂಡ ಇವೆ. ಅವುಗಳನ್ನು ಪಾಲಿಸುವುದು ಆದ್ಯ ಕರ್ತವ್ಯವಾಗಿದೆ ಎಂದರು.
ಸಿವಿಲ್ ನ್ಯಾಯಾಧೀಶರಾದ ಬಾಳಾಸಾಹೇಬ ವಡವಡೆ ಮಾತನಾಡಿ, ಕಾನೂನು ಸೇವಾ ಸಮಿತಿ ಮೂಲಕ ಉಚಿತವಾಗಿ ಕಾನೂನು ಸೇವೆಗಳ ಲಭ್ಯತೆ ಇದೆ. ಇದರ ಸದುಪಯೋಗ ತಾವು ಪಡೆದುಕೊಳ್ಳಬೇಕು. ಮೂಲಭೂತ ಹಕ್ಕುಗಳಾದ ಸಮಾನತೆ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕು, ಧಾರ್ಮಿಕ ಹಕ್ಕು, ಸಂವಿಧಾನಾತ್ಮಕ ಪರಿಹಾರ ಹಕ್ಕು ಕುರಿತಾಗಿ, ಅನೇಕ ಪ್ರಕರಣಗಳನ್ನು ಉದಾಹರಿಸಿ ವಿವರವಾಗಿ ತಿಳಿಸಿದರು.
ಮಾನವ ಹಕ್ಕುಗಳ ಕುರಿತು ನ್ಯಾಯವಾದಿ ರವಿಕುಮಾರ ಪಾಟೀಲ್ ಅಳ್ಳುಂಡಿ, ರಾಷ್ಟ್ರೀಯ ಕಾನೂನು ಸೇವೆಗಳ ಕಾಯ್ದೆಯ ಧ್ಯೇಯೋದ್ದೇಶಗಳು ಮತ್ತು ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ಕುರಿತುಪ್ಯಾನೆಲ್ ನ್ಯಾಯವಾದಿ ವೆಂಕನಗೌಡ ಮಾಲಿ ಪಾಟೀಲ್ ಉಪನ್ಯಾಸ ನೀಡಿದರು.
ತಾಲೂಕು ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿಡ್ಡಯ್ಯ ಟಿ.ನಾಯಕ, ಶಿಕ್ಷಣ ಸಂಯೋಜಕ ಮಹಾದೇವಪ್ಪ, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮಿ, ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ, ತಾಲೂಕು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಚಂದ್ರಶೇಖರ ವಿಭೂತಿ ಹಾಜರಿದ್ದರು.
ಸಂಸ್ಥೆ ವತಿಯಿಂದ ವಸತಿ ಕಾಲೇಜಿನ ಗ್ರಂಥಾಲಯಕ್ಕೆ ಸಂವಿಧಾನ ಪೀಠಿಕೆ, ಸಂವಿಧಾನ ಓದು, ಮಕ್ಕಳಿಗಾಗಿ ಸಂವಿಧಾನ, ಭಾರತದ ಪುಸ್ತಕಗಳನ್ನು ವಿತರಿಸಲಾಯಿತು.