ರೈತರು ʼಬರಗಾಲ ಬರಲೆಂದು ಕಾಯುತ್ತಾರೆʼ ಎಂದು ಕೀಳು ಮಟ್ಟದ ಹೇಳಿಕೆ ನೀಡಿದ ಸಚಿವ ಶಿವಾನಂದ ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಆಗ್ರಹಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, “ರೈತ ಕುಟುಂಬದಿಂದ ಬಂದಿರುವುದಾಗಿ ಹೇಳುತ್ತಲೇ ಎರಡನೇ ಬಾರಿಗೆ ಸಚಿವರಾದ ಶಿವಾನಂದ ಪಾಟೀಲ್ ರೈತರನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ. ಈ ಹಿಂದೆ ಸಚಿವ ಶಿವಾನಂದ ಪಾಟೀಲ್ ರೈತರು 5 ಲಕ್ಷ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ರೈತ ಸಮುದಾಯಕ್ಕೆ ಅವಮಾನಿಸಿದ್ದರು. ಈಗ ಪರಿಹಾರಕ್ಕಾಗಿ ಬರಗಾಲ ಬರಲಿ ಎಂದು ರೈತರ ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಿರುವುದು ಖಂಡನೀಯ. ಇಂತಹ ಬೇಜವಾಬ್ದಾರಿಯಾಗಿ ಹೇಳಿಕೆ ನೀಡುವ ಶಾಸಕ, ಸಚಿವರುಗಳಿಗೆ ತರಬೇತಿಯನ್ನಾದರೂ ನೀಡಿ ಬುದ್ದಿ ಕಲಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದುರುದ್ದೇಶದಿಂದ ರೈತರ ವಿರುದ್ದ ಮಾತನಾಡಿದ ಸಚಿವ ಶಿವಾನಂದ ಪಾಟೀಲ್ ಸಚಿವರಾಗಿ ಮುಂದುವರೆಯಲು ಅನರ್ಹರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರ ಹೇಳಿಕೆಯನ್ನು ಸಮರ್ಥಿಸುವುದು ಬಿಟ್ಟು ಕೂಡಲೇ ಅವರನ್ನು ತಮ್ಮ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ನಾರಾಯಣಪುರು ಬಲದಂಡೆ ಮತ್ತು ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆ ರಕ್ಷಣೆಗೆ ಸಮಪರ್ಕಕ ನೀರು ಹರಿಸಬೇಕು. ಕೃಷ್ಣ ಅಚ್ಚುಕಟ್ಟು ಪ್ರಾಧಿಕಾರದವರು ಬರೀ ಹತ್ತು ನಿಮಿಷ ಸಭೆ ನಡೆಸಿ ರೈತರೊಂದಿಗೆ ಚರ್ಚಿಸದೇ ನೀರು ಹರಿಸುವುದನ್ನು ನಿರ್ಧರಿಸಲಾಗಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಮೆಣಸಿನಕಾಯಿ ಬೆಳೆಗೆ ನೀರು ಹರಿಸದೇ ಹೋದಲ್ಲಿ 400 ಕೋಟಿ ರೂ. ಅಧಿಕ ಮೌಲ್ಯದ ಫಸಲು ಹಾನಿಯಾಗುತ್ತದೆ. ನಾರಾಯಣಪುರ ಜಲಾಶಯದಲ್ಲಿ 51 ಟಿಎಂಸಿ ನೀರು ಸಂಗ್ರಹವಿದೆ. ಆದರೆ ಕೆಬಿಜೆಎನ್ಎಲ್ ಅಧಿಕಾರಿಗಳು ಅವೈಜ್ಞಾನಿಕವಾಗಿ ನೀರಿನ ಲೆಕ್ಕ ಹಾಕಿ 13 ಟಿಎಂಸಿ ನೀರು ಆವಿಯಾಗುವದಾಗಿ ಅಂದಾಜಿಸಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ನೀರು ಆವಿಯಾಗುವದಿಲ್ಲ. ಹೂ ಬಿಡುವ ಹಂತದಲ್ಲಿರುವ ಮೆಣಸಿನಕಾಯಿ ಬೆಳೆಗೆ ಅಗತ್ಯವಿರುವ ನೀರು ಹರಿಸಲು ನಿರ್ಧರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಿಎಸ್ಎಸ್ಕೆ ಆಡಳಿತ ಮಂಡಳಿ ವಜಾಕ್ಕೆ ಆಗ್ರಹ
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಬೂದಯ್ಯ ಸ್ವಾಮಿ, ದೇವರಾಜ ನಾಯಕ, ಗೋವಿಂನಾಯಕ, ಭೀಮರೆಡ್ಡಿ, ಗೋಕುಲಸಾಬ್, ಬಸವರಾಜ ಇದ್ದರು.
ವರದಿ : ಹಫೀಜುಲ್ಲ