- ರೈತರು ತಾಳ್ಮೆ ಕಳೆದುಕೊಂಡರೆ ಅಧಿಕಾರಿಗಳಿಗೂ ಹಾಗೂ ಜನಪ್ರತಿನಿಧಿಗಳಿಗೆ ಉಳಿಗಾಲವಿಲ್ಲ.
- ಈ ಭಾಗದ ರೈತರಿಗೆ ಬೇಕಾದ ನೀರು ಒದಗಿಸುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ.
ತುಂಗಭದ್ರ ಎಡದಂಡೆ ಕಾಲುವೆ ಕೆಳಭಾಗಕ್ಕೆ ನೀರು ಹರಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ಸಿರವಾರ ಪಟ್ಟಣದಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಘೋಷಿಸಿದ ವ್ಯಾಪಾರಸ್ಥರು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ರೈತರ ಪ್ರತಿಭಟನೆ ಕರೆ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದಲೇ ಸಿರವಾರ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ರೈತರ ಹೋರಾಟಕ್ಕೆ ಬೆಂಬಲಿಸಿದರು. ಪಟ್ಟಣದ ನೀರಾವರಿ ಇಲಾಖೆ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ ರೈತರು ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ, “ರೈತರು ತಾಳ್ಮೆ ಕಳೆದುಕೊಂಡರೆ ಅಧಿಕಾರಿಗಳಿಗೂ ಹಾಗೂ ಜನಪ್ರತಿನಿಧಿಗಳಿಗೆ ಉಳಿಗಾಲ ಇರುವುದಿಲ್ಲ. ಸಿರವಾರ ತಾಲೂಕಿನಲ್ಲಿ ರೈತರು ಪ್ರತಿ ವರ್ಷ ತುಂಗಭದ್ರ ಕಾಲುವೆ ನೀರಿಗಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ನಾವುಗಳ ಹೋರಾಟ ಮಾಡಿದರೂ ನೀರು ಪಡೆಯದ ದೌರ್ಭಾಗ್ಯ ನಮ್ಮದಾಗಿದೆ, ನಾವು ಕೇಳುತ್ತಿರುವುದು ನಮ್ಮ ಪಾಲಿನ ನೀರಾಗಿದೆ. ಅದನ್ನು ನಾವು ಹೋರಾಟದ ಮೂಲಕವೇ ಪಡೆಯುವುದು ವಿಪರ್ಯಸವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, “ಈ ಭಾಗದ ರೈತರಿಗೆ ಬೇಕಾದ ನೀರು ಒದಗಿಸುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ನೀರಾವರಿ ಇಲಾಖೆ ಎನ್ನುವುದು ರೈತರಿಗಾಗಿ ಕೆಲಸ ಮಾಡಬೇಕು ಬದಲಿಗೆ ಬೇಕಾಬಿಟ್ಟಿಯಾಗಿ ಕೆಲಸ ಮಾಡಬಾರದು, ಇನ್ನು ಈ ಭಾಗದ ಜನ ಪ್ರತಿನಿಧಿಗಳು ಮೇಲ್ಭಾಗದಲ್ಲಿ ಜರುಗುತ್ತಿರುವ ಅಕ್ರಮ ನೀರಾವರಿಯ ಬಗ್ಗೆ ದ್ವನಿ ಎತ್ತಬೇಕು, ಅಂದಾಗ ಮಾತ್ರ ನಮ್ಮ ರೈತರಿಗೆ ನೀರು ಸಿಗಲು ಸಾಧ್ಯ. ಇಲ್ಲವಾದಲ್ಲಿ ನಮ್ಮ ರೈತರು ಮಳೆಯನ್ನು ನಂಬಿಕೊಂಡು ಬೆಳೆಗಳನ್ನು ಬೆಳೆಯಬೇಕಾದಿತು. ಕೃಷಿ ಕೆಲಸ ತೊರೆದು ಬೇರೆ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿರಿ ಬರುತ್ತದೆ, ಅನ್ನದಾತನಿಗೆ ಕೆಲಸವಿಲ್ಲ ಎಂದಾದರೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಹೊಟ್ಟೆಗೆ ಅನ್ನ ಸಿಗುವುದಿಲ್ಲ ಎನ್ನುವುದು ಅರಿತುಕೊಳ್ಳಬೇಕು” ಎಂದು ಕಿಡಿಕಾರಿದರು.
ಕಾಂಗ್ರೇಸ್ ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ ಮಾತನಾಡಿ, “ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಬಾರದೇ ರೈತರು ಕಂಗಾಲಾಗಿದ್ದಾರೆ. ಇದರ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಮೇಲ್ಭಾಗದಲ್ಲಿ ನೀರು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎಂದು ಸಬೂಬು ಕೊಡುತ್ತಾರೆ. ರೈತರು ಸುಮ್ಮನಿದ್ದಾರೆ ಎಂದರೆ ಅವರ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ ಎನ್ನುವುದು ಅರ್ಥವಲ್ಲ, ಬದಲಿಗೆ ರೈತರು ತಾಳ್ಮೆಯಿಂದ ಇದ್ದಾರೆ. ಸಮಪರ್ಕವಾಗಿ ನೀರು ಹರಿಸದೇ ಹೋದಲ್ಲಿ ಮೇಲ್ಭಾಗದಲ್ಲಿ ಎಲ್ಲಾ ರೈತರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ ? ರಾಯಚೂರು | ಗ್ರಾಮಗಳ ಸಮಗ್ರ ಅಭಿವೃದ್ಧಿ ಒತ್ತಾಯಿಸಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ಸಿರವಾರ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರೈತಪರ ಸಂಘಟನೆ ಮುಖಂಡರು ಹಾಗೂ ಕನ್ನಡಪರ ಹಾಗೂ ದಲಿತಪರ ಸಂಘಟನೆ ಮುಖಂಡರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿದರು.
ಬಿಗಿ ಪೋಲಿಸ್ ಬಂದೋಬಸ್ತ್ : ರೈತರು ಹಮ್ಮಿಕೊಂಡಿರುವ ಹೋರಾಟದಲ್ಲಿ ಯಾವುದೆ ಅಹಿತಕರ ಘಟನೆ ಜರುಗದಂತೆ ಸಿರವಾರ ಸಿಪಿಐ ಶಶಿಕಾಂತ್.ಎ, ಸಿರವಾರ ಪಿ.ಎಸ್.ಐ ಗುರುಚಂದ್ರ ಯಾದವ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿತ್ತು.