- ಆರೋಪಿಯನ್ನು ಬಂಧಿಸದೆ ಕೇಂದ್ರ ಸರ್ಕಾರದಿಂದ ಪಕ್ಷಪಾತ
- ಕೇಂದ್ರದ ವರ್ತನೆ ಹೆಣ್ಣು ಮಕ್ಕಳು ಸುರಕ್ಷಿತರಲ್ಲ ಎಂಬುವಂತಿದೆ
ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ನಡೆಸಿದ ಲೈಂಗಿಕ ದೌರ್ಜನ್ಯ ವಿರೋಧಿಸಿ ಮತ್ತು ಆತನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಗಳ ಐಕ್ಯಾತ ಒಕ್ಕೂಟ ಹಾಗೂ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳು ಉಡುಪಿಯಲ್ಲಿ ಪ್ರತಿಭಟನೆ ನಡೆಸಿವೆ.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರೊ. ಫಣಿರಾಜ್, “ಹೀನಾಯ ದೌರ್ಜನ್ಯ ನಡೆದಾಗ ಗ್ರಾಮ ಗ್ರಾಮದಲ್ಲಿ ಪ್ರತಿಭಟನೆ ನಡೆಯಬೇಕು. ಆ ಕಾರಣಕ್ಕಾಗಿ ಉಡುಪಿ ಇಂದು ಪ್ರತಿಭಟಿಸುತ್ತಿದೆ. ಬಿಜೆಪಿ ಸರ್ಕಾರದ ಪಾಪದ ಕೊಡ ತುಂಬಿರುವುದು ಮಾತ್ರವಲ್ಲ, ಯುಮುನಾ, ಗಂಗೆ ಎಲ್ಲವೂ ಪಾಪದಿಂದ ತುಂಬಿ ಹೋಗಿದೆ. ನದಿ ನೀರನ್ನು ಕಲುಷಿತಗೊಳಿಸಿದ ಹಾಗೆ ಜನರ ಮನಸ್ಸನ್ನು ಕಲುಷಿತಗೊಳಿಸಲಾಗುತ್ತಿದೆ” ಎಂದು ಆರೋಪಿಸಿದರು.
ರೈತರ ಅನ್ನ ಕಸಿಯುವ ಕರಾಳ ಕೃಷಿ ಕಾಯಿದೆ ಜಾರಿಗೆ ತಂದಿದ್ದರು. ರೈತರ ನೆಲ ಕಸಿಯಲು ಕಾನೂನು ತರಲಾಗಿತ್ತು. ಒಂದು ವರ್ಷ ಪ್ರತಿಭಟನೆ ನಡೆಸಲಾಯಿತು. ಅವರ ಮೇಲೆ ಪೋಲಿಸ್ ದೌರ್ಜನ್ಯ ಮಾಡಲಾಯಿತು. ಕೊನೆಗೂ ನ್ಯಾಯ ಗೆದ್ದಿತು. ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಪದಕಗಳು ಬಂದಾಗ ಪೋಟೋ ತೆಗೆಸಿಕೊಳ್ಳುವ ಪ್ರಧಾನಿ, ಸರ್ಕಾರಿ ಪ್ರಭಾವಿ ವ್ಯಕ್ತಿಯಿಂದ ಅನ್ಯಾಯವಾದಾಗ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕಿತ್ತು. ಇವರ ವರ್ತನೆಯಿಂದ ಯಾವ ಹೆಣ್ಣು ಮಕ್ಕಳು ಸುರಕ್ಷಿತರಲ್ಲ ಎಂಬುವುದು ಸಾಬೀತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ವಿದ್ಯುತ್ ಬಿಲ್ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ
ಇದ್ರಿಸ್ ಹೂಡೆ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳು ಮೋದಿ ಸರ್ಕಾರದಲ್ಲಿ ಸಾಮಾನ್ಯವಾಗಿವೆ. ಇವರ ಧೈಯ ಬೇಟಿ ಪಡಾವೋ ಅಲ್ಲ ಬೇಟಿ ಪಟಾವೋ ಆಗಿದೆ. ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಯ ಶವವನ್ನು ಹೇಳದೆ ಕೇಳದೆ ಸುಡಲಾಗುತ್ತದೆ. ಹಲವು ಪ್ರಕರಣದಲ್ಲಿ ಇವರ ದೌರ್ಜನ್ಯ ಸಾಬೀತಾಗಿದೆ ಎಂದು ಆರೋಪಿಸಿದರು.
ದೇಶದ ಪ್ರತಿಷ್ಠಿತ ಕ್ರೀಡಾ ಪಟುಗಳ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತದೆ. ಪ್ರತಿಭಟಿಸಿದಾಗ ದೌರ್ಜನ್ಯ ಎಸಗುತ್ತಾರೆ. ಉಡುಪಿಯ ಸಂಸದೆ ಮಹಿಳೆ ಆದರೆ ಮಹಿಳಾ ದೌರ್ಜನ್ಯದ ಕುರಿತು ಮಾತನಾಡಲು ಉತ್ಸುಕರಿಲ್ಲ, ಅವರು ಹೆಣದ ಕುರಿತು ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.