- ವಿಧಾನಸಭೆ ಚುನಾವಣೆ ದಿನದಂದು ಸುಳ್ಳು ವಿವಾಹ ದಿನಾಂಕ ಮುದ್ರಣ
- ʼಸುಳ್ಳು ಆಹ್ವಾನ ಪತ್ರಿಕೆ ಮುದ್ರಿಸುವ ಮುದ್ರಕರ ಮೇಲೂ ಕ್ರಮʼ
ವಿಧಾನಸಭೆ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಮತಗಟ್ಟೆ ಅಧಿಕಾರಿ (ಪಿಆರ್ಒ) ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು (ಎಪಿಆರ್ಒ) ಸುಳ್ಳು ವಿವಾಹ ಆಮಂತ್ರಣ ಪತ್ರಿಕೆ ಮುದ್ರಿಸಿ ಸಲ್ಲಿಸುತ್ತಿರುವುದರಿಂದ ತುಮಕೂರು ಜಿಲ್ಲಾಡಳಿತಕ್ಕೆ ಸಂಕಷ್ಟ ಎದುರಾಗಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಮೇ 10ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಕರ್ತವ್ಯಗಳಿಗಾಗಿ ಸರ್ಕಾರಿ ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಈ ಮಧ್ಯೆ, ಕೆಲವು ಅಧಿಕಾರಿಗಳು ಚುನಾವಣಾ ಕರ್ತವ್ಯಗಳಿಂದ ತಪ್ಪಿಸಿಕೊಳ್ಳು ತಮ್ಮ ಅಕ್ಕ–ತಂಗಿಯರು, ಅಣ್ಣ–ತಮ್ಮಂದಿರು, ಮಕ್ಕಳು ಮತ್ತು ಕುಟುಂಬ ಸದಸ್ಯರ ವಿವಾಹ ಹಾಗೂ ಮತ್ತಿತರ ಸಮಾರಂಭ ನಡೆಯುತ್ತಿವೆ ಎಂಬಂತೆ ಆಹ್ವಾನ ಪತ್ರಿಕೆ ಮುದ್ರಿಸಿ ನೀಡುತ್ತಿದ್ದಾರೆ. ಯುವ ಅಧಿಕಾರಿಗಳು ತಮ್ಮದೇ ವಿವಾಹದ ನಕಲಿ ಆಹ್ವಾನ ಪತ್ರಿಕೆ ಸಿದ್ಧಪಡಿಸಿ ಕೊಡುತ್ತಿದ್ದಾರೆ. ಮನವಿ ಜೊತೆಗೆ ಆಹ್ವಾನ ಪತ್ರಿಕೆ ನೀಡಿ ಚುನಾವಣೆ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಸುಳ್ಳು ಆಹ್ವಾನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಭೆ ನಡೆಸಿ, “ಸುಳ್ಳು ಆಹ್ವಾನ ಪತ್ರಿಕೆ ನೀಡಿ, ಚುನಾವಣೆ ಕೆಲಸದಿಂದ ತಪ್ಪಿಸಿಕೊಂಡರೆ ಕೆಲಸದಿಂದ ಅಮಾನತು ಮಾಡಲಾಗುವುದು” ಎಂದು ಎಚ್ಚರಿಸಿದ್ದಾರೆ.
“ವಿಧಾನಸಭೆ ಚುನಾವಣೆ ನಡೆಯುವ ದಿನ ಹಾಗೂ ಹಿಂದಿನ ದಿನದ ವಿವಾಹ ದಿನಾಂಕ ನಮೂದಿಸಿ ಆಹ್ವಾನ ಪತ್ರ ಸಿದ್ಧಪಡಿಸಿ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
“ಆಹ್ವಾನ ಪತ್ರಿಕೆ ಮುದ್ರಣ ಮಾಡುವವರು ಸೂಕ್ತ ದಾಖಲೆ ಪಡೆದುಕೊಳ್ಳಬೇಕು. ಒಂದು ವೇಳೆ ದಾಖಲೆ ಇಲ್ಲದೆ, ಸುಳ್ಳು ಆಹ್ವಾನ ಪತ್ರಿಕೆ ಮುದ್ರಿಸಿಕೊಡುವ ಮುದ್ರಕರ ಮೇಲೂ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.