ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಶೇ.34ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿಯೂ ಜೆಡಿಎಸ್ ಪಕ್ಷದಿಂದ ಸ್ಥಳೀಯ, ನೇಮ್ ಅಂಡ್ ಫೇಮ್ ಹೊಂದಿರುವ ನನಗೆ ಟಿಕೇಟ್ ನೀಡಿದರೆ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವು ಖಚಿತ ಎಂದು ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ಹೇಳಿದ್ದಾರೆ.
ತುಮಕೂರಿನ ಖಾಸಗಿ ಹೊಟೇಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರು ಸ್ಪರ್ಧಿಸಿದ್ದಾಗ ಶೇ.34ರಷ್ಟು ಮತದಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸಿರುವುದು ನಿಜಕ್ಕೂ ಸಂತೋಷ ಪಡುವ ವಿಚಾರ. ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ. ಹಾಗಾಗಿ, ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷದಲ್ಲಿಯೇ ಉಳಿಸಿಕೊಳ್ಳುವಂತೆ ರಾಜ್ಯಾಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದೇನೆ” ಎಂದು ಶಾಂತಕುಮಾರ್ ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಒಕ್ಕಲಿಗ ಮತದಾರರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಕಳೆದ ಬಾರಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡರ ವಿರುದ್ಧ ಅಪಪ್ರಚಾರ ನಡೆಸಿದರೂ ಅವರಿಗೆ ಜನರು ಶೇ.47ರಷ್ಟು ಮತಗಳನ್ನು ನೀಡಿದ್ದರು. ಅದರಲ್ಲಿ ಶೇ.34ರಷ್ಟು ಮತಗಳು ಜೆಡಿಎಸ್ ಪಕ್ಷದ ಮತದಾರರಿಂದ ಬಂದಿದೆ ಎಂದರೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ. ಈಗಲೂ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ನಲ್ಲಿಯೇ ಉಳಿಸಿಕೊಂಡು. ಮತ್ತೊಮ್ಮೆ ದೇವೇಗೌಡ ರಾಗಲಿ, ಎಚ್.ಡಿ. ಕುಮಾರಸ್ವಾಮಿಯವರಾಗಲಿ ಸ್ಪರ್ಧೆ ಮಾಡಿದರೆ, ಇಲ್ಲವೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೇಟ್ ನೀಡಿದರೆ ಗೆಲುವು ನಿಶ್ಚಿತ.ಅದನ್ನು ಬಿಟ್ಟು ಜಿಲ್ಲೆಯಿಂದ ಹೊರಗಿನವರಿಗೆ ಟಿಕೇಟ್ ನೀಡಿದರೆ, ಜನತೆ ಸ್ಥಳೀಯರ ಕೈ ಹಿಡಿಯುವುದು ಸಹಜ ಎಂದರು.
ರಾಜ್ಯದ ಸರ್ಕಾರದ ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ಅಭಿವೃದ್ದಿಯನ್ನು ಮರೆತಿದೆ. ಇದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಜನತೆ ಮೋದಿಯ ಕಡೆ ನೋಡುತ್ತಿದ್ದಾರೆ. ಇದರ ಜೊತೆಗೆ ಜೆಡಿಎಸ್ ಸಹ ಕೈಜೋಡಿಸಿದೆ. ಮೋದಿ ಹವಾ ಜೊತೆಗೆ, ಜೆಡಿಎಸ್ನ ಶಕ್ತಿ ಒಗ್ಗೂಡಿದರೆ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಬಹುದು. ಹಾಗೆಯೇ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಗೆಲುವು ನಿಶ್ಚಿತ. ಕಳೆದ ಐದು ವರ್ಷಗಳಿಂದ ಜಿಲ್ಲೆಯ ಜನತೆಯ ಪರವಾಗಿ ನಿರಂತರವಾಗಿ ಜನರ ಮಧ್ಯೆ ಇದ್ದುಕೊಂಡು ಹೋರಾಟ ನಡೆಸುತ್ತಾ ಬಂದಿದ್ದೇನೆ. ಹಾಗಾಗಿ ನನಗೆ ಟಿಕೇಟ್ ನೀಡಿದರೆ ಯುವಜನರು ಒಗ್ಗೂಡಿ ನನ್ನ ಗೆಲುವಿಗೆ ಶ್ರಮಿಸುತ್ತಾರೆ ಎಂಬ ನಂಬಿಕೆ ನಮ್ಮದು ಎಂದು ಕೆ.ಟಿ. ಶಾಂತಕುಮಾರ್ ತಿಳಿಸಿದರು.
ಮಾಜಿ ಸಚಿವ ವಿ.ಸೋಮಣ್ಣ ಎಷ್ಟೇ ಸೇವೆ ಮಾಡಿದ್ದರೂ, ಹೊರಗಿನವರು ಎಂಬ ಕಾರಣಕ್ಕೆ ಜನತೆ ಅವರಿಗೆ ಮತ ನೀಡುವುದು ಕಡಿಮೆ. ಅಲ್ಲದೆ ಜಿಲ್ಲೆಗೆ ಅವರ ಕೊಡುಗೆ ಏನು ಎಂಬುದನ್ನು ನೋಡಲಿದ್ದಾರೆ. ಜನರೇ ಮಾತನಾಡಿಕೊಳ್ಳುವಂತೆ ಜಿಲ್ಲೆಗೆ ಸೋಮಣ್ಣ ಅವರ ಕೊಡುಗೆ ಶೂನ್ಯ. ಹಾಲಿ ಸಂಸದರು ನಿವೃತ್ತಿಯಾಗುತ್ತಿದ್ದಾರೆ. ಹಾಗಾಗಿ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವುದು ಸೂಕ್ತ. ಈ ನಿಟ್ಟಿನಲ್ಲಿ ರಾಜ್ಯನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಿ, ಜೆಡಿಎಸ್ ಪಕ್ಷದಲ್ಲಿಯೇ ಉಳಿಸಿಕೊಂಡರೆ ಗೆಲುವು ನಮ್ಮದಾಗಲಿದೆ ಎಂದು ಕೆ.ಟಿ.ಶಾಂತಕುಮಾರ್ ಹೇಳಿದರು.