ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ₹2,000ದ ಚುನಾವಣೆ ಇದಲ್ಲ. ದೇಶದ ಭವಿಷ್ಯ ರೂಪಿಸುವ ಈ ಚುನಾವಣೆ ಪ್ರಧಾನಿ ಮೋದಿ ಅವರನ್ನು ಒಪ್ಪಿದೆ. ಜೆಡಿಎಸ್ ಬಿಜೆಪಿ ಎರಡೂ ಪಕ್ಷದ ಕಾರ್ಯಕರ್ತರು ಮೋದಿ ಕೈ ಬಲಪಡಿಸಲು ಕಟಿಬದ್ದರಿದ್ದಾರೆ. ಮುಖಂಡರು ಒಗ್ಗೂಡಿ ಕೆಲಸ ಮಾಡಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಗುಬ್ಬಿ ಕ್ಷೇತ್ರದಿಂದ ನೀಡಬೇಕು ಎಂದು ಲೋಕಸಭಾ ಎನ್ಡಿಎ ಅಭ್ಯರ್ಥಿ ವಿ ಸೋಮಣ್ಣ ಮನವಿ ಮಾಡಿದರು.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಹೊರ ವಲಯದ ಬಾಲಾಜಿ ಕನ್ವೆಕ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಂಟಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
“ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆಯ ಜತೆಗೆ ಮೂಲ ಸೌಕರ್ಯಗಳ ಪಟ್ಟಿಯನ್ನು ಈಗಾಗಲೇ ತಯಾರಿಸಲಾಗಿದೆ. ಪ್ರಧಾನಿ ಕಚೇರಿಯಿಂದ ಕೇಳಿದ ನೂರು ದಿನದ ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕಿನ ಅಭಿವೃದ್ದಿ ಕೆಲಸಗಳನ್ನು ಸೇರಿಸಲಾಗಿದೆ” ಎಂದು ತಿಳಿಸಿದರು.
“ಸ್ಥಳೀಯವಾಗಿ ಗುಬ್ಬಿ ತಾಲೂಕಿನ ಚಿತ್ರಣ ನನ್ನ ಬಳಿ ಇದೆ. ಇಲ್ಲಿನ ರೈಲ್ವೆ ಮೇಲ್ಸೇತುವೆ, ಎರಡೂ ಪಕ್ಷದ ಕಾರ್ಯಕರ್ತರ ಕಷ್ಟಸುಖ ಆಲಿಸುವುದು ಹಾಗೂ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡುವುದರ ಜತೆಗೆ ಜುಂಜಪ್ಪನಹಟ್ಟಿ ಅಭಿವೃದ್ಧಿ ಮಾಡಲಾಗುವುದು” ಎಂದು ಭರವಸೆ ನೀಡಿದರು.
“ಎಚ್ಎಎಲ್ ಘಟಕದಿಂದ ಬಂದ ಸಿ ಆರ್ ಫಂಡ್ ಹಣವನ್ನು ಗ್ರಾಮೀಣಾಭಿವೃದ್ಧಿ ಕೆಲಸಕ್ಕೆ ಬಳಸಲು ಸಿದ್ಧವಿದ್ದು, ಜಿಲ್ಲೆಯ ಜನರ ಬಾಂಧವ್ಯ ನನನ್ನು ಕಟ್ಟಿಹಾಕಿದೆ. ಮುಂದಿನ ರಾಜಕಾರಣ ಅಂತ್ಯದವರೆಗೆ ತುಮಕೂರು ಜಿಲ್ಲೆಯಲ್ಲಿ ಕಳೆಯುವ ಇಂಗಿತ ವ್ಯಕ್ತಪಡಿಸಿ ಏಪ್ರಿಲ್ 3ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಮಾಜಿ ಸಿಎಂಗಳಾದ ಯಡಿಯೂರಪ್ಪ ಹಾಗೂ ಎಚ್ ಡಿ ಕುಮಾರಸ್ವಾಮಿ ಬರಲಿದ್ದಾರೆ” ಎಂದು ತಿಳಿಸಿದರು.
ಶಾಸಕ ಬಿ ಸುರೇಶ್ ಗೌಡ ಮಾತನಾಡಿ, “ಕಾಂಗ್ರೆಸ್ ಈಗಿನ ಅಭ್ಯರ್ಥಿ ಮುದ್ದಹನುಮೇಗೌಡರಿಗೆ ಈ ಹಿಂದೆ ಟಿಕೆಟ್ ತಪ್ಪಿಸಿದ ಪರಮೇಶ್ವರ್ ಅವರೇ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದು ಹರಕೆ ಕುರಿಯಾಗಿ ಎರಡನೇ ಬಾರಿಗೆ ಬಲಿ ಕೊಡಲಿದ್ದಾರೆ. ಇವರ ಪಕ್ಷದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದೆ ನಮ್ಮಲ್ಲಿದ್ದ ಗೌಡರಿಗೆ ಮಂಕು ಬೂದಿ ಎರಚಿ ಕರೆದುಕೊಂಡು ಹೋಗಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಅರು ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಬರುವುದಿಲ್ಲ. ಗುಬ್ಬಿ ಶಾಸಕರೇ ನಮ್ಮಲ್ಲಿ ಲೀಡ್ ಬರುವುದಿಲ್ಲವೆಂದು ಹೇಳಿಕೊಂಡಿದ್ದಾರೆ. ಇವೆಲ್ಲವನ್ನು ಗಮನಿಸಿದರೆ ಬಿಜೆಪಿ ಗೆಲುವು ನಿಶ್ಚಿತ. ಸೋಮಣ್ಣ ಕೇಂದ್ರದಲ್ಲಿ ಸಚಿವರಾಗುತ್ತಾರೆ. ಹೇಮಾವತಿ ನೀರನ್ನು ನಮ್ಮಿಂದ ಕಿತ್ತುಕೊಳ್ಳುವ ಯತ್ನ ಮಾಡುತ್ತಿರುವುದನ್ನು ಜನತೆ ಮರೆತಿಲ್ಲ. ನಾವೂ ಕೂಡಾ ಜೀವ ಕೊಟ್ಟೆವು ನೀರು ಹರಿಸುವ ಎಕ್ಸ್ಪ್ರೆಸ್ ಕೆನಾಲ್ ಮಾಡಲು ಬಿಡುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು ಮಾತನಾಡಿ, “ಮೋದಿ ಅವರನ್ನು ಪ್ರಧಾನಿ ಮಾಡಲು ದೇವೇಗೌಡರು ಒಪ್ಪಿ ಮೈತ್ರಿ ಮಾಡಿಕೊಂಡಿದ್ದಾರೆ. ಕುಮಾರಣ್ಣ ಅವರ ಗೌರವ ಉಳಿಸಲು ಎಲ್ಲ ಬೂತ್ ಮಟ್ಟದಲ್ಲಿ ಅಣ್ಣತಮ್ಮರಂತೆ ಕೆಲಸ ಮಾಡಬೇಕಿದೆ. ಕೇವಲ ನಂಬರ್ ಗೇಮ್ನಲ್ಲಿ ಗೆಲುವು ಪಡೆದ ಇಲ್ಲಿನ ಶಾಸಕರಿಗೆ ಅವರ ವಿರೋಧದ ಮತದ ಲೆಕ್ಕ ತೋರಿಸಬೇಕಿದೆ” ಎಂದರು.
ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ, “ಹಾಲು ಜೇನು ಬೆರೆಯುವ ರೀತಿ ಎರಡೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ವೈಮನಸ್ಯ ಬಿಟ್ಟು ಸೋಮಣ್ಣ ಅವರ ಗೆಲುವಿಗೆ ಶ್ರಮಿಸಲಿದ್ದಾರೆ. ನಂತರದಲ್ಲಿ ಬಿಕ್ಕೇಗುಡ್ಡ ಹಾಗೂ ಹಾಗಲವಾಡಿ ಕೆರೆಗಳಿಗೆ ನೀರು ಹರಿಸುವ ಕೆಲಸ ತ್ವರಿತ ಆಗಬೇಕಿದೆ. ಜೊತೆಗೆ ಎತ್ತಿನಹೊಳೆ ಯೋಜನೆಯಲ್ಲಿ ನಮ್ಮ ತಾಲೂಕಿಗೆ ನೀರು ಕೊಡಬೇಕಿದೆ” ಎಂದು ಬೇಡಿಕೆ ಇಟ್ಟರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, “ಪ್ರಾದೇಶಿಕ ಪಕ್ಷ ಜೆಡಿಎಸ್ ಇಡೀ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಕ್ಕಿಂತ ಉನ್ನತವಾಗಿ ಬೆಳೆದ ಇತಿಹಾಸವಿದೆ. ದೇಶದ ಹಿತಕ್ಕೆ ಮೈತ್ರಿಗೆ ಮುಂದಾದ ಜೆಡಿಎಸ್-ಬಿಜೆಪಿಯಿಂದ 50 ಸಾವಿರಕ್ಕೂ ಅಧಿಕ ಲೀಡ್ ಸೋಮಣ್ಣ ಅವರಿಗೆ ಸಿಗುವಂತೆ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಧೀರಜ್ ಕಾಂಗ್ರೆಸ್ ಸೇರುವ ಸಾಧ್ಯತೆ!
ಕಾರ್ಯಕ್ರಮದಲ್ಲಿ ಸಂಸದ ಜಿ ಎಸ್ ಬಸವರಾಜು, ವಿಧಾನ ಪರಿಷತ್ ಸದಸ್ಯ ಚಿದಾನಂದಮೂರ್ತಿ, ಬಿಜೆಪಿ ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕೀರಯ್ಯ, ಮುಖಂಡರಾದ ವೈ ಎಚ್ ಹುಚ್ಚಯ್ಯ, ಹೊನ್ನಗಿರಿಗೌಡ, ಬೆಟ್ಟಸ್ವಾಮಿ, ಯೋಗಾನಂದಕುಮಾರ್, ಚಂದ್ರಶೇಖರಬಾಬು, ಎನ್ ಸಿ ಪ್ರಕಾಶ್, ಹಾರನಹಳ್ಳಿ ಪ್ರಭಣ್ಣ, ಎಸ್ ನಂಜೇಗೌಡ, ಬ್ಯಾಟರಂಗೆಗೌಡ, ಎಚ್ ಟಿ ಭೈರಪ್ಪ, ಗಂಗರಾಜು, ಚಂದ್ರಶೇಖರ್, ಸಿದ್ದಗಂಗಮ್ಮ, ಕೊಂಡ್ಲಿ ಕರಿಯಪ್ಪ, ಜಿ ಡಿ ಸುರೇಶಗೌಡ, ಪೂಜಾರ್ ಯರಪ್ಪ, ಯತೀಶ್ ಸೇರಿದಂತೆ ಇತರರು ಇದ್ದರು.