9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದು, ಆಕೆಯ ಚಲನವಲನ ಹಾಗೂ ಆರೋಗ್ಯದ ಬಗ್ಗೆ ಗಮನವಹಿಸದ ಹಾಸ್ಟೆಲ್ ವಾರ್ಡನ್ ನಿವೇದಿತಾ ಅವರನ್ನು ಅಮಾನತು ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಿವಾಸಿಯಾಗಿರುವ ವಿದ್ಯಾರ್ಥಿನಿ ತುಮಕೂರು ಜಿಲ್ಲೆಯ ಮಧುಗಿರಿಯ ಹಾಸ್ಟೆಲ್ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆ 7 ತಿಂಗಳ ಗರ್ಭಿಣಿಯಾಗಿರುವುದು ಈಗ ಗೊತ್ತಾಗಿದೆ. ಆಕೆಯನ್ನು ಸರಿಯಾಗಿ ಗಮನಿಸದೆ, ಆಕೆ ಗರ್ಭಿಣಿಯಾಗಿದ್ದರು ಆ ಬಗ್ಗೆ ತಿಳಿದುಕೊಳ್ಳದ ವಾರ್ಡನ್ನನ್ನು ಅಮಾನತು ಮಾಡಲಾಗಿದೆ.
ಇತ್ತೀಚೆಗೆ, ವಿದ್ಯಾರ್ಥಿನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತನ್ನ ತಾಯಿಯೊಂದಿಗೆ ವಿದ್ಯಾರ್ಥಿನಿ ಆಸ್ಪತ್ರೆಗೆ ಹೋದಾಗ, ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಆಕೆಗೆ ಪರಿಚಿತನಿದ್ದ ಯುವಕನೇ ಆಕೆ ಗರ್ಭಿಣಿಯಾಗಲು ಕಾರಣವೆಂದು ಹೇಳಲಾಗಿದೆ.
ಬಾಲಕಿಯ ಚಲನವಲನವನ್ನು ಗಮನಿಸದೆ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ಹಾಸ್ಟೆಲ್ ವಾರ್ಡನ್ ನಿವೇದಿತಾ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತಿ ಸಿಇಒ ಜಿ ಪ್ರಭು ಆದೇಶ ಹೊರಡಿಸಿದ್ದಾರೆ.