ಕರ್ತವ್ಯಲೋಪ ಆರೋಪದ ಮೇಲೆ ತುಮಕೂರು ಜಿಲ್ಲೆಯ ಎರಡು ಪೊಲೀಸ್ ಠಾಣೆಗಳ ಮೂವರು ಸಬ್ಇನ್ಸ್ಪೆಕ್ಟರ್ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ತುರುವೇಕೆರೆ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಗಣೇಶ್, ರಾಮಚಂದ್ರಯ್ಯ ಹಾಗೂ ಮುಖ್ಯ ಪೇದೆ ಹೆಡ್ ಕಾನ್ಸ್ಟೇಬಲ್ ರಘುನಂದನ್ ಅಮಾನತುಗೊಂಡಿದ್ದಾರೆ. ಅಲ್ಲದೆ, ಮಧುಗಿರಿ ತಾಲೂಕಿನ ಬಡವನಹಳ್ಳಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ನಾಗರಾಜು ಮತ್ತು ಎಎಸ್ಐ ಸುರೇಶ್ ಕೂಡ ಅಮಾನತಾಗಿದ್ದಾರೆ.
ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಲಿತರ ಮೇಲೆ ಪ್ರಬಲ ಜಾತಿಯವರು ಹಲ್ಲೆ ಮಾಡಿದ್ದಾರೆಂಮದು ದೂರು ದಾಖಲಾಗಿತ್ತು. ಆದರೆ, ಪೊಲೀಸರು ಎಫ್ಐಆರ್ ದಾಖಲಿಸಿರಲಿಲ್ಲ. ಹೀಗಾಗಿ, ಠಾಣೆಯ ಪಿಎಸ್ಐ ಮತ್ತು ಎಎಸ್ಐ ಅಮಾನತು ಮಾಡಲಾಗಿದೆ.
ಮಹಿಳೆಯೊಬ್ಬರು ಕಾಣೆಯಾಗಿದ್ದಾರೆಂದು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೂ, ಪ್ರಕರಣ ದಾಖಲಿಸಿಕೊಳ್ಳದೆ ಬೇಜಬ್ದಾರಿ ಧೋರಣೆ ತೋರಿದ ಆರೋಪದ ಮೇಲೆ ಠಾಣೆಯ ಇಬ್ಬರು ಪಿಎಸ್ಐ ಮತ್ತು ಪೇದೆಯನ್ನು ಅಮಾನತು ಮಾಡಲಾಗಿದೆ.