ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನ ವರ್ಗಾವಣೆಯನ್ನು ವಿರೋಧಿಸಿ ಹಾಗೂ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ಕೋಡಿ ಬೆಂಗ್ರೆ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ ಈಗಾಗಲೇ ಶಿಕ್ಷಕರ ಕೊರತೆಯಿದೆ. ಹೀಗಿದ್ದರೂ ಇದೀಗ ಮತ್ತೊಬ್ಬರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿರುವುದಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಒಟ್ಟು ಎಂಭತ್ತು ವಿದ್ಯಾರ್ಥಿಗಳು ಕಲಿಯುತ್ತಿದ್ದು ಈ ಮುಂಚೆ ಮೂವರು ಶಿಕ್ಷಕರಿದ್ದರು. ಇದೀಗ ಅವರಲ್ಲಿ ಒಬ್ಬರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
“ಸರ್ಕಾರಿ ಶಾಲೆಯನ್ನು ನೇರವಾಗಿ ಮುಚ್ಚದೆ ಶಿಕ್ಷಕರನ್ನು ವರ್ಗಾವಣೆ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹುನ್ನಾರ ನಡೆಯುತ್ತಿದೆ” ಎಂದು ಸ್ಥಳೀಯ ಮುಖಂಡ ರಮೇಶ್ ತಿಂಗಳಾಯ ಆರೋಪಿಸಿದ್ದಾರೆ.
“ಶಿಕ್ಷಣಾಧಿಕಾರಿಗಳಿಗೆ, ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಆಸಕ್ತಿ ಇದ್ದರೆ ಅವರು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಿ. ಅದು ಬಿಟ್ಟು ಶಿಕ್ಷಣವನ್ನು ಇಂದು ಉದ್ಯೋಗಕ್ಕಾಗಿ ಬಳಸಲಾಗುತ್ತಿರುವುದು ಖೇದಕರ” ಎಂದರು.
“ಸರ್ಕಾರಿ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ. ಈ ಮುಂಚೆ ಕೌನ್ಸಿಲಿಂಗ್ ನಡೆಸುವಾಗ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ನಮ್ಮನ್ನು ಬಂಧಿಸುವ ಪ್ರಯತ್ನ ನಡೆದಿತ್ತು. ನ್ಯಾಯಯುತವಾದ ಬೇಡಿಕೆಯಿಟ್ಟಾಗ ನಮ್ಮನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಮತ್ತೆ ನಮ್ಮ ಶಿಕ್ಷಕರೊಬ್ಬರನ್ನು ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಎಂಭತ್ತು ಮಕ್ಕಳು ಎರಡು ಶಿಕ್ಷಕರಿಂದ ಕಲಿಯುವುದು ಹೇಗೆ” ಎಂದು ಪ್ರಶ್ನಿಸಿದರು.
“ನಮಗೆ ನ್ಯಾಯ ದೊರಕಿಸಿಕೊಡಬೇಕು. ಏಳು ಶಿಕ್ಷಕರು ಈ ಶಾಲೆಗೆ ಬರಬೇಕು. ಬಡ ಕೂಲಿ ಕಾರ್ಮಿಕರ ಮಕ್ಕಳು, ಮೀನುಗಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯಬೇಕು. ಅಲ್ಲಿಯವರೆಗೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು” ಎಂದರು.
“ಶಿಕ್ಷಣ ಇಲಾಖೆಯಲ್ಲಿ ಶೈಕ್ಷಣಿಕವಾಗಿ ಇರುವ ಎಲ್ಲ ಕಾನೂನುಗಳನ್ನು ಮರು ಪರಿಶೀಲಿಸುವವರೆಗೆ ವರ್ಗಾವಣೆ ಪ್ರಕ್ರಿಯೆಯನ್ನು ತಡೆ ಹಿಡಿದು ಶಾಲೆಯ ಉಳಿವಿಗಾಗಿ ಸಹಕರಿಸಬೇಕು” ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಭೂಸ್ವಾಧೀನ ಹಿಂಪಡೆಯುವಂತೆ ರೈತರ ಒತ್ತಾಯ
“2021-22ರಲ್ಲಿ ವರ್ಗಾವಣೆಯಾದ ಶಿಕ್ಷಕರ ಬದಲಿಗೆ ಇನ್ನೋರ್ವ ಶಿಕ್ಷಕರನ್ನು ನೀಡದೆ ಇದ್ದಲ್ಲಿ ಅನಿರ್ದಿಷ್ಟ ಕಾಲದವರೆಗೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದು. ಇದರಿಂದಾಗುವ ಮಕ್ಕಳ ಶೈಕ್ಷಣಿಕ ತೊಂದರೆಗೆ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಸರ್ಕಾರವೇ ನೇರ ಹೊಣೆಯಾಗಲಿದೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಪೋಷಕರು ಸೇರಿದಂತೆ ನೂರಾರು ಮಂದಿ ಇದ್ದರು.