ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಮೋರಟಗಿ ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಮಾಡಿ ಆದೇಶಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಮೈಬೂಬಸಾಬ್ ಕಣ್ಣಿ ಮತ್ತು ಗ್ರಾಮಸ್ಥರು ಸ್ಥಳೀಯ ಶಾಸಕ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಕಾಂಗ್ರೆಸ್ ಮುಖಂಡ ಮೈಬೂಬಸಾಬ್ ಪತ್ರಿಕಾ ಹೇಳಿಕೆ ನೀಡಿದ್ದು, “ತಾಲೂಕಿನ ಗ್ರಾಮಗಳಾದ ಕುಳೇಕುಮಟಗಿ, ಬಗಲೂರ, ಹಾವಳಗಿ, ಕಕ್ಕಳಮೇಲಿ, ಹಂಚಿನಾಳ, ಜಾಟ್ನಳ, ಬಿಸಾನಾಳ, ಕೆರೂರ ಸೇರಿದಂತೆ ಹತ್ತು ಹಲವಾರು ಹಳ್ಳಿಗಳ ವ್ಯವಹಾರ ವಹಿವಾಟಿಗೆ, ವ್ಯಾಪಾರಕ್ಕೆ ಮೋರಟಗಿ ಗ್ರಾಮವು ಕೇಂದ್ರ ಬಿಂದುವಾಗಿದೆ. ಸ್ಥಳೀಯವಾಗಿ 14 ಸಾವಿರಕ್ಕಿಂತಲೂ ಅಧಿಕ ಜನಸಂಖ್ಯೆ ಹೊಂದಿರುವ ಮೋರಟಗಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಿ ಆದೇಶಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಸಿಂಧಗಿ ತಾಲೂಕಿಗೆ ಮೋರಟಗಿ ಗ್ರಾಮ 22 ಕಿ ಮೀ ಸಮೀಪದಲ್ಲಿತ್ತು. ಇದೀಗ 45 ಕಿ ಮೀ ದೂರದ ಆಲಮೇಲ ತಾಲೂಕಿಗೆ ಸೇರ್ಪಡೆಗೊಂಡಿದ್ದರಿಂದ ಸರ್ಕಾರಿ ಸೌಲಭ್ಯಕ್ಕೆ ಕಚೇರಿಗಳಿಗೆ ತೆರಳಲು ವೃದ್ಧರು, ಅಂಗವಿಕಲರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ರೈತರಿಗೆ, ವೃದ್ಧರಿಗೆ, ಅಂಗವಿಕಲರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೋರಟಗಿ ಗ್ರಾಮವನ್ನು ಹೋಬಳಿ ಗ್ರಾಮವನ್ನಾಗಿ ಆದೇಶಿಸಲು ಹಿಂದಿನ ಶಾಸಕರಿಗೂ, ಸಚಿವರಿಗೂ ಹತ್ತು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಆಶ್ವಾಸನೆಗಳ ಸುರಿಮಳೆಗಳು ಬಂದಿವೆಯೇ ವಿನಃ ಕಾರ್ಯರೂಪಕ್ಕೆ ಬಂದಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಹಿಳೆಯ ವಿವಸ್ತ್ರ ಪ್ರಕರಣ, ಹೆಣ್ಣು ಭ್ರೂಣ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ
“ನೂತನ ಶಾಸಕರಾಗಿ ಆಯ್ಕೆಯಾದ ಅಶೋಕ ಮನಗೂಳಿ ಅವರಿಗೂ ಕೂಡಾ ಈಗಾಗಲೇ ಈ ಕುರಿತು ಮನವಿ ಮಾಡಿದ್ದೇವೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಮೋರಟಗಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿಸುವುದಾಗಿ ಭರವಸೆ ನೀಡಿದ್ದಾರೆ. ಆದಷ್ಟು ಬೇಗನೆ ಸರ್ಕಾರಕ್ಕೆ ಒತ್ತಾಯಿಸಿ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಬೇಕು” ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರುಗಳಾದ ಸತ್ಯನಾರಾಯಣ ತಿವಾರಿ, ವೀರನಗೌಡ ಪಾಟೀಲ, ಮುತ್ತಪ್ಪ ಸಿಂಗೆ, ಸಲೀಮ್ ಕಣ್ಣಿ ಸೇರಿದಂತೆ ಪ್ರಗತಿಪರ ರೈತರು, ಗ್ರಾಮಸ್ಥರು ಇದ್ದರು.