ಲೋಕಸಭೆ ಚುನಾವಣೆಗಾಗಿ ಎಲ್ಲ ಪಕ್ಷಗಳು ಭರ್ಜರಿ ಸಿದ್ಧತೆಯನ್ನು ನಡೆಸುತ್ತಿವೆ. ಬಿಜೆಪಿ 2019ರ ಚುನಾವಣೆಗೂ ಮುನ್ನ ನಡೆಸಿದಂತೆ ಈ ಬಾರಿಯೂ ಸಿದ್ಧತೆಯನ್ನು ನಡೆಸುತ್ತಿದೆ. “ಚುನಾವಣೆಯಲ್ಲಿ ಗೆಲ್ಲಲು ಪುಲ್ವಾಮಾ 2 ಮತ್ತು ಬಾಲಕೋಟ್ 2ರ ತಯಾರಿ ನಡೆಸಲಾಗುತ್ತಿದೆ” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
“ಬಿಜೆಪಿ ಸರ್ಕಾರ ಈಗ ಮತ್ತೆ ನಮ್ಮ ದೇಶದ ಮೇಲೆ ಭಯೋತ್ಪಾದನಾ ದಾಳಿ ಮಾಡಿಸಿ ಅದರ ಲಾಭವನ್ನು ಚುನಾವಣೆಯಲ್ಲಿ ಪಡೆಯಲು ತಯಾರಿ ನಡೆಸುತ್ತಿದೆ. ಪುಲ್ವಾಮಾ ಮತ್ತು ಬಾಲಕೋಟ್ ರೀತಿಯಲ್ಲೇ ದಾಳಿ ಮಾಡಿಸಲು ನಡೆಯುತ್ತಿರುವ ತಯಾರಿ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ತನಗೆ ಮಾಹಿತಿ ನೀಡಿದ್ದಾರೆ. ಆದರೆ ನಾನು ಆ ವ್ಯಕ್ತಿ ಹೆಸರು ಹೇಳಲಾಗುವುದಿಲ್ಲ” ಎಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.
“ಪುಲ್ವಾಮಾ ರೀತಿಯ ಎರಡನೇ ದಾಳಿಯನ್ನು ಅಯೋಧ್ಯೆ ರಾಮ ಮಂದಿರದ ಮೇಲೆ ಮಾಡಿಸಲಾಗುತ್ತದೆ. ಇದನ್ನು ಜೈಶ್-ಎ-ಮೊಹಮ್ಮದ್ ಅಥವಾ ಅಲ್ಕೈದಾ ಮೂಲಕ ಮಾಡಿಸಲಾಗುತ್ತದೆ. ಇನ್ನು ಬಾಲಕೋಟ್ ರೀತಿಯ ದಾಳಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿಯಿದೆ” ಅಂತ ಹಿರಿಯ ವಕೀಲರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ತನಿಖಾ ಸಂಸ್ಥೆಗಳ ದಾಳಿಗೂ 14 ಸಂಸ್ಥೆಗಳ ದೇಣಿಗೆಗೂ ನಂಟು?
“ಅಷ್ಟಕ್ಕೂ ಈ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನ ನಾವು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಈ ದಾಳಿ ಮಾಡುವುದಲ್ಲ. ಬಾಲಕೋಟ್ ದಾಳಿ ಮಾಡಿ ‘ನಾವು ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ಮಾಡಿದ್ವಿ’ ಅಂತ ತೋರಿಸಲು ಪ್ರಯತ್ನ ಹೇಗೆ ಮಾಡಿದ್ದರೋ ಅದೇ ರೀತಿ ನಾವು ಪಿಒಕೆ ಮೇಲೆ ದಾಳಿ ಮಾಡಿದ್ವಿ ಅಂತ ತೋರಿಸಲು ಮಾತ್ರ ಈ ಬಾಲಕೋಟ್ ರೀತಿಯ ದಾಳಿ ಮಾಡಿಸಲಾಗುತ್ತದೆ” ಎಂದು ಕೇಂದ್ರ ಬಿಜೆಪಿ ಸರ್ಕಾರವನ್ನು ನೇರವಾಗಿ ಉಲ್ಲೇಖಿಸದೆ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಇನ್ನು “ಬಾಲಕೋಟ್ನಲ್ಲಿ ನಾವು ಬಾಂಬ್ ದಾಳಿ ಮಾಡಿದ್ದೇವೆ ಅಂತ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ನಿರ್ದಿಷ್ಟವಾಗಿ ಎಲ್ಲಿ ದಾಳಿ ಮಾಡಲಾಗಿದೆ, ಆ ಬಾಂಬ್ ದಾಳಿಯಿಂದಾಗಿ ಏನಾದರೂ ಆಗಿದೆಯೇ ಎಂಬ ಮಾಹಿತಿ ಯಾರಿಗೂ ತಿಳಿದಿಲ್ಲ. ನಾವು ಬಾಲಕೋಟ್ ದಾಳಿ ಮಾಡಿದ್ವಿ ಎಂದು ಹೇಳಿ 2019ರಲ್ಲಿ ಚುನಾವಣೆಯಲ್ಲಿ ಗೆದ್ದಿರುವುದು ಮಾತ್ರ ಸತ್ಯ. ಈ ಮಾತನ್ನೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್, ಬಿಜೆಪಿಯ ಸತ್ಯಪಾಲ್ ಮಲಿಕ್ ಅವರು ಹೇಳಿದ್ದರು. ಈ ಜನರು ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡಿಸುತ್ತಾರೆ ಎಂದು ಹೇಳಿದ್ದರು. ಅದು ನಿಜ” ಅಂತ ಪ್ರಶಾಂತ್ ಭೂಷಣ್ ಹೇಳುತ್ತಾರೆ.
“ಪುಲ್ವಾಮಾ ರೀತಿಯ ದಾಳಿ ಬಗ್ಗೆ ಮೂರು ಗಂಟೆ ಏನೂ ಹೇಳದ, ಮಣಿಪುರದ ವಿಷ್ಯದಲ್ಲಿ ಮೂರು ತಿಂಗಳವರೆಗೂ ಏನೂ ಮಾತಾನಾಡದ ಪ್ರಧಾನಿ ಮೋದಿ ಮತ್ತು 40 ಯೋಧರು ಹುತಾತ್ಮರಾದಾಗ ಸಂತೋಷದಿಂದ ಕುಣಿದಾಡಿದ ಮೋದಿಯ ಟಿವಿ ಆಂಕರ್ಗಳು ಚುನಾವಣೆಯಲ್ಲಿ ಅವರ ಪಕ್ಷ ಗೆಲ್ಲಲು ಏನು ಬೇಕಾದರೂ ಮಾಡಬಹುದು” ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? 5 ರಾಜ್ಯಗಳ ಚುನಾವಣೆಯನ್ನು ಮುಂದೂಡುವುದೇ ‘ಒಂದು ರಾಷ್ಟ್ರ ಒಂದು ಚುನಾವಣೆ’ ಗುರಿ: ಪ್ರಶಾಂತ್ ಭೂಷಣ್
“ಬಿಜೆಪಿಯ ಒಪ್ ಇಂಡಿಯಾ ಎಂಬ ಮಾಧ್ಯಮ ಸಂಸ್ಥೆ ಅಲ್ಕೈದಾ ಮತ್ತು ಜೈಶ್ ಎ ಮೊಹಮ್ಮದ್ ಅಯೋಧ್ಯೆ ರಾಮಮಂದಿರದ ಮೇಲೆ ದಾಳಿ ಮಾಡುವ ಹೇಳಿಕೆ ನೀಡಿದೆ ಎಂದು ವರದಿ ಮಾಡಿದೆ. ಹಾಗಿರುವಾಗ ಕೇಂದ್ರ ಸರ್ಕಾರ ರಾಮಮಂದಿರದಲ್ಲಿ ದಾಳಿ ಮಾಡಲು ಸಾಧ್ಯವಾಗದಂತೆ ಭದ್ರತೆಯನ್ನು ಹೆಚ್ಚಿಸಬೇಕು, ಒಂದು ವೇಳೆ ಭದ್ರತೆ ಹೆಚ್ಚಿಸದೆ ರಾಮಮಂದಿರದ ಮೇಲೆ ದಾಳಿಯಾದರೆ ನಾವು ಏನೆಂದು ಅರ್ಥ ಮಾಡಿಕೊಳ್ಳುವುದು? ದಾಳಿ ಮಾಡಿಸಲಾಗಿದೆ ಅಂತಾನ ಅಥವಾ ದಾಳಿ ಮಾಡಲು ಬಿಡಲಾಗಿದೆ ಅಂತಾನ?” ಎಂದು ವಕೀಲರು ಪ್ರಶ್ನಿಸಿದರು.
ದೇಶವನ್ನೇ ಮಣಿಪುರ ಮಾಡುವ ಯತ್ನ
“ಈ ದಾಳಿ ಅಯೋಧ್ಯೆ ಅಲ್ಲದಿದ್ದರೆ ಬೇರೆ ಎಲ್ಲಿಯಾದರೂ ನಡೆಯಬಹುದು. ಯಾಕೆಂದರೆ 2024ರ ಲೋಕಸಭೆ ಚುನಾವಣೆಯಲ್ಲಿ ಅವರೇ ಸೋಲುವುದು ಎಂಬುವುದು ಅವರಿಗೂ ತಿಳಿದಿದೆ. ನಾವು ಈಗ ನಡೆಯುವ ಎಲ್ಲ ಘಟನೆ ನೋಡಿದರೆ ಅವರ ಸೋಲು ಪಕ್ಕಾ. ಆದರೆ ಅವರು ಈಗ ಗೆಲಲ್ಲು ಇರುವುದ ಒಂದೇ ಮಾರ್ಗ. ಇಡೀ ದೇಶವನ್ನೇ ಮಣಿಪುರ ರೀತಿ ಮಾಡಬೇಕಾಗುತ್ತದೆ. ಅದಕ್ಕಾಗಿ ತಯಾರಿಯನ್ನು ನಡೆಸಲಾಗುತ್ತಿದೆ. ನೂಹ್ ಮತ್ತು ಇತರೆಡೆ ನಡೆದ ಗಲಭೆಗಳೇ ಇದಕ್ಕೆ ಸಾಕ್ಷಿ. ಹೀಗಿರುವಾಗ ಇಡೀ ದೇಶವೇ ಎಚ್ಚರಿಕೆಯಿಂದ ಇರಬೇಕಾಗುತ್ತೆ” ಎಂದು ವಕೀಲ ಪ್ರಶಾಂತ್ ಭೂಷಣ್ ತಿಳಿಸಿದರು.
“ಮೊದಲು ನಾವು ಪುಲ್ವಾಮಾದ ಬಗ್ಗೆ ಪ್ರಶ್ನೆ ಮಾಡಬೇಕಾಗುತ್ತದೆ. ಅದರ ತನಿಖೆ ಏನಾಗಿದೆ? ವಜಾ ಮಾಡಬೇಕಾದವರಿಗೆ ಪ್ರೋಮೊಷನ್ ಯಾಕೆ ನೀಡಲಾಗಿದೆ? ಅಂತ ಎಂದು ನಾವು ಪ್ರಶ್ನಿಸಬೇಕಾಗುತ್ತದೆ. ನಿಮಗೆ ಈ ದಾಳಿ ಮಾಡಿಸುವ ವಿಷಯ ಗೊತ್ತಿರಲಿಲ್ಲ ಅಥವಾ ನೀವು ಈ ದಾಳಿ ಮಾಡಿಸಿಲ್ಲ ಎಂದು ಅಂದುಕೊಂಡರೂ ಇಲ್ಲಿ ಬೇಜವಾಬ್ದಾರಿ ಇರೋದು ಪಕ್ಕಾ. ನೀವು 11 ಇಟೆಲಿಜೆಟ್ಸ್ ಅಲರ್ಟ್ ಅನ್ನು ಕಡೆಗಣಿಸಿದ್ದೀರಿ. ನೀವು ಸ್ಟಾಡರ್ಡ್ ಆಪರೇಟಿಂಗ್ ಪ್ರೋಸಿಜರ್ ಉಲ್ಲಂಘಿಸಿದ್ದೀರಿ. ಆದರೂ ಯಾರೂ ಕೂಡ ಉತ್ತರಿಸಲ್ಲ. ಹಾಗಿರುವಾಗ ನಾವು ಈ ಪ್ರಶ್ನೆ ಮಾಡಬೇಕಾಗುತ್ತದೆ. ಇದರ ತನಿಖಾ ವರದಿ ಕೇಳಬೇಕಾಗುತ್ತದೆ. ಹಾಗೆಯೇ ಮತ್ತೆ ಚುನಾವಣೆ ಗೆಲ್ಲಲು ಈ ರೀತಿ ಘಟನೆಯನ್ನು ಇವ್ರು ಮಾಡಿಸಬಹುದು ಎಂದು ದೇಶವನ್ನೇ ಎಚ್ಚರಿಸಬೇಕಾಗುತ್ತದೆ” ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳುತ್ತಾರೆ.
ಪುಲ್ವಾಮಾ, ಬಾಲಕೋಟ್ ದಾಳಿ ಪ್ರಕರಣ
ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಗಳು ಸಂಚರಿಸುತ್ತಿದ್ದ ವಾಹನದ ಮೇಲೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ ಬಾಂಬ್ ದಾಳಿ ಮಾಡಲಾಗಿದ್ದು, ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಹುತಾತ್ಮರಾದರು. ಇದಾದ ಬಳಿಕ ಫೆಬ್ರವರಿ 26, 2019 ರಂದು ಪುಲ್ವಾಮಾ ಪ್ರತೀಕಾರವಾಗಿ ಎಲ್ಒಸಿ ದಾಟಿ ಪಾಕಿಸ್ತಾನದ ಬಾಲಕೋಟ್ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿದ್ದೇವೆ ಎಂದು ಹೇಳಿದೆ.
ಬಿಜೆಪಿ ಪಕ್ಷದವರೇ ಆದ, ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಈ ದಾಳಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದರು. ಏಪ್ರಿಲ್ 2023 ರಲ್ಲಿ, ದಿ ವೈರ್ಗೆ ನೀಡಿದ ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್, “ಇಂತಹ ದೊಡ್ಡ ಬೆಂಗಾವಲು ಪಡೆ ಎಂದಿಗೂ ರಸ್ತೆಯಲ್ಲಿ ಹೋಗುವುದಿಲ್ಲ” ಎಂದು ಹೇಳಿದ್ದರು.
“ನಮ್ಮ ತಪ್ಪಿನಿಂದ ಇದು ಸಂಭವಿಸಿದೆ ಎಂದು ನಾನು ಸಂಜೆ (ಫೆಬ್ರವರಿ 14, 2019) ಪ್ರಧಾನ ಮಂತ್ರಿಗೆ ಹೇಳಿದೆ. ನಾವು ವಿಮಾನವನ್ನು ನೀಡಿದ್ದರೆ, ಇದು ಸಂಭವಿಸುತ್ತಿರಲಿಲ್ಲ. ನಾನು ಈಗ ಮೌನವಾಗಿರಲು ಪ್ರಧಾನಿ ನನಗೆ ಹೇಳಿದರು” ಎಂದು ಸಂದರ್ಶನದಲ್ಲಿ ತಿಳಿಸಿದ್ದರು. ಅದಾದ ಬಳಿಕ ಸತ್ಯಪಾಲ್ ಮಲಿಕ್ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.