ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಟೀಕಿಸಿ ಲೇಖನವನ್ನು ಪ್ರಕಟಿಸಿದ ಕೆಲವು ದಿನಗಳ ನಂತರ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಮುಖ್ಯಸ್ಥೆ ಯಾಮಿನಿ ಅಯ್ಯರ್ ರಾಜೀನಾಮೆ ನೀಡಿದ್ದಾರೆ.
ಯಾಮಿನಿ ಅಯ್ಯರ್ ಅವರು ಮಾರ್ಚ್ 26 ರಂದು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದು ಅದಕ್ಕೂ ಕೆಲವು ದಿನಗಳ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಟೀಕಿಸಿ ಮಾರ್ಚ್ 23 ರಂದು ಲೇಖನವನ್ನು ಬರೆದಿದ್ದರು.
“ಭಾರತವು ತನ್ನ 18ನೇ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸುತ್ತಿರುವಾಗ ತೆವಳುತ್ತಿರುವ ನಿರಂಕುಶ ಪ್ರಭುತ್ವದ ಕರಾಳ ಛಾಯೆಯು ಭಾರತದ ಮೇಲೆ ಆವರಿಸಿದೆ” ಎಂದು ಲೇಖನದಲ್ಲಿ ಹೇಳಿದ್ದರು. “ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಹಾನಿ” ಎಂಬುವುದು ಲೇಖನದ ಶೀರ್ಷಿಕೆ ಆಗಿದೆ.
ಇದನ್ನು ಓದಿದ್ದೀರಾ? ಪ್ರಧಾನಿ ಮೋದಿಯ ಆಡಳಿತ ಅಮೃತ ಕಾಲವಲ್ಲ, ವಿನಾಶ ಕಾಲ: ಸಿದ್ದರಾಮಯ್ಯ ಟೀಕೆ
“ನರೇಂದ್ರ ಮೋದಿಯವರ ಬಿಜೆಪಿ ಮೂರನೇ ಬಾರಿಗೆ ಗೆದ್ದು ಅಧಿಕಾರವನ್ನು ಹಿಡಿಯಲು ಸಜ್ಜಾಗಿದೆ. ಆದರೆ ಆಕ್ರಮಣಕಾರಿಯಾದ, ವ್ಯಕ್ತಿತ್ವದ ಆರಾಧನೆಯನ್ನು ಒಳಗೊಂಡ, ಹಿಂದೂ-ರಾಷ್ಟ್ರೀಯ ಸಿದ್ಧಾಂತವನ್ನು ಹೊಂದಿರುವ ಅವರ ಆಡಳಿತವು ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ” ಎಂದು ಈ ಲೇಖನದಲ್ಲಿ ಯಾಮಿನಿ ಅಭಿಪ್ರಾಯಿಸಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಹೇಳಿಕೆ ಬಿಡುಗಡೆ ಮಾಡಿದ್ದು, “ಯಾಮಿನಿ ಅಯ್ಯರ್ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ನ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕಿ ಹುದ್ದೆಯಿಂದ ಮಾರ್ಚ್ 31, 2024ರಂದು ಕೆಳಗಿಳಿಯಲಿದ್ದಾರೆ. ತಮ್ಮ ಸಂಶೋಧನಾ ಆಸಕ್ತಿಗಳತ್ತ ಅಧಿಕ ಗಮನ ಹರಿಸಲಿದ್ದಾರೆ” ಎಂದು ಹೇಳಿದೆ.