ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಭಾರತದ ಪೌರತ್ವ ಪಡೆಯುವವರಿಗೆ ಸ್ಥಳೀಯ ಪುರೋಹಿತರೂ ಕೂಡಾ ‘ಅರ್ಹತಾ ಪ್ರಮಾಣಪತ್ರ’ವನ್ನು ನೀಡಬಹುದು ಎಂದು ಕೇಂದ್ರ ಗೃಹ ಸಚಿವಾಲಯದ ಸಹಾಯವಾಣಿ ಹೇಳಿದೆ ಎಂದು ‘ದಿ ಹಿಂದೂ ವರದಿ’ ಮಾಡಿದೆ. ಗೃಹ ಇಲಾಖೆ ಸಹಾಯವಾಣಿಗೆ ಕರೆ ಮಾಡಿದಾಗ ಪುರೋಹಿತರಿಂದ ಅರ್ಹತಾ ಪ್ರಮಾಣಪತ್ರ ಪಡೆಯುವಂತೆ ಸೂಚಿಸಲಾಗಿದೆ.
2019ರಲ್ಲಿ ಅನುಮೋದನೆಗೊಂಡ ‘ಸಿಎಎ’ಯನ್ನು 2024ರ ಲೋಕಸಭೆ ಚುನಾವಣೆಗೆ ಒಂದು ತಿಂಗಳು ಇರುವಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿ ಮಾಡಿದೆ. ಸಿಎಎ ಅಡಿ ಪೌರತ್ವ ಪಡೆಯುವವರು ಅರ್ಹತಾ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಹಾಗೆಯೇ, ಭಾರತದ ಪೌರತ್ವವನ್ನು ಪಡೆಯಲು ಕಾರಣವನ್ನು ಕೂಡಾ ತಿಳಿಸಬೇಕಾಗುತ್ತದೆ.
ಇದನ್ನು ಓದಿದ್ದೀರಾ? ‘ಸಿಎಎ ಅಸಂವಿಧಾನಿಕ’ ಎಂದ ನ್ಯಾಯಮೂರ್ತಿ ಚಂದ್ರಚೂಡ್ರ ಪುತ್ರ; ವೀಡಿಯೋ ವೈರಲ್
ಈ ಕಾಯ್ದೆಯಡಿಯಲ್ಲಿ 2019ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ಬಂದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಶೋಷಣೆಗೆ ಒಳಗಾದ ಹಿಂದೂ, ಕ್ರೈಸ್ತ, ಸಿಖ್, ಪಾರ್ಸಿ, ಜೈನ, ಬೌದ್ಧ ಧರ್ಮದವರು ಭಾರತದ ಪೌರತ್ವವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಚುನಾವಣೆಗೂ ಮುನ್ನ ಈ ಕಾಯ್ದೆಯನ್ನು ಜಾರಿ ಮಾಡಿರುವುದಕ್ಕೆ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿದೆ.
ಸಿಎಎ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ಪಡೆಯಲು ಮಾರ್ಚ್ 21ರಂದು ಸಚಿವಾಲಯವು 1032 ಸಹಾಯವಾಣಿಯನ್ನು ಜಾರಿ ಮಾಡಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಈ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.
ಸಿಎಎ ನಿಯಮದ ಪ್ರಕಾರ ‘ಪ್ರತಿಷ್ಠಿತ ಸಮುದಾಯ ಸಂಸ್ಥೆ’ ಅರ್ಹತಾ ಪ್ರಮಾಣ ಪತ್ರ ನೀಡಬಹುದಾಗಿದೆ. ಆದರೆ ಇಲ್ಲಿ ‘ಪ್ರತಿಷ್ಠಿತ ಸಮುದಾಯ ಸಂಸ್ಥೆ’ ಯಾವುದು ಎಂಬುವುದನ್ನು ಸ್ಪಷ್ಟಪಡಿಸಲಾಗಿಲ್ಲ. ಈ ನಿಟ್ಟಿನಲ್ಲಿ ದಿ ಹಿಂದೂ ಗೃಹ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದ್ದು, ಈ ವೇಳೆ ಕರೆಯಲ್ಲಿ ಮಾತನಾಡಿದ ವ್ಯಕ್ತಿ ಅರ್ಹತಾ ಪ್ರಮಾಣ ಪತ್ರವನ್ನು ಖಾಲಿ ಹಾಳೆ ಅಥವಾ 10 ರೂಪಾಯಿಯ ಸ್ಟ್ಯಾಂಪ್ ಪೇಪರ್ನಲ್ಲಿ ನೀಡಬಹುದು ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಸಿಎಎ ಜಾರಿ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ಯಾವುದೇ ಕಾರಣಕ್ಕೂ ಹಿಂಪಡೆಯಲ್ಲ ಎಂದ ಅಮಿತ್ ಶಾ
ಇನ್ನು ಯಾರಿಂದ ಈ ಪ್ರಮಾಣಪತ್ರ ಪಡೆಯಬೇಕು ಎಂದು ಈ ಸಹಾಯವಾಣಿಯಲ್ಲಿ ದಿ ಹಿಂದೂ ಪ್ರಶ್ನಿಸಿದಾಗ, “ಸ್ಥಳೀಯ ಪೂಜಾರಿ ನೀಡಬಹುದು” ಎಂದು ಹೇಳಿದ್ದಾರೆ. ಪೌರತ್ವಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ ವಾಸವಿರುವ ಪ್ರದೇಶದ ದೇವಸ್ಥಾನದ ಪುರೋಹಿತ, ಚರ್ಚಿನ ಪಾದ್ರಿ ಅಥವಾ ಇತರ ಧರ್ಮಗಳ ಧರ್ಮ ಗುರುಗಳು “ಈ ವ್ಯಕ್ತಿ ನನಗೆ ತಿಳಿದಿರುವವರು. ಇವರು ಈ ಧರ್ಮದವರು. ಮುಂದೆಯೂ ಅದೇ ಧರ್ಮದಲ್ಲಿ ಇರಲಿದ್ದಾರೆ” ಎಂದು ಖಚಿತಪಡಿಸಬೇಕು ಎಂದು ಹಿಂದೂ ವರದಿ ಮಾಡಿದೆ.
ಇನ್ನು ಪೂಜಾರಿ ಅಥವಾ ಪಾದ್ರಿ ಪ್ರಮಾಣ ಪತ್ರ ನೀಡಲು ಮಾತ್ರ ಅರ್ಹರು. ಆದರೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಪೌರತ್ವ ನೀಡಬಹುದೇ, ಇಲ್ಲವೇ ಎಂದು ಅದಕ್ಕಾಗಿ ನೇಮಿಸಲಾದ ತಂಡ ನಿರ್ಧರಿಸಲಿದೆ ಎಂದು ವರದಿ ಹೇಳಿದೆ.