ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದ ಹಿರಿಯ ಬಿಜೆಪಿ ನಾಯಕ, ಸಂಸದ ದಿಲೀಪ್ ಘೋಷ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಂಗಾಳದ ದುರ್ಗಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಘೋಷ್ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 509 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದುರ್ಗಾಪುರ ನ್ಯಾಯಾಲಯದಲ್ಲಿ ವಕೀಲರು ಮತ್ತು ಇನ್ನೊಬ್ಬ ವ್ಯಕ್ತಿ ನೀಡಿದ ದೂರುಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿಡಿಯೋವೊಂದರ ತುಣುಕನ್ನು ಹಂಚಿಕೊಂಡಿದ್ದ ಘೋಷ್, ‘ಬೆಂಗಾಲ್ ನಿಜೇರ್ ಮೇಯೆ ಕೆ ಚಾಯ್ (ಬಂಗಾಳ ತನ್ನ ಸ್ವಂತ ಮಗಳನ್ನು ಬಯಸುತ್ತದೆ)’ ಎಂಬ ಘೋಷಣೆಯನ್ನು ಲೇವಡಿ ಮಾಡಿದ್ದರು. “ಮಮತಾ ಗೋವಾಕ್ಕೆ ಹೋದಾಗ ಗೋವಾದ ಮಗಳು ಅಂತಾರೆ, ತ್ರಿಪುರಾದಲ್ಲಿ ತ್ರಿಪುರಾ ಮಗಳು ಅಂತಾರೆ, ಮೊದಲು ಅವರು ಅವರ ತಂದೆಯ ಗುರುತನ್ನು ಸ್ಪಷ್ಟಪಡಿಸಲಿ” ಎಂದು ವ್ಯಂಗ್ಯವಾಡಿದ್ದಾರೆ.
ಅವರ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು ಸಲ್ಲಿಸಿದೆ. ಮಾದರಿ ನೀತಿ ಸಂಹಿತೆಯನ್ನು ಬಿಜೆಪಿ ಉಲ್ಲಂಘಿಸಿದೆ ಎಂದೂ ಆರೋಪಿಸಿದೆ.
ಘೋಷ್ ಟೀಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ ಮತ್ತು ಮಾರ್ಚ್ 29ರೊಳಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ. ಇದಾದ ಕೆಲವೇ ಗಂಟೆಗಳಲ್ಲಿ, ಮಮತಾ ವಿರುದ್ಧದ ಹೇಳಿಕೆಗಾಗಿ ಘೋಷ್ ಕ್ಷಮೆ ಕೇಳಿದ್ದಾರೆ.
“ಮುಖ್ಯಮಂತ್ರಿ ಮಮತಾ ಜೊತೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಾನು ಬ್ಯಾನರ್ಜಿಯವರ ರಾಜಕೀಯ ಹೇಳಿಕೆಗಳನ್ನು ಮಾತ್ರ ಪ್ರತಿಭಟಿಸಿದ್ದೇನೆ. ಯಾರೇ ತಪ್ಪು ಮಾಡಿದರೂ, ಅವರ ಎದುರೇ ನಾನು ಖಂಡಿಸುತ್ತೇನೆ. ನನ್ನ ಹೇಳಿಕೆಗಳ ಬಗ್ಗೆ ವಿವಾದ ಭುಗಿಲೆದ್ದಿರುವುದು ಇದೇ ಮೊದಲಲ್ಲ” ಎಂದು ಘೋಷ್ ಹೇಳಿದ್ದಾರೆ.
“ಮಹಿಳೆಯರ ಬಗ್ಗೆ, ಅದರಲ್ಲೂ ಮುಖ್ಯಮಂತ್ರಿಯಾಗಿರುವ ಯಾರೊಬ್ಬರ ವಿರುದ್ಧದ ಹೇಳಿಕೆಗಳನ್ನು ನಮ್ಮ ಪಕ್ಷ ಬೆಂಬಲಿಸುವುದಿಲ್ಲ. ಅದಕ್ಕಾಗಿಯೇ ಘೋಷ್ ಅವರಿಂದ ವಿವರಣೆ ಕೇಳಲಾಗಿದೆ” ಎಂದು ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.