ಪುದುಚೇರಿ ಏಕೈಕ ದಲಿತ ಮಹಿಳಾ ಸಚಿವೆ ಎಸ್.ಚಂದಿರಾ ಪ್ರಿಯಾಂಕ ಅವರು ಮಂಗಳವಾರ ಎಐಎನ್ಆರ್ಸಿ-ಬಿಜೆಪಿ ಸಮ್ಮಿಶ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಿತೂರಿ ಮತ್ತು ಹಣಬಲದ ರಾಜಕೀಯದ ಜೊತೆಗೆ ಜಾತಿಭೇದ ಮತ್ತು ಲಿಂಗ ಪಕ್ಷಪಾತವನ್ನು ಎದುರಿಸುತ್ತಿರುವುದಾಗಿ ತಮ್ಮ ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ.
ಅವರು ಪುದುಚೇರಿ ಮಾಜಿ ಸಚಿವ ಚಂದ್ರಕಾಸು ಅವರ ಪುತ್ರಿ. ರಾಜೀನಾಮೆ ಪತ್ರದಲ್ಲಿ ಚಂದಿರಾ ಪ್ರಿಯಾಂಕ ಅವರು ದಲಿತ ಮಹಿಳಾ ನಾಯಕಿಯಾಗಿ ಹೋರಾಟ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
2021ರಲ್ಲಿ, ನೆಡುಂಗಾಡು ಕ್ಷೇತ್ರದ ಶಾಸಕರು 40 ವರ್ಷಗಳ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಮಂತ್ರಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರ ಎನ್ ರಣಗಸಾಮಿ ನೇತೃತ್ವದ ಸಮ್ಮಿಶ್ರ ಸಂಪುಟದಲ್ಲಿ ಅವರಿಗೆ ಸಾರಿಗೆ ಖಾತೆಯನ್ನು ಹಸ್ತಾಂತರಿಸಲಾಯಿತು.
2021 ರ ವಿಧಾನಸಭಾ ಚುನಾವಣೆಯಲ್ಲಿ ಸತತ ಎರಡನೇ ಅವಧಿಗೆ ಎಐಎನ್ಆರ್ಸಿ ಟಿಕೆಟ್ನೊಂದಿಗೆ ಕಾರೈಕಲ್ನ ನೆಡುಂಗಾಡು ಮೀಸಲು ಕ್ಷೇತ್ರದಿಂದ ಚಂದಿರಾ ಪ್ರಿಯಾಂಕ ಅವರು ಆಯ್ಕೆಯಾದರು.
ಮಂಗಳವಾರ, ಚಂದಿರಾ ಪ್ರಿಯಾಂಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಮುಖ್ಯಮಂತ್ರಿ ಕಚೇರಿಯಲ್ಲಿ ತಮ್ಮ ಕಾರ್ಯದರ್ಶಿಯ ಮೂಲಕ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ರಾಜೀನಾಮೆ ಪತ್ರದ ಸ್ವೀಕೃತಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಮೂಲಗಳು ಖಚಿತಪಡಿಸಿದ್ದು, ಈ ಕುರಿತು ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ತನ್ನ ಕ್ಷೇತ್ರದ ಜನರಲ್ಲಿರುವ ಜನಪ್ರಿಯತೆಯಿಂದಾಗಿ ವಿಧಾನಸಭೆಗೆ ಪ್ರವೇಶಿಸಿದ್ದರೂ, “ಪಿತೂರಿಯ ರಾಜಕೀಯವನ್ನು ಜಯಿಸುವುದು ಅಷ್ಟು ಸುಲಭವಲ್ಲ ಮತ್ತು ಹಣಬಲದ ದೊಡ್ಡ ಭೂತದ ವಿರುದ್ಧ ನಾನು ಹೋರಾಡಲು ಸಾಧ್ಯವಿಲ್ಲ” ಎಂದು ಅರಿತುಕೊಂಡಿದ್ದೇನೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಾತಿ ಗಣತಿಯು ಅಲ್ಪಸಂಖ್ಯಾತರ ‘ಎಕ್ಸ್-ರೇ’: ರಾಹುಲ್ ಗಾಂಧಿ
ಇದರ ಜೊತೆ “ಜಾತೀಯತೆ ಮತ್ತು ಲಿಂಗ ಪಕ್ಷಪಾತಕ್ಕೆ ಒಳಗಾಗಿರುವುದಾಗಿ” ಪತ್ರದಲ್ಲಿ ತಿಳಿಸಿದ್ದಾರೆ.
“ನನ್ನನ್ನು ನಿರಂತರವಾಗಿ ಗುರಿಯಾಗಿಸಲಾಯಿತು ಮತ್ತು ಪಿತೂರಿಯ ರಾಜಕೀಯ ಮತ್ತು ಕೆಲವು ಮಿತಿಗಳನ್ನು ಮೀರಿ ಹಣಬಲದ ದೊಡ್ಡ ಭೂತವನ್ನು ನಾನು ಸಹಿಸಲಾರೆ ಎಂದು ಕಂಡುಕೊಂಡೆ. ನಾನು ಸಚಿವೆಯಾಗಿ ನೋಡಿಕೊಳ್ಳುತ್ತಿರುವ ಇಲಾಖೆಗಳಲ್ಲಿ ಯಾವ ಬದಲಾವಣೆಗಳು, ಸುಧಾರಣೆಗಳನ್ನು ಮಾಡಿದ್ದೇನೆ ಎಂಬುದನ್ನು ತಿಳಿಸಲು ಶೀಘ್ರದಲ್ಲೇ ಸಾರ್ವಜನಿಕ ಸಭೆ ಮಾಡುವುದಾಗಿ” ಚಂದಿರಾ ಪ್ರಿಯಾಂಕ ಹೇಳಿದರು.
ಚಂದಿರಾ ಪ್ರಿಯಂಕಾ ಅವರು ಎಐಎನ್ಆರ್ಸಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ವಸತಿ, ಕಾರ್ಮಿಕ ಮತ್ತು ಉದ್ಯೋಗ ಖಾತೆಗಳನ್ನು ನಿರ್ವಹಿಸುತ್ತಿದ್ದರು.
“ನಾನು ಪ್ರಬಲ ಶಕ್ತಿಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡೆ. ಆದ್ದರಿಂದ ನಾನು ಸಚಿವ ಸ್ಥಾನವನ್ನು ತ್ಯಜಿಸಿದ್ದೇನೆ. ನನ್ನ ಭಾಗದ ಜನರಲ್ಲಿ ನಾನು ನನ್ನ ಕ್ಷಮೆಯಾಚಿಸುತ್ತೇನೆ. ಆದರೆ ನಾನು ಕ್ಷೇತ್ರದ ಶಾಸಕಿಯಾಗಿ ಕ್ಷೇತ್ರದ ಸೇವೆಯನ್ನು ಮುಂದುವರಿಸುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಚಂದಿರಾ ಪ್ರಿಯಾಂಕ ಹೇಳಿದ್ದಾರೆ.
ಈ ಹಿಂದೆ ತನಗೆ ಸಚಿವ ಸ್ಥಾನ ನೀಡಿದ್ದಕ್ಕಾಗಿ ಸಿಎಂಗೆ ಧನ್ಯವಾದ ಅರ್ಪಿಸಿದ ಅವರು, ತಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ವನ್ನಿಯಾರ್, ದಲಿತ ಅಥವಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಯಾವುದೇ ಶಾಸಕರನ್ನು ಸೇರಿಸಿಕೊಳ್ಳುವಂತೆ ಮುಖ್ಯಮಂತ್ರಿಯವರಿಗೆ ಅವರಿಗೆ ಮನವಿ ಮಾಡಿದರು.
ಇದಲ್ಲದೆ, ಹಣ ಬಲ ಅಥವಾ ಪ್ರಭಾವದ ಆಧಾರದ ಮೇಲೆ ಸಚಿವರಾಗಲು ಉತ್ಸುಕರಾಗಿರುವ ಯಾರನ್ನೂ ಅವರ ಉತ್ತರಾಧಿಕಾರಿಯನ್ನಾಗಿ ಮಾಡಬಾರದು. ಅದು ವನ್ನಿಯಾರ್ ಅಥವಾ ದಲಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತದೆ ಎಂಬುದನ್ನು ಉಲ್ಲೇಖಿಸಿದ್ದಾರೆ.