ದೆಹಲಿಯ ಕರವಲ್ ನಗರದ ಬಾದಾಮಿ ಗೋದಾಮಿನಲ್ಲಿ ಕೆಲಸ ಮಾಡುವ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರವನ್ನು ಮಾಡುತ್ತಿದ್ದಾರೆ. ಮಾರ್ಚ್ ಒಂದರಿಂದ ಈ ಮುಷ್ಕರ ಆರಂಭವಾಗಿದ್ದು, ಕಾರ್ಮಿಕರು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಕಾರ್ಮಿಕರ ಒಟ್ಟು ಹನ್ನೊಂದು ಬೇಡಿಕೆಗಳ ಪೈಕಿ ವೇತನ ಹೆಚ್ಚಳ ಮತ್ತು ನಿಗದಿತ ಅವಧಿಯ ಕೆಲಸ ಪ್ರಮುಖ ಬೇಡಿಕೆಯಾಗಿದೆ. ಈ ಕಾರ್ಮಿಕರು ಸುಲಿಯುವ ಪ್ರತಿ ಕೆಜಿ ಬಾದಾಮಿಗೆ (almond) ಎರಡು ರೂಪಾಯಿ ಕೂಲಿಯನ್ನು ಪಡೆಯುತ್ತಾರೆ. ಹಾಗೆಯೇ ದಿನಕ್ಕೆ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಕಾರ್ಮಿಕರಾದ ಲಲಿತಾ, “ವೇತನ ಹೆಚ್ಚಳಕ್ಕಾಗಿ ನಾವು 2012ರಲ್ಲಿ ಪ್ರತಿಭಟನೆ ಮಾಡಿದ್ದು, ಆಗ ನಮ್ಮ ಕೂಲಿಯನ್ನು ಪ್ರತಿ ಕೆಜಿ ಬಾದಾಮಿಗೆ ಎರಡು ರೂಪಾಯಿಯಂತೆ ಏರಿಸಲಾಗಿದೆ. ಪ್ರತಿ ವರ್ಷವೂ ಕೂಲಿ ಹೆಚ್ಚಿಸುವ ಭರವಸೆ ಗೋದಾಮಿನ ಮಾಲೀಕರು ನೀಡಿದ್ದಾರೆ. ಆದರೆ 12 ವರ್ಷಗಳಿಂದ ಕೂಲಿ ಹೆಚ್ಚಳ ಮಾಡಲಾಗಿಲ್ಲ. ಈಗ ನಾವು ಪ್ರತಿ ಕೆಜಿಗೆ 12 ರೂಪಾಯಿ ನೀಡುವ ಬೇಡಿಕೆ ಇರಿಸಿದ್ದೇವೆ” ಎಂದು ತಿಳಿಸಿದರು.
ಎನ್ಡಿಟಿವಿಗೆ ಪ್ರತಿಕ್ರಿಯಿಸಿದ ಮಹಿಳಾ ಕಾರ್ಮಿಕರಾದ ರಂಜು “ನಾವು ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದೇವೆ, ವೇತನ ಹೆಚ್ಚಳ ಪಡೆಯಲು ನಾವು ಅರ್ಹರು. ನಮ್ಮ ಗೋದಾಮಿನ ಮಾಲೀಕರು ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಮತ್ತು ಅಧಿಕ ಅವಧಿ ಕೆಲಸ ಮಾಡಿಸುತ್ತಾರೆ. ನಾವು ಹಲವಾರು ವರ್ಷಗಳಿಂದ ಕೂಲಿ ಏರಿಕೆಗೆ ಆಗ್ರಹಿಸುತ್ತಿದ್ದೇವೆ. ಆದರೆ ಏರಿಕೆ ಮಾಡಿಲ್ಲ. ನಮ್ಮ ಬೇಡಿಕೆ ಈಡೇರಿಸಬೇಕು, ಇಲ್ಲದಿದ್ದಲ್ಲಿ ನಮ್ಮ ಮುಷ್ಕರ ನಿಲ್ಲದು” ಎಂದು ಎಚ್ಚರಿಕೆ ನೀಡಿದರು.
“ಮಾರ್ಚ್ 11ರಂದು ನಮ್ಮ ರ್ಯಾಲಿ ಮೇಲೆ ದಾಳಿ ನಡೆಸಲಾಗಿದ್ದು ಹತ್ತು ಮಂದಿ ಆಸ್ಪತ್ರೆ ಸೇರಿದ್ದಾರೆ. ನಾವು ಪೊಲೀಸ್ ಠಾಣೆಗೆ ಹೋಗಿದ್ದು, ಪೊಲೀಸರು ನಮಗೆ ಸಹಾಯ ಮಾಡಿಲ್ಲ. ಮಾರ್ಚ್ 13ರಂದು ಕೆಲವು ಗೂಂಡಾಗಳು ಪ್ರತಿಭಟನಾಕಾರರ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ” ಎಂದು ಕಾರ್ಮಿಕರು ಹೇಳಿದ್ದಾರೆ.
ಇನ್ನು ಈ ಕಾರ್ಮಿಕರು ಮುಂಜಾನೆ 4 ಗಂಟೆಗೆ ಗೋದಾಮಿಗೆ ಬಂದು ಸಂಜೆ 6 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಆದರೆ 150-200 ರೂಪಾಯಿ ಮಾತ್ರ ದುಡಿಯಲು ಸಾಧ್ಯವಾಗುತ್ತದೆ. ಆದ್ದರಿಂದಾಗಿ ಈಗ ಕಾರ್ಮಿಕರು ದಿನಕ್ಕೆ ಎಂಟು ಗಂಟೆ ಕೆಲಸದ ಬೇಡಿಕೆ ಇರಿಸಿದ್ದಾರೆ. ಪ್ರತಿ ಕೆಜಿ ಬಾದಾಮಿಗೆ 12 ರೂಪಾಯಿ ನೀಡಬೇಕು, ಈ ವೇತನವನ್ನು ಪ್ರತಿ ತಿಂಗಳ ಐದು ದಿನದ ಒಳಗಾಗಿ ನೀಡಬೇಕೆಂದು ಆಗ್ರಹಿಸಿದ್ದಾರೆ.
4000ಕ್ಕೂ ಅಧಿಕ ಬಾದಾಮಿ ಗೋದಾಮು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದರಿಂದಾಗಿ ದೆಹಲಿಯ ಕರವಲ್ ನಗರದ ಬಹುತೇಕ ಎಲ್ಲ ಗೋದಾಮುಗಳು ಮುಚ್ಚಿವೆ. ಕೆಲವು ಗೋದಾಮು ಮಾಲೀಕರು ತಮಗೆ ನಷ್ಟವಾಗುತ್ತಿದೆ ಎಂದರೆ ಇನ್ನು ಕೆಲವು ನಮಗೆ ಇತರೆ ಉದ್ಯಮಗಳು ಕೂಡಾ ಇದೆ ಎನ್ನುತ್ತಿದ್ದಾರೆ. ಕಾರ್ಮಿಕರ ಗೋಳು ಕೇಳಬೇಕಾದ ಸರ್ಕಾರ, ಕಿವುಡಾಗಿದೆ.