- ಎನ್ಸಿಪಿ ಪುನರ್ ರಚನೆಗಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ಶರದ್ ಪವಾರ್
- ಭೋಪಾಲ್ ಸಭೆಯಲ್ಲಿ ಎನ್ಸಿಪಿ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಎನ್ಸಿಪಿ ನಾಯಕರಿಂದ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವುದಾಗಿ ಮಾತನಾಡಿದ್ದಾರೆ. ಆದ್ದರಿಂದ ಅವರು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಪಕ್ಷದ ವರಿಷ್ಠ ಶರದ್ ಪವಾರ್ ಅವರು ಶನಿವಾರ (ಜುಲೈ 8) ಹೇಳಿದ್ದಾರೆ ಎಂದು ವರದಿಯಾಗಿದೆ.
ನಾಸಿಕ್ ಜಿಲ್ಲೆಯ ಯೋಲಾ ಪ್ರದೇಶದಲ್ಲಿ ಸಾರ್ವಜನಿಕ ಸಭೆ ನಡೆಸಿ ಪವಾರ್ ಮಾತನಾಡಿದರು.
“ರಾಜ್ಯದ ಆಡಳಿತ ಯಂತ್ರದ ನಿರ್ವಹಣೆ ಪ್ರಧಾನಿ ಮೋದಿ ಅವರ ಸುಪರ್ದಿಯಲ್ಲಿದೆ. ಆದ್ದರಿಂದ ಮೋದಿ ಅವರು ಈ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು” ಎಂದು ಪವಾರ್ ಒತ್ತಾಯಿಸಿದರು.
ಶರದ್ ಪವಾರ್ ಅವರು ತಮ್ಮ ಸೋದರಳಿಯ ಅಜಿತ್ ಪವಾರ್ ಮತ್ತು ಇತರ ಎಂಟು ಎನ್ಸಿಪಿ ಶಾಸಕರು ಬಂಡಾಯ ಬಾವುಟ ಬೀಸಿದ ಒಂದು ವಾರದ ನಂತರ ಪಕ್ಷದ ಪುನರ್ ನಿರ್ಮಾಣಕ್ಕಾಗಿ ಬಂಡಾಯ ನಾಯಕ ಮತ್ತು ಸಚಿವ ಛಗನ್ ಭುಜಬಲ್ ಅವರ ಕ್ಷೇತ್ರ ಯೋಲಾದಲ್ಲಿ ಸಮಾವೇಶ ನಡೆಸುವ ಮೂಲಕ ರಾಜ್ಯ ಪ್ರವಾಸ ಆರಂಭಿಸಿದ್ದಾರೆ.
ಎನ್ಸಿಪಿ ಬಂಡಾಯ ನಾಯಕರು ತಮ್ಮ ವಯಸ್ಸಿನ ಬಗ್ಗೆ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದು ಸಮಾವೇಶದಲ್ಲಿ ಪವಾರ್ ಹೇಳಿದರು.
“ನಾನು ಕೆಲವರ ಮೇಲೆ ನಂಬಿಕೆ ಇಟ್ಟು ತಪ್ಪು ಮಾಡಿದೆ. ಮುಂದೆ ಹಾಗೆ ಮಾಡುವುದಿಲ್ಲ. ಅದಕ್ಕಾಗಿ ನಿಮ್ಮಲ್ಲಿ ಕ್ಷಮೆಯಾಚಿಸಲು ಬಂದಿದ್ದೇನೆ” ಎಂದು ಶರದ್ ಪವಾರ್ ಭುಜಬಲ್ರನ್ನು ಉಲ್ಲೇಖಿಸದೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಳೆಗೆ ನಲುಗಿದ ಉತ್ತರ ಭಾರತ; ದೆಹಲಿಯಲ್ಲಿ 40 ವರ್ಷದಲ್ಲೇ ದಾಖಲೆ ಮಳೆ
ಸಮಾವೇಶದಲ್ಲಿ ಮಾತನಾಡುವಾಗ ಮಳೆಯಲ್ಲಿ ನೆನೆದು ಕಾರಿನಲ್ಲಿ ಕುಳಿತ ತಮ್ಮ ತಂದೆ ಪವಾರ್ ಅವರ ಚಿತ್ರವನ್ನು ಪುತ್ರಿ ಸುಪ್ರಿಯಾ ಸುಳೆ ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಭೋಪಾಲ್ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ₹70,000 ಕೋಟಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದ್ದರು.
ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ಬಂಡಾಯ ಬಾವುಟ ಬೀಸಿದ ನಂತರ ಎನ್ಸಿಪಿಯಲ್ಲಿ ಆಂತರಿಕ ತಿಕ್ಕಾಟ ಆರಂಭವಾಗಿದೆ.