ರಾಜಸ್ಥಾನ ರಾಜ್ಯದ 199 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 12 ಗಂಟೆ ನಂತರದ ಮತ ಎಣಿಕೆಯ ಬಿಜೆಪಿ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ 70ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವಿನ ಹತ್ತಿರದಲ್ಲಿದೆ.
ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿರುವ ಕಾರಣ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಶುರುವಾಗಿದೆ. ಮೂವರು ಪ್ರಮುಖರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಮಾಜಿ ಸಿಎಂ ವಸುಂಧರಾ ರಾಜೇ, ಆಲ್ವಾರ್ನ ಸಂಸದ ಮಹಂತ್ ಬಾಲಕನಾಥ್ ಹಾಗೂ ಮತ್ತೊಬ್ಬರು ಸಂಸದೆಯಾದ ದಿಯಾ ಕುಮಾರಿ ಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ.
2008 ಹಾಗೂ 2013ರಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೆ ಸಿಂಧಿಯಾ ಅವರನ್ನು ಇತ್ತೀಚಿನ ವರ್ಷಗಳಲ್ಲಿ ಪಕ್ಷದಿಂದ ಕಡೆಗಣಿಸಲಾಗುತ್ತಿದೆ. ಟಿಕೆಟ್ ನೀಡುವಾಗಲು ಇವರನ್ನು ಕಡೆಗಣಿಸಲಾಗಿತ್ತು. ಒಂದು ವೇಳೆ ಹೆಚ್ಚು ಶಾಸಕರು ವಸುಂಧರಾ ಅವರೆ ಸಿಎಂ ಆಗಬೇಕೆಂದು ಪಟ್ಟು ಹಿಡಿದರೆ ಹೈಕಮಾಂಡ್ ಶಾಸಕರ ಅಭಿಪ್ರಾಯಕ್ಕೆ ಮಣಿಯಲೇ ಬೇಕಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಛತ್ತೀಸ್ಗಢ ಮತ ಎಣಿಕೆ: ಕ್ಷಣದಿಂದ ಕ್ಷಣಕ್ಕೆ ಕಾಂಗ್ರೆಸ್ – ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ
ಇವರ ಜೊತೆ ಎರಡನೆಯದಾಗಿ ಕೇಳಿ ಬರುತ್ತಿರುವ ಹೆಸರು ಆಲ್ವಾರ್ನ ಸಂಸದ ಮಹಂತ್ ಬಾಲಕನಾಥ್. ಉತ್ತರಪ್ರದೇಶದಲ್ಲಿ ಯೋಗಿ ಅದಿತ್ಯನಾಥ್ ಅವರನ್ನು ಸಿಎಂ ಆಗಿ ಮಾಡಿದ ಪ್ರಯೋಗ ಯಶಸ್ಸು ಕಂಡ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲೂ ಅದೇ ರೀತಿಯ ಪ್ರಯೋಗಕ್ಕೆ ಬಿಜೆಪಿ ಮುಂದಾಗಬಹುದು. ಯೋಗಿ ಆದಿತ್ಯನಾಥ್ ಅವರಂತೆ ಮಹಂತ್ ಬಾಲಕನಾಥ್ ಕೂಡ ಧರ್ಮದ ಹೆಸರಿನಲ್ಲಿ ಮತ ಸೆಳೆಯುವ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಈ ಕಾರಣದಿಂದ ಇವರನ್ನು ರಾಜಸ್ಥಾನ ಮುಖ್ಯಮಂತ್ರಿ ಮಾಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಮೂರನೇ ಹೆಸರು ಕೇಳಿಬರುತ್ತಿರುವುದು ರಾಜಕುಮಾರಿ ಹಾಗೂ ರಾಜಸಮಂದ್ ಕ್ಷೇತ್ರದ ಸಂಸದೆ ದಿಯಾ ಕುಮಾರಿ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜಧಾನಿ ಜೈಪುರದ ವಿದ್ಯಾಧರ್ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದಾರೆ. ಕೆಲ ಮೂಲಗಳ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ದಿಯಾಕುಮಾರಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಬಹುದು ಎಂಬ ಚರ್ಚೆ ಒಂದು ಹಂತದಲ್ಲಿ ನಡೆದಿದೆ.
ಈ ಮೂವರ ಜೊತೆ ಕೇಂದ್ರ ಸಚಿವರಾದ ಭೂಪೇಂದರ್ ಯಾದವ್ ಮತ್ತು ಅಶ್ವಿನಿ ವೈಷ್ಣವ್ ಹಾಗು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿಬರುತ್ತಿವೆ. ಆದರೆ ಶಾಸಕರ ಅಭಿಪ್ರಾಯ ಹಾಗೂ ಹೈಕಮಾಂಡ್ ನಿರ್ಧಾರವೆ ಅಂತಿಮವಾಗುತ್ತದೆ.