ಅದಾನಿ ಸಮೂಹವನ್ನು ಗುರಿಯಾಗಿಸಿಕೊಂಡು ಜಾರ್ಜ್ ಸೊರೊಸ್ ಬೆಂಬಲಿತ ಸಮೂಹ ಯೋಜನೆ ವರದಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಅರ್ಜಿದಾರರ ವಿರುದ್ಧ ಕಠಿಣ ಪ್ರಶ್ನೆಗಳನ್ನು ಕೇಳಿದೆ.
“ನಾವು ವಿದೇಶಿ ವರದಿಗಳನ್ನು ಏಕೆ ಸತ್ಯವೆಂದು ತೆಗೆದುಕೊಳ್ಳಬೇಕು? ನಾವು ವರದಿಯನ್ನು ತಿರಸ್ಕರಿಸುತ್ತಿಲ್ಲ, ಆದರೆ ನಮಗೆ ಪುರಾವೆ ಬೇಕು. ಹಾಗಾದರೆ ಅದಾನಿ ಸಮೂಹದ ವಿರುದ್ಧ ನಿಮ್ಮ ಬಳಿ ಏನು ಪುರಾವೆ ಇದೆ?” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದರು.
ಜಾರ್ಜ್ ಸೊರೊಸ್ ಹಾಗೂ ರಾಕೆಟ್ ಫೆಲ್ಲರ್ ಬ್ರದರ್ಸ್ ಫಂಡ್ ಅನುದಾನಿತ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ(ಒಸಿಸಿಆರ್ ಪಿ)ಯು ಇಬ್ಬರು ವಿದೇಶಿ ಹೂಡಿಕೆದಾರರ ಮೂಲಕ ಅದಾನಿ ಸಮೂಹ ಆಂತರಿಕ ವಹಿವಾಟು ಮಾಡುತ್ತಿದೆ ಎಂದು ಆರೋಪಿಸಿದೆ. ಈ ಆರೋಪವನ್ನು ಅದಾನಿ ಸಮೂಹ ಯಾವುದೇ ಆಧಾರವಿಲ್ಲ ಎಂದು ಅಲ್ಲಗಳೆದಿತ್ತು.
ಈ ಸುದ್ದಿ ಓದಿದ್ದೀರಾ? ಡ್ರಗ್ಸ್ ಖರೀದಿಸಲು ಹೆತ್ತ ಮಕ್ಕಳನ್ನೆ ಮಾರಾಟ ಮಾಡಿದ ದಂಪತಿ
“ನಾವು ಅಂತಹ ವರದಿಗಳ ಮೇಲೆ ಕ್ರಮ ಕೈಗೊಂಡರೆ ನಮ್ಮ ಏಜೆನ್ಸಿಗಳು ಏನು ಮಾಡುತ್ತವೆ? ವಿದೇಶಿ ವರದಿಗಳಿಂದ ಭಾರತೀಯ ನೀತಿಗಳ ಮೇಲೆ ಪ್ರಭಾವ ಬೀರುವ ಹೊಸ ಪ್ರವೃತ್ತಿ ಇದಾಗಿದೆ” ಎಂದು ಭಾರತೀಯ ಷೇರುಪೇಟೆಯ ನಿಯಂತ್ರಣ ಪ್ರಾಧಿಕಾರ (ಸೆಬಿ) ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ಗೆ ತಿಳಿಸಿದರು.
ಅದಾನಿ ಹಗರಣವು ಭಾರತದ ಒಕ್ಕೂಟ ಸರ್ಕಾರದಲ್ಲಿ ಮೋದಿ ಹಿಡಿತವನ್ನು ದುರ್ಬಲಗೊಳಿಸಲಿದೆ ಮತ್ತು ಬಹು ಅಪೇಕ್ಷಿತ ಸಾಂಸ್ಥಿಕ ಸುಧಾರಣೆಗೆ ಕಾರಣವಾಗಲಿದೆ. ಅದಾನಿಯ ಅವರ ವ್ಯವಹಾರದ ತೊಂದರೆಗಳಿಂದ ಪ್ರಧಾನಿ ಮೋದಿ ದುರ್ಬಲರಾಗುತ್ತಾರೆ ಎಂದು ಅಮೆರಿಕಾದ ಕೋಟ್ಯಾಧಿಪತಿ 92 ವರ್ಷದ ಜಾರ್ಜ್ ಸೊರೊಸ್ ಈ ವರ್ಷದ ಫೆಬ್ರವರಿಯಲ್ಲಿ ಜರ್ಮನಿಯ ಮ್ಯೂನಿಚ್ನಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಹೇಳಿದ್ದರು.