ನೆಹರೂ ವೈಜ್ಞಾನಿಕ ದೃಷ್ಟಿ ಕುರಿತು ಕುವೆಂಪು ಬರಹ

Date:

"ನೆಹರೂ ಮೂಢ ಮತಾಚಾರದ ಮಂಕುದಿಣ್ಣೆಯಲ್ಲ; ಅಧ್ಯಾತ್ಮ ಮತ್ತು ವಿಜ್ಞಾನಗಳ ಸರ್ವಶ್ರೇಷ್ಠ ನಿಧಿ ಮತ್ತು ಪ್ರತಿನಿಧಿ. ದೇಶದ ತರುಣರು ರಾಷ್ಟ್ರಹಾನಿಕರವಾದ ಮತ್ತು ಛಿದ್ರಕಾರಕವಾದ ಪುರೋಹಿತ ವರ್ಗದವರ ಮತೀಯ ಮೌಢ್ಯವನ್ನು ಹೊರತಳ್ಳಿ, ನೆಹರೂ ಅವರ ವಿಚಾರ ಮಾರ್ಗವನ್ನು ವೈಜ್ಞಾನಿಕ ದೃಷ್ಟಿಯಿಂದ ಅನುಸರಿಸಬೇಕು.." ನೆಹರೂ ಇಹಲೋಕ ತ್ಯಜಿಸಿದ ದಿನದ ನೆನಪಿಗಾಗಿ ಕುವೆಂಪು ಅವರ ಹಳೆಯ ಅಪರೂಪದ ಬರಹ.

ಇಂದಿನ ಜಗಜ್ಜೀವನದಲ್ಲಿ ಮತ ಮತ್ತು ರಾಜಕೀಯಗಳಿಗೆ ಮೀಸಲಾಗಿರುವ ಸ್ಥಾನವನ್ನು ಅಧ್ಯಾತ್ಮ ಮತ್ತು ವಿಜ್ಞಾನಗಳು ಆಕ್ರಮಿಸಿಕೊಳ್ಳದಿದ್ದರೆ ಮುಂದಿನ ಮಾನವನ ಬದುಕು ಶಾಂತಿ ನೆಮ್ಮದಿಗಳನ್ನು ಕಾಣಲಾರದು ಎಂದು ವಿನೋಬಾಜಿ ಹೇಳಿದ್ದಾರೆ.

ವೈಜ್ಞಾನಿಕ ದೃಷ್ಟಿ ಮತ್ತು ವಿಚಾರಬುದ್ಧಿ ಎರಡೂ ಮೂರ್ತಿವೆತ್ತಂತಿದ್ದ ದಿವಂಗತ ಜವಾಹರಲಾಲ್ ನೆಹರೂ ಆ “ಅಧ್ಯಾತ್ಮ ಮತ್ತು ವಿಜ್ಞಾನ”ಗಳಿಗೆ ಸರ್ವೋಚ್ಚ ಪ್ರತಿನಿಧಿಯಾಗಿದ್ದಾರೆ. ಇದುವರೆಗಿನ ನಮ್ಮ ಆಧುನಿಕ ರಾಜಕೀಯ ರಂಗದ ಮುಂದಾಳುಗಳಲ್ಲಿ ವಿಚಾರ ಮತ್ತು ವಿಜ್ಞಾನಗಳನ್ನು ಬೇರೆ ಯಾರೂ ಅವರಂತೆ ಎತ್ತಿಹಿಡಿದಿಲ್ಲ; ಬೇರೆ ಯಾರೂ ಅವರಷ್ಟು ಅನನ್ಯತೆಯಿಂದ ಅವುಗಳ ಪ್ರತಿಷ್ಠಾಪನೆಗಾಗಿ ದುಡಿದಿಲ್ಲ. ಕಾರ್ಖಾನೆ ಕಟ್ಟಿಸಿದರು, ಅಣೆಕಟ್ಟು ಹಾಕಿಸಿದರು, ಮಹಾಕಟ್ಟಡಗಳನ್ನು ನಿರ್ಮಿಸಿದರು, ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳನ್ನೂ ಸಂಶೋಧನಾಲಯಗಳನ್ನೂ ಸ್ಥಾಪಿಸಿದರು, ವಿಜ್ಞಾನಿಗಳಿಗೆ ಮತ್ತು ತಾಂತ್ರಿಕ ತಜ್ಞರಿಗೆ ಪ್ರೋತ್ಸಾಹ ಕೊಟ್ಟರು ಎಂಬಷ್ಟೆ ಕಾರಣಕ್ಕಾಗಿ ಅಲ್ಲ ಅವರು ವೈಜ್ಞಾನಿಕ ದೃಷ್ಟಿಯ ಮತ್ತು ವಿಚಾರಬುದ್ಧಿಯ ಶಿಖರ ವ್ಯಕ್ತಿ ಎಂದು ನಾವು ಹೇಳುತ್ತಿರುವುದು.

ಏಕೆಂದರೆ ಮತಮೂಢರಾಗಿ, ಆಚಾರಾಂಧರಾಗಿರುವ ಇತರ ಎಷ್ಟೋ ಚುನಾಯಿತ ಮಂತ್ರಿಗಳೂ ಅವುಗಳನ್ನು ಅನಿವಾರ್ಯವಾದ ಆರ್ಥಿಕ ಕಾರಣಗಳಿಂದಾಗಿಯೇ ಮಾಡಬಹುದಾಗಿತ್ತು ಮತ್ತು ರಾಜ್ಯಗಳಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಾಡುತ್ತಲೂ ಇದ್ದಾರೆ. ವೈಜ್ಞಾನಿಕ ವಿದ್ಯೆಯನ್ನು ಲೌಕಿಕ ಅಭ್ಯುದಯಗಳಿಗೆ ಪ್ರಯೋಗಿಸಿದ ಮಾತ್ರದಿಂದಲೆ ನಾವು ಹೇಳುತ್ತಿರುವ ವೈಜ್ಞಾನಿಕ ದೃಷ್ಟಿ ಸಂಪನ್ನತೆ ಸಿದ್ಧವಾಗಿಬಿಡುವುದಿಲ್ಲ. ಎಷ್ಟೋ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರೊಫೆಸರುಗಳೂ ವಿಜ್ಞಾನದ ಪಾಠಗಳನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬೋಧಿಸಿದರೂ ಮನೆಯಿಂದ ಹೊರಡುವಾಗ ರಾಹುಕಾಲ ಗುಳಿಕಕಾಲಗಳಿಗಾಗಿ ಕ್ಯಾಲೆಂಡರನ್ನೊ ಪಂಚಾಂಗವನ್ನೊ ನೋಡುವುದನ್ನು ನಾವು ಕಂಡಿಲ್ಲವೆ? ಅವರು ಭೌತಶಾಸ್ತ್ರ ರಸಾಯನ ಶಾಸ್ತ್ರಗಳ ಭಾರಿ ಸರಕನ್ನು ಸಮರ್ಥವಾಗಿ ಹೊರುವ ಹೇಸರಗತ್ತೆಗಳಾಗುತ್ತಾರೆಯೆ ಹೊರತು ವೈಜ್ಞಾನಿಕ ದೃಷ್ಟಿ ಸಂಪನ್ನರಾದ ವಿಚಾರಮತಿಗಳಾಗುವುದಿಲ್ಲ. ಯಾರ ವಿಚಾರ ಮತ್ತು ವಿಜ್ಞಾನ ಅವರ ಮತಿಯನ್ನೆ ಪ್ರವೇಶಿಸಿ ಪರಿವರ್ತಿಸಿದೆಯೊ ಅಂಥವರನ್ನು ಮಾತ್ರ ವೈಜ್ಞಾನಿಕ ದೃಷ್ಟಿ ಸಂಪನ್ನರೆಂದು ಕರೆಯುತ್ತೇವೆ. ಬರಿಯ ಲೌಕಿಕ ಸೃಷ್ಟಿಯಿಂದಲ್ಲದೆ ಅವರು ದೃಷ್ಟಿಯಿಂದಲೂ ವಿಜ್ಞಾನಿಗಳಾಗಿರಬೇಕು; ವಿಚಾರಮತಿಗಳಾಗಿರಬೇಕು. ನೆಹರೂ ಅಂತಹ ವೈಜ್ಞಾನಿಕ ದೃಷ್ಟಿಯ ಧೀಮಂತರಾಗಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?: ಮಾತೇ ಕತೆ – ಲಲಿತಾ ಸಿದ್ದಬಸವಯ್ಯ ಸಂದರ್ಶನ | ‘ಲೋಕದ ಲೆಕ್ಕದಲ್ಲಿ ಕೊಲೆಯಾದರೂ ಕತೆಯಾಗಿ ಉಳಿದುಕೊಂಡ ಜಿಲ್ಲಾಧಿಕಾರಿ!’

ಒಂದು ನಿದರ್ಶನವನ್ನು ತೆಗೆದುಕೊಳ್ಳಿ. ಭಾರತ ದೇಶದ ಮತೀಯ ಮೂರ್ಖ ಸಮುದಾಯವೆಲ್ಲ-ಅವಿದ್ಯಾವಂತರಾದ ಸಾಮಾನ್ಯರೂ ವಿಶ್ವವಿದ್ಯಾನಿಲಯಗಳಲ್ಲಿ ಮಹೋನ್ನತ ಪದವಿಗಳನ್ನು ಪಡೆದು ವಿದ್ಯಾಪೀಠಗಳಲ್ಲಿ ಮತ್ತು ಸರಕಾರದ ಸ್ಥಾನಗಳಲ್ಲಿ ಉಚ್ಚಶ್ರೇಣಿಗಳಲ್ಲಿ ರಂಜಿತರಾಗಿರುವವರೂ, -ಅಷ್ಟಗ್ರಹಕೂಟದ ಅಮಂಗಳ ಪರಿಹಾರಾರ್ಥವಾಗಿ, ಅದರಿಂದೊದಗುವ ದುಷ್ಪರಿಣಾಮವನ್ನು ತಡೆಗಟ್ಟಲೆಂದು ಹಾಸ್ಯಾಸ್ಪದವಾದ, ಮತ್ತು ಮಹಾ ನಷ್ಟಕರವಾದ ಯಾಗ, ಮಂತ್ರ, ತಂತ್ರ, ಪೂಜೆ ಮೊದಲಾದ ಮೌಢ್ಯಗಳಲ್ಲಿ ನಿರತರಾಗಿದ್ದಾಗ, ಪ್ರವರ್ಧಮಾನತೆಯ ದಾರಿಯಲ್ಲಿ ಇನ್ನೂ ಕುಂಟುತ್ತಾ ಏಳುತ್ತಾ ಬೀಳುತ್ತಾ ಸಾಗುತ್ತಿರುವ ನಮ್ಮ ಬಡದೇಶದಲ್ಲಿ ಮಾಡಲೇಬೇಕಾದ ಸಹಸ್ರಾರು ಅಭ್ಯುದಯದ ಕಾರ್ಯಗಳು ನಮ್ಮ ಉದ್ಯಮಶೀಲತೆಯನ್ನು ಬಾಯಿಬಿಟ್ಟು ಹಾರೈಸುತ್ತಿರುವಾಗ, ಮಾಡುವ ಆವಶ್ಯಕರ್ತವ್ಯಗಳನ್ನೆಲ್ಲ ಮೂಲೆಗೊತ್ತಿ ನಿಲ್ಲಿಸಿ, ಜಗದ್ಗುರುಗಳಿಂದಲೂ ರಾಜ್ಯಪಾಲರುಗಳಿಂದಲೂ ಬೆಂಕಿಗೆ ತುಪ್ಪ ಹೊಯ್ಯಿಸುವ ಅಥವಾ ಜರತಾರಿ ಸೀರೆಗಳಿಗೆ ಘೃತಸ್ನಾನ ಮಾಡಿಸಿ ಅವನನ್ನು ಹವ್ಯವಾಹನನಿಗೆ ಅರ್ಪಿಸುವ ಮಂಕಿನ ಮಹತ್ಕಾರ್ಯದಲ್ಲಿ ತೊಡಗಿದ್ದಾಗ, ಸಮಗ್ರ ರಾಷ್ಟ್ರದ ಸಾರ್ವಜನಿಕ ಮತ್ತು ರಾಜಕೀಯ ಮುಂದಾಳುಗಳಲ್ಲಿ ನೆಹರೂ ಒಬ್ಬರೇ, ಒಂಟಿಯಾಗಿ ನಿಂತು, ಪ್ರತಿಭಟನೆಯ ತಮ್ಮ ವೈಜ್ಞಾನಿಕದೃಷ್ಟಿಯನ್ನು ಘೋಷಿಸಲಿಲ್ಲವೆ? ಇತರ ಮತಮೂಢ ಮುಂದಾಳುಗಳ ಮತ್ತು ವೈಜ್ಞಾನಿಕ ವೇಷದ ಪ್ರಚ್ಛನ್ನ ಮೂಢ ಜ್ಯೋತಿಷ್ಕರ ನಿಂದನೆ, ಮೂದಲೆ, ಎಚ್ಚರಿಕೆ, ಶಾಪಗಳಿಗೆ ಸೊಪ್ಪುಹಾಕದೆ ತಮ್ಮ ವೈಮಾನಿಕ ಪ್ರಯಾಣ ಕರ್ತವ್ಯವನ್ನು ಸಹ್ಯಾದಿ ಪರ್ವತಗಳ ಅಪಾಯಕರ ರಂಗದ ಮೇಲೆಯೂ ನಿಷ್ಠೆಯಿಂದ ಕೈಕೊಂಡು ಪಾಲಿಸಲಿಲ್ಲವೆ?

ಅವರ ಬದುಕಿನ ಸಂದೇಶದಲ್ಲಿ ಮಾತ್ರವಲ್ಲದೆ ಸಾವಿನ ಸಂದೇಶದಲ್ಲಿಯೂ ಅವರು ತಮ್ಮ ವೈಜ್ಞಾನಿಕ ವಿಚಾರ ನಿಷ್ಠೆಯನ್ನೆ ಮೆರೆದು ಹೋಗಿದ್ದಾರೆ. ಅವರು ತೀರಿಕೊಂಡಾಗ ದೆಹಲಿಯ ಆಕಾಶವಾಣಿಯಲ್ಲಿ ಒಬ್ಬರು ರಾಷ್ಟ್ರಪತಿಗಳಿಂದ ಉದ್ಘಾಟಿತವಾಗಿ, ಮತ್ತೊಬ್ಬರು ರಾಜ್ಯಪಾಲ ಬಂಧುವಿನಿಂದ ಪಠಿತವಾದ ಅವರ ‘ಮರಣ ಶಾಸನ’ ಅವರ ವೈಜ್ಞಾನಿಕ ದೃಷ್ಟಿಗೂ ವಿಚಾರಬುದ್ಧಿಗೂ ಕಲಶದೇದೀಪ್ಯವಾಗಿ ಕಿರೀಟವಿಟ್ಟಂತಿಲ್ಲವೆ?

ಆದರೆ ಮತಮೌಢ್ಯದ ಮಹಾಪ್ರಾಚೀನ ಜಾಢ್ಯದಿಂದ ವಿಚಾರಜಡವಾಗಿರುವ ನಮ್ಮ ದೇಶ ನೆಹರೂ ಅವರ ಆ ಸಂದೇಶಕ್ಕೆ ಎಷ್ಟರ ಮಟ್ಟಿಗೆ ಗಮನ ಕೊಟ್ಟಿದೆ? ಎಷ್ಟರ ಮಟ್ಟಿಗೆ ಅದನ್ನು ಅರ್ಥಮಾಡಿಕೊಂಡಿದೆ? ಮತ್ತೆಷ್ಟರಮಟ್ಟಿಗೆ ಅನುಷ್ಠಾನಕ್ಕೆ ತಂದಿದೆ? ಮತ್ತು ಅನುಷ್ಠಾನಕ್ಕೆ ತರಲಾದರೂ ಪ್ರಯತ್ನ ಮಾಡುತ್ತಿದೆ?

ವಿಜ್ಞಾನ ವಿದ್ಯೆಯೊಂದಿಗೆ ವೈಜ್ಞಾನಿಕ ದೃಷ್ಟಿಯೂ ವಿಚಾರಬುದ್ಧಿಯೂ ಸಾಧಿತವಾಗುತ್ತದೆ ಎಂದು ಹಾರೈಸಿದ್ದವರಿಗೆಲ್ಲ ಅತ್ಯಂತ ನಿರಾಶೆಯಾಗುವ ಪರಿಸ್ಥಿತಿ ಈ ದೇಶದಲ್ಲಿದೆ. ನಮ್ಮ ರಾಜ್ಯಾಂಗವೇನೊ ವೈಜ್ಞಾನಿಕದೃಷ್ಟಿಗೂ ವಿಚಾರಬುದ್ದಿಗೂ ತಂದೊಡ್ಡಿರುವ ರಕ್ಷಾಪೀಠದಂತಿದೆ. ಆದರೆ ಹಳೆಯ ಮತೀಯ ಭ್ರಾಂತಿಗಳು ಧರ್ಮಾಚರಣೆಯ ಹೆಸರಿನಲ್ಲಿ ಆ ದೃಷ್ಟಿ ಮತ್ತು ಬುದ್ಧಿ ಎರಡಕ್ಕೂ ವಿಘ್ನಪ್ರಾಯವಾಗಿ ವಿಜೃಂಭಿಸುತ್ತಿದೆ. ಶ್ರೀಸಾಮಾನ್ಯನ ಚೇತನ ಆಚಾರದ ಯೂಪಕ್ಕೆ ಕಟ್ಟುಗೊಂಡು ಅಸಹಾಯವಾಗಿ ಅರಚುತ್ತಿದೆ. ಇಲ್ಲದಿದ್ದರೆ, ನೆಹರೂ ತಮ್ಮ ‘ಮರಣ ಶಾಸನ’ದಲ್ಲಿ ಎಂತಹ ಜಡಮತಿಗೂ ಅರ್ಥವಾಗುವಂತೆ ಅತ್ಯಂತ ವಾಚ್ಯವಾಗಿ “ನನಗೆ ಯಾವ ಶ್ರಾದ್ಧಾದಿ ಮತೀಯ ಕರ್ಮಾಚರಣೆಯಲ್ಲಿಯೂ ನಂಬುಗೆಯಿಲ್ಲವಾದ್ದರಿಂದ ನನ್ನ ನಿಧನಾನಂತರ ನನ್ನ ಅಪರಕ್ರಿಯೆಯಲ್ಲಿ ಅವುಗಳನ್ನು ಆಚರಿಸಬಾರದು”, ಎಂದು ಹೇಳಿದ್ದರೂ ಅವರ ಬೂದಿಯನ್ನು ಗೌರವಿಸಲು ತಂದ ಒಂದು ರಾಜ್ಯದ ಮಂತ್ರಿಮುಖ್ಯರೂ ಮತ್ತು ರಾಜ್ಯಪಾಲರೂ ಆ ಭಸ್ಮಾವಶೇಷವನ್ನು ಹೊಳೆಯಲ್ಲಿ ತೇಲಿಬಿಟ್ಟು ಪುರೋಹಿತರಿಂದ ಶ್ರಾದ್ಧಮಂತ್ರಗಳನ್ನು ಹೇಳಿಸಿ ಅಪಚಾರವೆಸಗುತ್ತಿದ್ದ ದೃಶ್ಯ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತೇನು?

ನೆಹರೂ ಅವರು ವೈಜ್ಞಾನಿಕ ದೃಷ್ಟಿಯಲ್ಲಿ ಮೆಚ್ಚಿಗೆ ಇರುವವರಲ್ಲಿಯೂ ಕೆಲವರು ಅವರನ್ನು ನಾಸ್ತಿಕರೆಂದು ವರ್ಣಿಸಿರುವುದನ್ನೂ ನಾವು ನೋಡಿದ್ದೇವೆ. ಶ್ರಾದ್ಧಾದಿ ಕರ್ಮಗಳಲ್ಲಿ ತಿರಸ್ಕಾರವನ್ನು ಅವರು ತಮ್ಮ ‘ಮರಣ ಶಾಸನ’ದಲ್ಲಿ ಪ್ರದರ್ಶಿಸಿದ ಮೇಲಂತೂ ಅನೇಕರು ಅವರನ್ನು ನಾಸ್ತಿಕರ ಗುಂಪಿಗೆ ಸೇರಿಸಿಬಿಟ್ಟಿದ್ದಾರೆ. ಒಂದು ಪತ್ರಿಕೆ ಅವರನ್ನು ನಾಸ್ತಿಕರೆಂದೂ ಗಾಂಧೀಜಿಯನ್ನು ಆಸ್ತಿಕರೆಂದೂ ವರ್ಣಿಸಿದ್ದನ್ನೂ ನಾವು ಕಂಡಿದ್ದೇವೆ. ಆದರೆ ಆ ಭಾವನೆ ಅತ್ಯಂತ ಸತ್ಯದೂರವಾದದ್ದು, ನಮ್ಮವರು ಬುದ್ಧನನ್ನು ನಾಸ್ತಿಕನೆಂದೂ ಬೌದ್ಧ ಮತ್ತು ಜೈನ ಧರ್ಮಗಳನ್ನು ನಾಸ್ತಿಕ ಮತಗಳೆಂದೂ ವರ್ಣಿಸಿದ್ದಂತೆ! ವಿಗ್ರಹ ಪೂಜಕನು ನಿರಾಕಾರವಾದಿಯನ್ನು ನಾಸ್ತಿಕನೆಂದು ವರ್ಣಿಸಿದರೆ ಅದು ನಿಜವಾಗುತ್ತದೆಯೆ? ತನ್ನ ಆಕಾರದ ಅಥವಾ ತಾನು ಅರಿತ ಪ್ರಕಾರದ ದೇವರೆ ದೇವರು; ಭಗವದ್ವಸ್ತು ತನಗರಿಯದ ಅಥವಾ ತಾನು ಗ್ರಹಿಸಲಾರದ ಅನ್ಯಾಕಾರ ಅಥವಾ ಅನ್ಯಪ್ರಕಾರಗಳಿಂದ ಭಾವಿತವಾದರೆ ಅದು ದೇವರಲ್ಲ ಎಂದು ವಾದಿಸುವವನು ಮೂರ್ಖನಲ್ಲದಿದ್ದರೆ ಶಠನಂತೂ ನಿಶ್ಚಯ.

ಯಾರಿಗೆ ತನಗಿಂತಲೂ ದೊಡ್ಡದೊಂದಿದೆ, -‘ಅಸ್ತಿ’-ಎಂಬ ಪ್ರಜ್ಞೆ ಇರುವುದೊ ಅವರೆಲ್ಲ ಆಸ್ತಿಕರೆ. ನೆಹರೂ ಅವರ ಲೇಖನಗಳಲ್ಲಿ, ಭಾಷಣಗಳಲ್ಲಿ, ಪತ್ರಗಳಲ್ಲಿ, ಬದುಕಿನ ನಡತೆಯಲ್ಲಿ, ಹಿರಿಯರೊಡನೆಯ ವ್ಯವಹಾರಗಳಲ್ಲಿ ಈ ‘ಅಸ್ತಿಪ್ರಜ್ಞಾ’ ರೂಪದ ಆಸ್ತಿಕತೆ ಎಲ್ಲೆಲ್ಲಿಯೂ ಮೂಡಿರುವುದನ್ನು ನಾವು ಕಾಣುತ್ತೇವೆ. ಅವರು ಆಸ್ತಿಕ ಅಗ್ರೇಸರ!

ಜನಿವಾರ ಹಾಕಿಕೊಳ್ಳಲಿಲ್ಲ, ನಾಮ ಹಚ್ಚಿಕೊಳ್ಳಲಿಲ್ಲ, ವಿಭೂತಿ ಬಳಿದುಕೊಳ್ಳಲಿಲ್ಲ, ದೇವಾಲಯಗಳಿಗೆ ಆರಾಧನೆಗಾಗಿ ಹೋಗಲಿಲ್ಲ, ತೀರ್ಥಗಳಿಗೆ ಯಾತ್ರೆ ಹೋಗಿ ಮೀಯಾಲಿಲ್ಲ, ಪುರೋಹಿತರ ಪಾದ ತೊಳೆದು ನೀರು ಕುಡಿಯಲಿಲ್ಲ, ಪೂಜಾರಿಗಳಿಗೆ ಅಡ್ಡಬೀಳಲಿಲ್ಲ, ಅಡ್ಡಪಲ್ಲಕಿಯ ಜಗದ್ಗುರುಗಳಿಗೆ ಕೈಮುಗಿದು ಮಾಲೆ ಹಾಕಲಿಲ್ಲ, ರಾಹುಕಾಲ ಗುಳಿಕಕಾಲ ನೋಡಲಿಲ್ಲ, ನಿಮಿತ್ತ ನೋಡಿಸಲಿಲ್ಲ, ಪಂಚಾಂಗ ತೆರೆಯಲಿಲ್ಲ, ಜೋತಿಷ್ಯ ನಂಬಲಿಲ್ಲ. ಗ್ರಹಣಕಾಲದಲ್ಲಿ ತಂಬಟೆ ಬಡಿದು ಸೂರ್ಯನನ್ನು ರಾಹುವಿನಿಂದ ಪಾರು ಮಾಡುವ ಭಾರತೀಯ ಡಾನ್ ಕ್ವಿಕ್ಸೋಟು ಆಗಲಿಲ್ಲ-ಇತ್ಯಾದಿಗಳಿಗಾಗಿ ಅವರನ್ನು ನಾಸ್ತಿಕ ಎಂದರೆ-ಅವರಂತಹ ನಾಸ್ತಿಕರೊಡನೆ ನರಕವೂ ಲೇಸು; ಮೂಢಮತಾಚಾರದ ಯಾವಾತನೊ ಒಬ್ಬ ಪೂರ್ಣಾನಂದ, ಭ್ರಾಂತ ಜೋತಿಷಿ ಯಾವಾತನೊ ಒಬ್ಬ ರಾಮಣ್ಣ, ಮತ್ತಾರೊ ಒಬ್ಬ ಮಠಾಧಿಪತಿ ಸೀನಣ್ಣ ಮುಂತಾದವರು ಇರುವ ಸ್ವರ್ಗವೂ ಹೇಸು! -ಎಂದು ಹೇಳಬೇಕಾಗುತ್ತದೆ.

ತ್ಯಾಗದಲ್ಲಿ, ದೇಶಪ್ರೇಮದಲ್ಲಿ, ತತ್ತ್ವನಿಷ್ಠೆಯಲ್ಲಿ ಪರಾನುಕಂಪೆಯಲ್ಲಿ, ಕೆಚ್ಚಿನಲ್ಲಿ, ದೃಢತೆಯಲ್ಲಿ, ಮೇಧಾಶಕ್ತಿಯಲ್ಲಿ, ವಾಗ್ಮಿತೆಯಲ್ಲಿ, ಲೇಖನ ಪ್ರತಿಭೆಯಲ್ಲಿ, ಸಮನ್ವಯ ದೃಷ್ಟಿಯಲ್ಲಿ ಅಕುಟಿಲಭಾವ ಮತ್ತು ಋಜುವರ್ತನೆಗಳಲ್ಲಿ ನೆಹರೂ ಅಸಾಧಾರಣ ವ್ಯಕ್ತಿಯಾಗಿದ್ದರು. ಆ ಒಂದೊಂದು ಗುಣ ಪ್ರಕಾಶನದ ಹಿಂದೆಯೂ ಅದಕ್ಕೆ ಪೀಠ ಭಿತ್ತಿಯಾಗಿ ಯಾವುದೋ ಒಂದು ಮಹತ್ತಾದ ಆಧ್ಯಾತ್ಮಿಕತೆ- ಅದು ಛದ್ಮವೇಷಿಯಾಗಿರಬಹುದು ಅಥವಾ ಪ್ರಚ್ಛನ್ನವಾಗಿರಲೂಬಹುದು – ಬೆಂಬಲವಾಗಿರದಿದ್ದರೆ ಅವರ ಬದುಕಿನ ಬೆನ್ನುಮೂಳೆ ಅವರು ಹೊತ್ತಿದ್ದ ಭಾರಕ್ಕೆ ಎಂದೋ ಕುಸಿದು ಬೀಳುತ್ತಿತ್ತು. ಕಡೆಗೂ ಅದು ಕುಸಿದು ಬಿದ್ದುದಕ್ಕೆ ಕಾರಣ ಆ ಆಧ್ಯಾತ್ಮಿಕತೆಯ ಬೆಂಬಲ ತಪ್ಪಿದುದರಿಂದಲೆ ಎಂದು ತೋರುತ್ತದೆ.

ಇದನ್ನು ಓದಿದ್ದೀರಾ?: ದೊರೆಸ್ವಾಮಿ ನಮನ: ಶತಾಯುಷಿಯ ಸ್ಫೂರ್ತಿಯಲಿ ಹೋರಾಟದ ಹಾದಿ ಅರಳಲಿ

ಏಕೆಂದರೆ ಅವರ ಕೊನೆ ಅಷ್ಟು ಬೇಗನೆ, ಅಷ್ಟು ಅನಿರೀಕ್ಷಿತವಾಗಿ, ಅಷ್ಟು ಆಕಸ್ಮಿಕವೆಂಬಂತೆ ಶೀಘ್ರವಾಗಿ ಆಗುತ್ತದೆ ಎಂದು ಯಾರೂ ಕನಸಿನಲ್ಲಿಯೂ ಊಹಿಸಿರಲಿಲ್ಲ. ಆ ಆರೋಗ್ಯ, ಆ ಉಲ್ಲಾಸ, ಆ ಉತ್ಸಾಹ, ಆ ಧೈರ್ಯ, ಆ ಸ್ಥೈರ್ಯ, ಆ ಬಾಲಕಸದೃಶ ಮುಧಮನೋಭಾವ, ರಾಜಕೀಯದ ಸಮುದ್ರಮಂಥನದಲ್ಲಿ ಉದಿಸಿದ ಎಷ್ಟು ಹಾಲಾಹಲವನ್ನು ಹೀರಿಕೊಂಡರೂ ತನ್ನ ಶಿಶುಸಹಜವಾದ ಅಮೃತತ್ತ್ವವನ್ನು ಒಂದಿನಿತೂ ಕಲುಷಿತವನ್ನಾಗಿ ಮಾಡಿಕೊಳ್ಳದ ಹರಶಿರಶ್ಚಂದ್ರಿಕಾ ಉಪಮವಾದ ಕ್ಷೀರಶುಭ್ರ ಚೇತನ-ಅಷ್ಟು ತಟಕ್ಕನೆ, ಅಷ್ಟು ಬೇಗನೆ ತನ್ನ ಲೀಲಾರಂಗವನ್ನು ತ್ಯಜಿಸಿ ಹೋದುದಕ್ಕೆ ಮುಖ್ಯಕಾರಣ-ಅವರು ತಮ್ಮ ಜೀವನಾದ್ಯಂತವೂ ರಕ್ಷಿಸಿ, ಪೋಷಿಸಿ, ಹಾರೈಸಿಕೊಂಡು ಬಂದಿದ್ದ ಮಹಾ ಧ್ಯೇಯಕ್ಕೆ ಅನಿರೀಕ್ಷಿತ ದಿಕ್ಕಿನಿಂದ ಒದಗಿದ ಮಿತ್ರದ್ರೋಹರೂಪದ ಧಕ್ಕೆಯೆ: ಚೀಣೀಯ ಧಾಳಿ! ವೈರಿಯ ಸೈನಿಕ ಶಕ್ತಿಗಲ್ಲ ಆ ಚೇತನ ಅಳುಕಿದ್ದು; ಸ್ವದೇಶದ ಅಸಿದ್ಧತೆಗಲ್ಲ ಅವರ ಮನಸ್ಸು ಮುರಿದದ್ದು; ಅವರ ಜೀವನದ ಸಾರಸರ್ವಸ್ವವಾದ ಜಗತ್ತಿನ ಸ್ನೇಹ ಮತ್ತು ಶಾಂತಿ ಸ್ಥಾಪನೆಯ ದಿವ್ಯ ಧ್ಯೇಯಕ್ಕೆ ಬಿದ್ದ ಕೊಡಲಿಪೆಟ್ಟು, ಬೆನ್ನಿರಿತ! ಬದುಕಿಗೆ ಆಧಾರವಾಗಿದ್ದ ಒಂದು ಆಧ್ಯಾತ್ಮಿಕವಾದ ಶಾಶ್ವತ ಮೌಲ್ಯವೆ-ಪುರುಷಾರ್ಥೋತ್ತಮವೆ-ವಿನಷ್ಟವಾದಂತಾಗಿ ಅವರ ಆಸ್ಮಿತಾಸಕ್ತಿಯ ತಾಯಿಬೇರಿಗೆ ಬೆನ್ನೀರು ಹೊಯ್ದುಬಿಟ್ಟಿತು!

ಮೇಲೆ ಉಲ್ಲೇಖಿಸಿದ ಗುಣಗಣಗಳಲ್ಲಿ ನೆಹರೂ ವಿಶೇಷ ಅಸಾಧಾರಣ ವ್ಯಕ್ತಿಯಾಗಿದ್ದರು ಎಂಬುದೇನೋ ನಿಜ. ಆದರೆ ಆ ಗುಣಗಳಲ್ಲಿ ಅವರಿಗೆ ಸಮಸ್ಪರ್ಧಿಗಳಾಗಿ ನಿಂತವರೂ ನಿಲ್ಲುವವರೂ ಸ್ವಾತಂತ್ರ್ಯಸಂಗ್ರಾಮ ಸಮಯದಲ್ಲಿ ಅನೇಕರು ಆಗಿಹೋಗಿದ್ದಾರೆ, ಕೆಲವರಾದರೂ ಇನ್ನೂ ಇದ್ದಾರೆ. ಈ ಒಂದು ವಿಷಯದಲ್ಲಿ-ವೈಜ್ಞಾನಿಕ ದೃಷ್ಟಿ ಮತ್ತು ವಿಚಾರಬುದ್ಧಿಯಲ್ಲಿ-ಮಾತ್ರ ರಾಜಕೀಯ ಮತ್ತು ಸಾರ್ವಜನಿಕರಂಗದಲ್ಲಿರುವ ಇತರರಾರೂ ಅವರಿಗೆ ಹೆಗಲೆಣೆಯಾಗುವುದಿರಲಿ ಅವರ ಮೊಣಕಾಲೆತ್ತರಕ್ಕೂ ಬರಲಾರರು. ಅಲ್ಲಿ ಅವರು ಏಕೈಕ ಗಗನೋನ್ನತ ವ್ಯಕ್ತಿಯಾಗಿ ಗೊಮ್ಮಟೋಪಮವಾಗಿ ಭಾರತೀಯ ರಾಜಕೀಯ ದಿಗಂತವನ್ನೆಲ್ಲ ಆಕ್ರಮಿಸಿ ನಿಂತಿದ್ದಾರೆ, ಲೋಕ ಲೋಚನ ಮಹಾ ಧ್ಯೇಯಮೂರ್ತಿಯಾಗಿ, ತಮ್ಮ ಮಹದ್ಗುರು ಪೂಜ್ಯ ಮಹಾತ್ಮಾ ಗಾಂಧೀಜಿಯ ಆಶೀರ್ವಾದ ಹಸ್ತಮುದ್ರೆಯ ಆಶ್ರಯದಲ್ಲಿ!

ನೆಹರೂ ಮೂಢ ಮತಾಚಾರದ ಮಂಕುದಿಣ್ಣೆಯಲ್ಲ; ಅಧ್ಯಾತ್ಮ ಮತ್ತು ವಿಜ್ಞಾನಗಳ ಸರ್ವಶ್ರೇಷ್ಠ ನಿಧಿ ಮತ್ತು ಪ್ರತಿನಿಧಿ. ದೇಶದ ತರುಣರು ರಾಷ್ಟ್ರಹಾನಿಕರವಾದ ಮತ್ತು ಛಿದ್ರಕಾರಕವಾದ ಪುರೋಹಿತ ವರ್ಗದವರ ಮತೀಯ ಮೌಢ್ಯವನ್ನು ಹೊರತಳ್ಳಿ, ನೆಹರೂ ಅವರ ವಿಚಾರ ಮಾರ್ಗವನ್ನು ವೈಜ್ಞಾನಿಕ ದೃಷ್ಟಿಯಿಂದ ಅನುಸರಿಸದಿದ್ದರೆ ಭಾರತೀಯ ಸಂಸ್ಕೃತಿಗೆ ಉಳಿಗಾಲವಿಲ್ಲ; ಭಾರತೀಯರಿಗೆ ಕೇಡು ತಪ್ಪಿದ್ದಲ್ಲ; ಭಾರತದ ಐಹಿಕ ಮತ್ತು ಪಾರಲೌಕಿಕವಾದ ಅಭ್ಯುದಯ ಮತ್ತು ಶ್ರೇಯಸ್ಸುಗಳಿಗೂ ಸ್ವತಃಸಿದ್ಧವಾಗುತ್ತದೆ-ಹಾನಿ ಮತ್ತು ಗ್ಲಾನಿ!

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ಸಂದರ್ಶನ | ಬದ್ಧತೆ ಮೈಗೂಡಿಸಿಕೊಂಡು ಓದಿದರೆ ಕೋಚಿಂಗ್‌ ಅಗತ್ಯವಿಲ್ಲ

ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) 2023ನೇ ಸಾಲಿನಲ್ಲಿ ನಡೆಸಿದ್ದ ನಾಗರಿಕ...

ಕೊಲೆಗಾರ ಮುಸ್ಲಿಂ; ಬಿಜೆಪಿಯ ತಟ್ಟೆಗೆ ಮೃಷ್ಟಾನ್ನ

ಹುಬ್ಬಳ್ಳಿಯ ಘಟನೆಯಲ್ಲಿ ಎರಡು ಯುವ ಜೀವಗಳು ತಮ್ಮ ಬದುಕನ್ನು ಕಳೆದುಕೊಂಡಿವೆ. ಕೊಲೆಗಾರ...

ಸೌಜನ್ಯ ಹೋರಾಟಗಾರರಿಂದ NOTA ಅಭಿಯಾನ ; ಯಾರಾಗಲಿದ್ದಾರೆ ನೋಟಾದ ಫಲಾನುಭವಿ ?

ನೋಟಾ ಅಭಿಯಾನ ನಡೆಸುತ್ತಿರುವವರು ಸೌಜನ್ಯಪರ ಹೋರಾಟಗಾರರು. ಇವರೆಲ್ಲರೂ ಬಿಜೆಪಿ,ಆರೆಸ್ಸೆಸ್‌, ಭಜರಂಗದಳ, ವಿಎಚ್‌ಪಿ...

ಬ್ರಾಹ್ಮಣರಿಂದ ಬ್ರಾಹ್ಮಣರಿಗೆ ಮೋಸ: 24 ಲಕ್ಷ ಕಳೆದುಕೊಂಡು ಭಿಕ್ಷೆ ಬೇಡುತ್ತಿರುವ ಹೆಬ್ಬಾರ್

ಹೆಬ್ಬಾರ್ ಒಬ್ಬರೇ ಅಲ್ಲ, ಬೆಂಗಳೂರಿನ ಬಸವನಗುಡಿಯ ಬ್ರಾಹ್ಮಣರೆಲ್ಲರೂ ಗುರುರಾಘವೇಂದ್ರ ಬ್ಯಾಂಕಿನ ಗ್ರಾಹಕರೇ...