ದೊರೆಸ್ವಾಮಿ ನಮನ: ಶತಾಯುಷಿಯ ಸ್ಫೂರ್ತಿಯಲಿ ಹೋರಾಟದ ಹಾದಿ ಅರಳಲಿ

Date:

ದೊರೆಸ್ವಾಮಿ ಅವರ ಹೋರಾಟದ ಹುಮ್ಮಸ್ಸು ಎಂತಹವರನ್ನೂ ಚಕಿತಗೊಳಿಸುತ್ತಿತ್ತು. ಇಲ್ಲಿ ಏನೂ ಸಾಧ್ಯವಿಲ್ಲವೆನ್ನುವ ಬದಲು; ಇಲ್ಲ, ಇಲ್ಲಿ ಇನ್ನೂ ಒಳ್ಳೆಯವರಿದ್ದಾರೆ ಎಂಬ ಅವರ ಆಶಾವಾದ ಜೊತೆಗಿರುವವರನ್ನೂ ಪ್ರೇರೇಪಿಸುತ್ತಿತ್ತು. ಮೇ 26 ಅವರು ಇಲ್ಲವಾದ ದಿನ; ನೆನಪು ಮಾಡಿಕೊಳ್ಳುವ, ನಮನ ಸಲ್ಲಿಸುವ ದಿನ..   

ಬಡವರ, ಅಸಹಾಯಕರ ಸಮಸ್ಯೆಗಳಿಗಾಗಿ ನಾವಿರುವುದು ಎನ್ನುತ್ತಿದ್ದ, ಅದಕ್ಕಾಗಿಯೇ ಸದಾ ಸಿದ್ಧವಾಗಿದ್ದ ಎಚ್ ಎಸ್ ದೊರೆಸ್ವಾಮಿಯವರು, ಡಿಸೆಂಬರ್ 2019ರಲ್ಲಿ ಪತ್ನಿ ಲಲಿತಮ್ಮನವರು ನಿಧನರಾದ ನಂತರ, ಕೊಂಚ ಕಳೆಗುಂದಿದ್ದರು. ವಯಸ್ಸು ಮತ್ತು ಆರೋಗ್ಯದ ಕಾರಣಕ್ಕೆ ಸಾರ್ವಜನಿಕ ಸಭೆ, ಸಮಾರಂಭ, ಸತ್ಯಾಗ್ರಹ, ಹೋರಾಟ, ಪ್ರತಿಭಟನೆ, ರ್‍ಯಾಲಿಗಳಿಂದ ದೂರವಾಗಿದ್ದರು. ಅವರನ್ನು ಭೇಟಿ ಮಾಡಿ ಮಾತನಾಡಿಸುವವರೂ ಕಡಿಮೆಯಾಗಿದ್ದರು. ಅದು ಸಹಜವಾಗಿಯೇ ಅವರಲ್ಲಿ ಕೊಂಚ ಖಿನ್ನತೆಗೆ ಕಾರಣವಾಗಿತ್ತು. ಆರೋಗ್ಯವೂ ಆಗಾಗ ಕೈಕೊಡುತ್ತಿತ್ತು. ನೂರು ವರ್ಷಗಳ ಕಾಲ ಜನರ ನಡುವೆ ಬಯಲಲ್ಲಿ ಬದುಕಿದ ಜೀವ, ಕೊನೆಯ ಘಟ್ಟದಲ್ಲಿ ಒಬ್ಬಂಟಿಯಾಗಿತ್ತು. ಇಂತಹ ಸಮಯದಲ್ಲಿಯೇ ಕೊರೊನಾ ಸೋಂಕು ತಗುಲಿತ್ತು. ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿ, ಡಾ. ಸಿ.ಎನ್.ಮಂಜುನಾಥ್ ಮತ್ತವರ ಸಿಬ್ಬಂದಿಯ ಕಾಳಜಿ-ಕಕ್ಕುಲತೆಯಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿದ್ದರು.

ಆ ಸಂದರ್ಭದಲ್ಲಿ ಅವರನ್ನು ನೋಡಲು ಹೋದ ರವಿಕೃಷ್ಣಾ ರೆಡ್ಡಿಯವರಿಗೆ, ‘ಈ ಕೊರೋನ ಕಾಲದಲ್ಲಿ ಎಲ್ಲರೂ ಸಂಘಟಿತವಾಗಿ, ಒಗ್ಗಟ್ಟಾಗಿ ಕೆಲಸ ಮಾಡಿ ದೇಶ ಉಳಿಸಿಕೊಳ್ಳಬೇಕು. ಯಾರೂ ಸ್ವಾರ್ಥವನ್ನು ನೋಡಬಾರದು’ ಎಂದಿದ್ದರು. ಅದೇ ಜೀವನೋತ್ಸಾಹ, ಅದೇ ಆಶಾವಾದ, ಅದೇ ನಿಸ್ವಾರ್ಥ.

ಹಿಂದೊಮ್ಮೆ ‘ನಾನೊಬ್ಬ ಸಾಮಾನ್ಯ ಕೆಲಸಗಾರ. ಎಪ್ಪತ್ತು ವರ್ಷಗಳಿಂದಲೂ ಬಡತನ ನಿರ್ಮೂಲನೆಗೆ ಎಲ್ಲ ಸರಕಾರಗಳನ್ನು ಕೇಳಿಕೊಳ್ಳುತ್ತಿದ್ದೇನೆ. ಬಡವರು ಇನ್ನು ಎಷ್ಟು ವರ್ಷ ಬಡವರಾಗಿಯೇ ಇರಬೇಕು? ಗಾಂಧೀಜಿ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ’ ಎಂದು ಸರಕಾರ ಕೊಡಮಾಡುವ `ಮಹಾತ್ಮಗಾಂಧಿ ಸೇವಾ ಪ್ರಶಸ್ತಿ’ ಸ್ವೀಕರಿಸಿ, ಪ್ರಶಸ್ತಿ ಪ್ರದಾನಿಸಿದ ಸರಕಾರದ ಮುಖ್ಯಸ್ಥರಾದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವೇದಿಕೆಯಿಂದಲೇ ಸಲಹೆ ನೀಡಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಷ್ಟೇ ಅಲ್ಲ, ಅವರಿಗೆ ಬಂದ ಪ್ರಶಸ್ತಿಯ ಮೊತ್ತವಾದ ಐದು ಲಕ್ಷವನ್ನು, `ಈ ವಯಸ್ಸಿನಲ್ಲಿ ಇಷ್ಟೊಂದು ದುಡ್ಡು ಇಟ್ಟುಕೊಂಡು ಏನ್ಮಾಡಲಿ’ ಎಂದು ವೇದಿಕೆಯ ಮೇಲೆಯೇ ಹಂಚಿಬಿಟ್ಟರು. ಒಂದು ಲಕ್ಷ ಹೋರಾಟಕ್ಕೆ, ಒಂದು ಲಕ್ಷ ಜಯದೇವ ಹೃದ್ರೋಗ ಸಂಸ್ಥೆಗೆ ಮತ್ತು ಮೂರು ಲಕ್ಷ ತಮ್ಮನ್ನು ಈ ಇಳಿವಯಸ್ಸಿನಲ್ಲಿಯೂ ಜತನದಿಂದ ಕಾಪಾಡುವ ಮಡದಿಗೆ ಕೊಟ್ಟು, ‘ಈಗ ನಿರಾಳ’ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಸಾರ್ವಜನಿಕ ಸೇವೆಗಾಗಿ ಸರಕಾರ ಕೊಟ್ಟ ಆ ಪ್ರಶಸ್ತಿಯ ಮೊತ್ತವನ್ನು ದೊರೆಸ್ವಾಮಿಯವರು, ಮತ್ತೆ ಸಾರ್ವಜನಿಕ ಕ್ಷೇತ್ರದ ಒಳಿತಿಗಾಗಿಯೇ ವಿನಿಯೋಗಿಸಿದ್ದರು. ದೊರೆಸ್ವಾಮಿಯವರು ಕೊರೊನ ಬಾಧಿತರಾದಾಗ, ಅದೇ ಹೋರಾಟಗಾರರು ಮತ್ತು ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿ ಅವರನ್ನು ಮಗುವಿನಂತೆ ನೋಡಿಕೊಂಡಿದ್ದರು. ಕೋವಿಡ್ ಸೋಂಕಿನಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಅವರು, ಅದಾಗಿ ಕೆಲದಿನಗಳ ನಂತರ, ತಮ್ಮ 104ನೇ ವಯಸ್ಸಿನಲ್ಲಿ, ಮೇ 26ರಂದು ಮರಣ ಹೊಂದಿದರು.

ಇದ್ದಷ್ಟು ದಿನವೂ ಜನರಿಗಾಗಿ ಬದುಕಿದ ದೊರೆಸ್ವಾಮಿ ಜನಿಸಿದ್ದು ಬೆಂಗಳೂರಿನ ಹತ್ತಿರದ ಹಾರೋಹಳ್ಳಿಯ ಐಯ್ಯರ್‌ ಕುಟುಂಬದಲ್ಲಿ, ಏಪ್ರಿಲ್ 10, 1918ರಲ್ಲಿ. ಸುಮಾರು 50 ಜನರಿದ್ದ ಕೂಡು ಕುಟುಂಬದಲ್ಲಿ 16 ಮಕ್ಕಳಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸುವಷ್ಟರಲ್ಲಿ, ತಂದೆಯನ್ನು ಕಳೆದುಕೊಂಡ ದೊರೆಸ್ವಾಮಿ ಅಜ್ಜನ ಆರೈಕೆಯಲ್ಲಿ ಬೆಳೆದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ವಿವಿ ಪುರಂನಲ್ಲಿ ಮಾಧ್ಯಮಿಕ, ಕೋಟೆ ಸ್ಕೂಲಿನಲ್ಲಿ ಪ್ರೌಢಶಾಲೆ ಕಲಿತರು. ಆ ದಿನಗಳಲ್ಲಿಯೇ ಮಹಾತ್ಮಗಾಂಧಿಯವರ `ಮೈ ಅರ್ಲಿ ಲೈಫ್’ ಪುಸ್ತಕ ಓದಿ, ಪ್ರಭಾವಿತರಾಗಿ, ಅವರ ವಿಚಾರಧಾರೆಗೆ ಮನಸೋತು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಎ.ಜಿ. ರಾಮಚಂದ್ರರಾಯರಂತಹ ಹಿರಿಯರ ಮಾರ್ಗದರ್ಶನದಲ್ಲಿ ಸರಕಾರಿ ಕಚೇರಿಗಳಿಗೆ ಟೈಂಬಾಂಬ್ ಇಟ್ಟು, 14 ತಿಂಗಳುಗಳ ಕಾಲ ಸೆರೆಮನೆ ವಾಸ ಅನುಭವಿಸಿದರು.

ಇದನ್ನು ಓದಿದ್ದೀರಾ?: ಇಮ್ರಾನ್‌ ಖಾನ್ | ಅಂದು ಹೀರೋ, ಇಂದು ವಿಲನ್; ಇಬ್ಭಾಗವಾಗಲಿದೆಯಾ ಪಾಕಿಸ್ತಾನ?

`ಜೈಲು ನನಗೆ ಒಳ್ಳೆಯ ಪಾಠ ಕಲಿಸಿತು’ ಎನ್ನುತ್ತಿದ್ದ ದೊರೆಸ್ವಾಮಿಯವರು, 1942 ರಲ್ಲಿ ಬಿ.ಎಸ್ಸಿ ಪದವಿ ಪೂರೈಸಿ, ಗಾಂಧಿನಗರದ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ನಂತರ, 1947 ರಲ್ಲಿ ಮೈಸೂರಿಗೆ ತೆರಳಿ ಸಾಹಿತ್ಯ ಮಂದಿರ ಎಂಬ ಪ್ರಕಟಣಾ ಸಂಸ್ಥೆ ಸ್ಥಾಪಿಸಿ ಪುಸ್ತಕ ಮಳಿಗೆ ತೆರೆದರು. ಬರವಣಿಗೆ ಮೂಲಕ ಜನರನ್ನು ಜಾಗೃತರನ್ನಾಗಿಸಬಹುದೆಂದು ಪತ್ರಿಕೆ ಆರಂಭಿಸಿ, ಮೈಸೂರು ಚಲೋ ಚಳವಳಿ ಕುರಿತು ಲೇಖನಗಳನ್ನು ಬರೆದರು. ನಂತರ ಕ್ವಿಟ್ ಇಂಡಿಯಾ ಮೂವ್‌ಮೆಂಟಿನಲ್ಲಿ ಬ್ರಿಟಿಷರ ವಿರುದ್ಧ ಪತ್ರಿಕೆಯನ್ನು ಪ್ರಬಲ ಅಸ್ತ್ರವನ್ನಾಗಿ ಪ್ರಯೋಗಿಸತೊಡಗಿದರು. ಸರಕಾರ ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡಿತು. ಸ್ವಾತಂತ್ರ್ಯಾನಂತರ ತಮ್ಮ 31ನೆ ವಯಸ್ಸಿನಲ್ಲಿ ಲಲಿತಮ್ಮ ಎಂಬ 19ರ ಹರೆಯದ ಹುಡುಗಿಯನ್ನು ಮದುವೆಯಾದರು. ಇಬ್ಬರು ಮಕ್ಕಳ ಸುಖಿ ಸಂಸಾರ. ದೊರೆಸ್ವಾಮಿಯವರ ಹೋರಾಟದ ಬದುಕನ್ನು ಅರಿತಿದ್ದ ಲಲಿತಮ್ಮನವರು, ಸಂಸಾರದ ನೊಗವನ್ನು ಹೊತ್ತು, ಸಾಮಾಜಿಕ ಹೋರಾಟಗಳಿಗೆ ಪತಿಯನ್ನು ಸಮರ್ಪಿಸಿದ್ದರು.

ಕೆಂಗಲ್ ಹನುಮಂತಯ್ಯನವರನ್ನು ಕಂಡರೆ ತುಂಬಾ ಇಷ್ಟಪಡುತ್ತಿದ್ದ ದೊರೆಸ್ವಾಮಿಯವರು, ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ವಿರುದ್ಧವೂ ಬೀದಿಗಿಳಿದು ಹೋರಾಟ ಮಾಡಿದ್ದಿದೆ. ಬಡತನ ಮತ್ತು ಭ್ರಷ್ಟಾಚಾರ- ಇವರೆಡೇ ಈ ದೇಶದ ಶತ್ರುಗಳು ಎನ್ನುತ್ತಿದ್ದ ದೊರೆಸ್ವಾಮಿಯವರು, `ಬಡವರು ಮತ್ತು ಶ್ರೀಮಂತರ ನಡುವಿನ ಕಂದಕ ಹೆಚ್ಚಾಗುತ್ತಿದೆ. ಭ್ರಷ್ಟಾಚಾರ ಭೂತದಂತೆ ದೇಶವನ್ನು ಕಾಡುತ್ತಿದೆ. ಇವೆರಡರಿಂದ ನಮ್ಮ ದೇಶ ಮುಕ್ತವಾದರೆ, ಗಾಂಧಿ ಈ ದೇಶದಲ್ಲಿ ಹುಟ್ಟಿದ್ದಕ್ಕೂ ಸಾರ್ಥಕ’ ಎನ್ನುತ್ತಿದ್ದರು. 

ಎಲ್ಲಿ ಅನ್ಯಾಯ, ಅಸಮಾನತೆ, ಅರಾಜಕತೆ ಇರುತ್ತದೆಯೋ ಅಲ್ಲಿ ವಯಸ್ಸಾದ, ದನಿ ಇಲ್ಲದ, ದುಡ್ಡೆ ಇಲ್ಲದ ದೊರೆಸ್ವಾಮಿಯವರು ಇರುತ್ತಿದ್ದರು. ಜೊತೆಗೆ ಜನ ಬಂದರೆ- ನಿಮ್ಮೊಂದಿಗೆ ನಾನು ಎನ್ನುತ್ತಿದ್ದರು. ಯಾರೂ ಬರದಿದ್ದರೆ- ನಾನೊಬ್ಬನೆ ಎನ್ನುತ್ತಿದ್ದರು. ಅವರದು ಗಾಂಧಿ ಮಾರ್ಗ. ಸದ್ದುಗದ್ದಲವಿಲ್ಲ, ಹಿಂಸೆಯಿಲ್ಲ.

ಮಂಡೂರಿನಲ್ಲಿ ಕಸ ಸುರಿಯುವುದರ ವಿರುದ್ಧ, ಎ.ಟಿ.ರಾಮಸ್ವಾಮಿಯವರ ಭೂ ಒತ್ತುವರಿ ವರದಿಯ ಪರ, ದಿಡ್ಡಳ್ಳಿ ಆದಿವಾಸಿ ವಸತಿಹೀನರ ಪರ, ಭೂ ಸಾಗುವಳಿ ರೈತರ ಪರವಾದ ಹೋರಾಟವಾಗಿರಬಹುದು ಎಲ್ಲ ಕಡೆ ದೊರೆಸ್ವಾಮಿಯವರು ಇರುತ್ತಿದ್ದರು. ಅವರ ಹೋರಾಟದ ಹುಮ್ಮಸ್ಸು ಹೇಗಿತ್ತೆಂದರೆ, ಈ ವ್ಯವಸ್ಥೆ ಅವರೆಲ್ಲ ಹೋರಾಟವನ್ನು ಬುಡಮೇಲು ಮಾಡಿದರೂ, ಹೋರಾಟಗಾರರಲ್ಲಿಯೇ ಬಿರುಕುಂಟು ಮಾಡಿ ಹಾದಿ ತಪ್ಪಿಸಿದರೂ, ಕುಂದದ ಉತ್ಸಾಹ ಎಂತಹವರನ್ನೂ ಚಕಿತಗೊಳಿಸುತ್ತಿತ್ತು. ಇಲ್ಲಿ ಏನೂ ಸಾಧ್ಯವಿಲ್ಲವೆನ್ನುವ ಬದಲು; ಇಲ್ಲ, ಇಲ್ಲಿ ಇನ್ನೂ ಒಳ್ಳೆಯವರಿದ್ದಾರೆ ಎಂಬ ಅವರ ಆಶಾವಾದ ಜೊತೆಗಿರುವವರನ್ನೂ ಪ್ರೇರೇಪಿಸುತ್ತಿತ್ತು. 

ದೊರೆಸ್ವಾಮಿಯವರು, ತಮ್ಮ ಬದುಕಿನುದ್ದಕ್ಕೂ ಸರಳತೆ, ಪ್ರಾಮಾಣಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ಈ ಸರಳ ಬದುಕು ಎನ್ನುವುದು ಬರೆದಷ್ಟು, ಮಾತನಾಡಿದಷ್ಟು ಸಲೀಸಲ್ಲ. ಕಂಡಿದ್ದನ್ನೆಲ್ಲ ಖರೀದಿಸಬೇಕೆಂಬ ಇವತ್ತಿನ ಆಸೆಬುರುಕ ಸಮಾಜದಲ್ಲಿ, ಸನ್ಯಾಸಿಯಂತೆ ಬದುಕುವುದು ಸುಲಭವಲ್ಲ. ಅದಕ್ಕೆ ಎದುರಾಗುವ ಕಷ್ಟ-ನಷ್ಟಗಳಿಗೆ ಲೆಕ್ಕವೇ ಇಲ್ಲ. ಆದರೆ ದೊರೆಸ್ವಾಮಿಯವರು ಚಿಕ್ಕಂದಿನಿಂದಲೇ ಅದನ್ನು ರೂಢಿಸಿಕೊಂಡವರು, ಕೊನೆಯವರೆಗೂ ಪಾಲಿಸಿಕೊಂಡು ಬಂದರು.

`ನನಗೆ ನಾನು ಬದುಕಿದ ರೀತಿಯಲ್ಲಿ ಸಂತೃಪ್ತಿಯಿದೆ. ಏನೋ ಒಂದಷ್ಟು ಮಾಡಿದ್ದೇನೆ, ಬದುಕನ್ನು ಯೋಗ್ಯವಾಗಿ ಬಾಳಿದ್ದೇನೆ ಎಂಬ ಭಾವವಿದೆ’ ಎನ್ನುತ್ತಿದ್ದ; ಅದೇ ರೀತಿ ಬದುಕಿದ ಆ ಜೀವವನ್ನು ನೆನಪು ಮಾಡಿಕೊಳ್ಳುತ್ತಲೇ ಇರಬೇಕು.

ದೊರೆಸ್ವಾಮಿಯವರಿಲ್ಲದ ಈ ಹೊತ್ತಿನಲ್ಲಿ ದೇವನೂರ ಮಹಾದೇವ, ಯೋಗೇಂದ್ರ ಯಾದವ್, ಡಾ. ವಾಸು, ಪ್ರೊ. ಎ.ಆರ್ ವಾಸವಿ, ಡಾ. ರಹಮತ್ ತರೀಕೆರೆ, ಡಾ. ವಿಜಯಮ್ಮ, ದು.ಸರಸ್ವತಿ ಮೊದಲಾದವರ ಮಾರ್ಗದರ್ಶನದಲ್ಲಿ `ಎದ್ದೇಳು ಕರ್ನಾಟಕ’ ಅಭಿಯಾನವನ್ನು ಹುಟ್ಟುಹಾಕಲಾಯಿತು. ಅನೇಕ ಜನಪರ ಹೋರಾಟಗಳಲ್ಲಿ ದುಡಿದವರು ಇದರಲ್ಲಿ ತೊಡಗಿಸಿಕೊಂಡರು. ಈ ಸಂಘಟನೆಯ ಮುಖ್ಯ ಉದ್ದೇಶ ’ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ’ ಎಂಬುದಾಗಿತ್ತು. ಈ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರೆಲ್ಲರೂ, ದೊರೆಸ್ವಾಮಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತ, ಈ ಸಮಾಜದ ಋಣ ತೀರಿಸಿದ್ದಾರೆ. ಪ್ರೇರಣಾಶಕ್ತಿಯಾಗಿ ಬೆನ್ನಿಗೆ ನಿಂತ ದೊರೆಸ್ವಾಮಿಯವರಿಗೆ ನಮನ ಸಲ್ಲಿಸಿದ್ದಾರೆ. ಇದು ಕರ್ನಾಟಕ, ಇದೇ ಭಾರತ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

  1. ಇಷ್ಟು ಕಡಿಮೆ ಶಬ್ದಗಳಲ್ಲಿ ಸ್ವಾತಂತ್ರ್ಯ ಸೇನಾನಿಯ ಸ್ಫೂರ್ತಿಯನ್ನು ಕಟ್ಟಿಕೊಟ್ಟ ಉತ್ತಮ ಲೇಖನ. 👏👏

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...