- ಮುಸ್ಲಿಂ ಮೀಸಲಾತಿಯನ್ನು ರದ್ದು ಮಾಡಿದ್ದ ರಾಜ್ಯ ಸರ್ಕಾರ
- ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸಮರ್ಥನೆ
ಕಳೆದ ತಿಂಗಳು ರಾಜ್ಯ ಬಿಜೆಪಿ ಸರ್ಕಾರವು ಇದುವರೆಗೂ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲಾತಿಯನ್ನು ರದ್ದು ಮಾಡಿತ್ತು. ಇದನ್ನು ಸುಪ್ರೀಂಕೋರ್ಟ್ನಲ್ಲಿಯೂ ಕೂಡ ಸಮರ್ಥಿಸಿಕೊಂಡಿದೆ.
ರಾಜ್ಯ ಸರ್ಕಾರವು ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿದ್ದ ಆದೇಶದ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿ, ಮೇ 9 ರವರೆಗೆ ತನ್ನ ಆದೇಶವನ್ನು ಜಾರಿ ಮಾಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಈ ವಿಷಯವಾಗಿ ಉತ್ತರ ನೀಡಿರುವ ರಾಜ್ಯ ಸರ್ಕಾರವು “ಧರ್ಮದ ಆಧಾರದ ಮೇಲೆ ನೀಡಿರುವ ಮೀಸಲಾತಿಯು ಸಂವಿಧಾನ ಬಾಹಿರವಾಗಿದ್ದು, ಇದು ಸಂವಿಧಾನದ 14, 15 ಮತ್ತು 16ನೇ ವಿಧಿ ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ತತ್ವಗಳ ಆದೇಶಕ್ಕೆ ವಿರುದ್ಧವಾಗಿದೆ. ಹಲವು ವರ್ಷಗಳಿಂದ ಧರ್ಮದ ಆಧಾರದ ಮೇಲೆ ಮೀಸಲಾತಿ ಒದಗಿಸಲಾಗಿದೆ ಎಂಬ ಕಾರಣಕ್ಕಾಗಿ ಅದನ್ನು ಮತ್ತೆ ಶಾಶ್ವತವಾಗಿ ಮುಂದುವರಿಸಲು ಸಾಧ್ಯವಿಲ್ಲ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? : ರೌಡಿಶೀಟರ್ ಮಣಿಕಂಠ ಪರ ಮೋದಿ ಪ್ರಚಾರ; ಮೋದಿ-ಅಮಿತ್ ಶಾಗೆ ಹಳೆ ಗುಜರಾತ್ ನೆನಪಾಗಿರಬೇಕು ಎಂದ ಜೆಡಿಎಸ್
ಮುಂದುವರೆದು, “ರಾಜ್ಯದಲ್ಲಿ ಮೀಸಲಾತಿಗಳನ್ನು ನೀಡುವುದು ಮತ್ತು ಅದರ ಪರಿಷ್ಕರಣೆ ಸಂಪೂರ್ಣವಾಗಿ ನೆಲದ ವಾಸ್ತವಗಳ ಮೇಲೆ ಅವಲಂಬಿತವಾಗಿರುತ್ತದೆ. ಯಾವ ಗುಂಪಿಗೆ ಹಿಂದುಳಿದ ವರ್ಗ ಎಂದು ಪರಿಗಣಿಸಬೇಕು, ಯಾವ ಪ್ರಯೋಜನಗಳನ್ನು ನೀಡಬೇಕು ಎನ್ನುವುದು ಪ್ರತಿ ರಾಜ್ಯದ ಸಾಂವಿಧಾನಿಕ ಕರ್ತವ್ಯವಾಗಿದೆ” ಎಂದು ಉಲ್ಲೇಖಿಸಿದ್ದಾರೆ.
“ಮುಸ್ಲಿಮರನ್ನು ಹಿಂದುಳಿದವರೆಂದು ಸೇರಿಸಲು ಹಲವು ಆಯೋಗಗಳು ಶಿಫಾರಸು ಮಾಡಿದರೂ ಕೂಡ ಕಾನೂನಿನ ಪ್ರಕಾರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ತನ್ನ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದೆ.