- ‘ಮೀಸಲು ಹಂಚಿಕೆ ಚುನಾವಣಾ ಗಿಮಿಕ್’
- ‘ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಲಾಗಿದೆ’
ರಾಜ್ಯ ಸರ್ಕಾರದ ಮೀಸಲಾತಿ ಹಂಚಿಕೆಯ ನಿರ್ಧಾರದ ಕುರಿತು ಜೆಡಿಎಸ್ ಸರಣಿ ಟ್ವೀಟ್ ಮಾಡಿ, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಬದಲು ಮಾಡಿದೆ. ಅಂತೆಯೇ, ಪರಿಶಿಷ್ಟ ಜಾತಿಯ ಎಡಗೈ–ಬಲಗೈ ಸಮುದಾಯದವರಿಗೆ ಒಳಮೀಸಲಾತಿ ಕಲ್ಪಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.
ರಾಜ್ಯ ಸರ್ಕಾರದ ಮೀಸಲಾತಿ ಹಂಚಿಕೆಯ ಕುರಿತು ಜೆಡಿಎಸ್ ಸರಣಿ ಟ್ವೀಟ್ ಮಾಡಿದ್ದು, “ರಾಜ್ಯ ಬಿಜೆಪಿ ಸರ್ಕಾರ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೂತ್ರ-ಸಂಬಂಧವಿಲ್ಲದ ರೀತಿ ಮೀಸಲಾತಿ ವರ್ಗೀಕರಣ ಮಾಡಿದೆ. ಒಂದು ಕಡೆ ಒಳ ಮೀಸಲಾತಿ ಘೋಷಣೆ, ಇನ್ನೊಂದು ಕಡೆ 2 ಸಿ, 2 ಡಿ ಎಂಬ ಹೊಸ ವರ್ಗೀಕರಣ. ಜಾತ್ರೆಯಲ್ಲಿ ಬೆಂಡು-ಬತ್ತಾಸು-ಕಡ್ಲೆಪುರಿ ಹಂಚಿಕೆಯನ್ನೂ ಇಷ್ಟು ಕಳಪೆಯಾಗಿ ಮಾಡುವುದಿಲ್ಲ. ಇದು ಅಪ್ಪಟ ಚುನಾವಣೆ ಗಿಮಿಕ್!” ಎಂದು ಹರಿಹಾಯ್ದಿದೆ.
ರಾಜ್ಯ ಸರ್ಕಾರವು ಮುಸ್ಲಿಮರಿಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದು ಮಾಡಿದೆ. ಈ ಕುರಿತು ಟ್ವೀಟ್ ಮಾಡಿದ ಜೆಡಿಎಸ್, “ಮುಸ್ಲಿಂ ಸಮುದಾಯದ ನಾಲ್ಕು ಪ್ರತಿಶತವನ್ನು ಮೀಸಲಾತಿ ರದ್ದು ಪಡಿಸಿ ಅವರನ್ನು ‘ಆರ್ಥಿಕವಾಗಿ ಹಿಂದುಳಿದ’ವರ ಮೀಸಲಾತಿಗೆ ವರ್ಗಾಯಿಸಲಾಗಿದೆ. ದ್ವೇಷದ ರಾಜಕಾರಣ ಎಲ್ಲೆ ಮೀರಿದೆ. ಕಾನೂನು, ಸಂವಿಧಾನ, ನೀತಿ-ನಿಯಮ ಎಲ್ಲವನ್ನೂ ಗಾಳಿಗೆ ತೂರಲಾಗಿದೆ. ಇದು ದೊಡ್ಡ ಅನ್ಯಾಯಕ್ಕೆ ದಾರಿ ಮಾಡಿಕೊಡಲಿದೆ” ಎಂದು ವ್ಯಂಗ್ಯವಾಡಿದೆ.
ಯಾವ ವರದಿ, ಅಧ್ಯಯನ, ವೈಜ್ಞಾನಿಕ ಆಧಾರವೇನೆಂದು ನಾಳೆ ಕೋರ್ಟ್ನಲ್ಲಿ ಕೇಳಿದರೆ ಸರ್ಕಾರದ ಉತ್ತರವೇನು? ಎಂದು ಜೆಡಿಎಸ್ ಪ್ರಶ್ನಿಸಿದೆ.
“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹೆಚ್ಚುವರಿ ಮೀಸಲಾತಿ ಘೋಷಣೆಯೇ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಅದ್ಯಾವ ಮಾನದಂಡದಲ್ಲಿ ಹೆಚ್ಚುವರಿ ಘೋಷಿತ ಮೀಸಲಾತಿ ಪ್ರಮಾಣಕ್ಕೆ ಅನ್ವಯವಾಗುವ ರೀತಿ ಒಳ ಮೀಸಲು ಹಂಚಿಕೆ ಮಾಡಲಾಗಿದೆ? ಒಟ್ಟಿನಲ್ಲಿ ರಾಜ್ಯದ ಪ್ರಜ್ಞಾವಂತ ಜನರು ಈ ಎಲ್ಲ ಅಂಶಗಳನ್ನು ಅರಿಯುವುದು ಅಗತ್ಯ” ಎಂದಿದೆ.
ಮೀಸಲು ಹಂಚಿಕೆ
ಮುಸ್ಲಿಮರಿಗಿದ್ದ ಶೇ 4ರಷ್ಟು ಮೀಸಲಾತಿ ರದ್ದು ಮಾಡಿ, ಈ ಪ್ರಮಾಣವನ್ನು ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೆ ತಲಾ ಶೇ 2ರಷ್ಟು ಹಂಚುವ ನಿರ್ಣಯವನ್ನೂ ಮಾಡಿದೆ. ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯೂಎಸ್) ಪಟ್ಟಿಗೆ ಸೇರಿಸುವ ನಿರ್ಧಾರವನ್ನೂ ಮಾಡಿದೆ.
ಪರಿಶಿಷ್ಟ ಜಾತಿ ವಿಚಾರದಲ್ಲಿ ಆರ್ಟಿಕಲ್ 342 ಅನ್ವಯ 4 ಗುಂಪುಗಳನ್ನು ಮಾಡಿರುವ ಸರ್ಕಾರ ಇವುಗಳಿಗೆ ಒಳಮೀಸಲಾತಿ ಹಂಚಿದೆ. ಈ ಪೈಕಿ ಗುಂಪು ಒಂದು ಆದಿಜಾಂಬವ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ, ‘ಗುಂಪು 2’ ಆದಿಕರ್ನಾಟಕ ಸಮುದಾಯಕ್ಕೆ ಶೇ 5.5ರಷ್ಟು ಮೀಸಲಾತಿ, ಗುಂಪು 3 ಬಂಜಾರ, ಬೋವಿ, ಕೊರಚರಿಗೆ ಶೇ 4.5ರಷ್ಟು ಮೀಸಲಾತಿ, ಗುಂಪು 4ರಲ್ಲಿರುವ ಮತ್ತಿತರರಿಗೆ ಶೇ.1ರಷ್ಟು ಮೀಸಲಾತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೀಸಲಾತಿ ಹಂಚಿಕೆಯ ಪ್ರಮಾಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.