ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಲ್ಲಿದೆ. ಪಡಿತರದಾರರಿಗೆ ತಲಾ 10 ಕೆ.ಜಿ ಅಕ್ಕಿ ಕೊಡಲು ಅಕ್ಕಿ ಕೊರತೆಯನ್ನು ಸರ್ಕಾರ ಎದುರಿಸುತ್ತಿದೆ. ಹೀಗಾಗಿ, ಐದು ಕೆ.ಜಿ ಅಕ್ಕಿಯ ಬದಲು ತಲಾ 179 ರೂ. ಹಣ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ನಗದು ನೀಡುವ ಕ್ರಮ ಜಾರಿಯಾಗಿ ಎರಡು ತಿಂಗಳು ಕಳೆದಿವೆ. ಆದರೂ, ರಾಜ್ಯದ ಹಲವಾರು ಮಂದಿಗೆ ಈ ಎರಡು ತಿಂಗಳ ನಗದು ಹಣ ಕೈಸೇರಿಲ್ಲ. ಫಲಾನುಭವಿಗಳಿಗೆ ಸುಮಾರು 294 ಕೋಟಿ ರೂಪಾಯಿ ನಗದು ವರ್ಗಾವಣೆಯಾಗಿಲ್ಲ ಎಂದು ತಿಳಿದುಬಂದಿದೆ.
ದಾಖಲೆ ಪರಿಶೀಲನೆ ಮತ್ತು ನಿಷ್ಕ್ರಿಯ ಬ್ಯಾಂಕ್ ಖಾತೆಗಳಂತಹ ಸಮಸ್ಯೆಗಳನ್ನು ಮುಂದಿಟ್ಟಿರುವ ಸರ್ಕಾರ, ಜುಲೈನಲ್ಲಿ ಸುಮಾರು 30.90 ಲಕ್ಷ ಕಾರ್ಡ್ಗಳ (1.08 ಕೋಟಿ ಫಲಾನುಭವಿಗಳು) ಮತ್ತು ಆಗಸ್ಟ್ನಲ್ಲಿ 24.44 ಲಕ್ಷ ಕಾರ್ಡ್ಗಳ (73 ಲಕ್ಷ ಫಲಾನುಭವಿಗಳು) ಖಾತೆಗಳಿಗೆ ಹಣ ಜಮಾ ಮಾಡಿಲ್ಲ. ಅಲ್ಲದೆ, ಕಳೆದ ಎರಡು ತಿಂಗಳಿನಿಂದ ಪಾವತಿಸದ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸದಿರಲು ಸರ್ಕಾರ ನಿರ್ಧರಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಗಳು ತಿಳಿಸಿವೆ.
ಫಲಾನುಭವಿಗಳ ಖಾತೆಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಪರಿಶೀಲಿಸದೇ ಇರುವುದು ಅವರು ಅನ್ನಭಾಗ್ಯದ ಮೊತ್ತವನ್ನು ಪಡೆಯಲಾಗದ್ದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಇದರಿಂದಾಗಿ ಜುಲೈನಲ್ಲಿ 30.90 ಲಕ್ಷ ಕುಟುಂಬಗಳು ಹಣ ಪಡೆಯಲಾಗಿಲ್ಲ. ಆದರೆ, ಈ ತಿಂಗಳು ಹಣ ಪಡೆಯಲಾಗದ ಕುಟುಂಬಗಳ ಸಂಖ್ಯೆ 14.8 ಲಕ್ಷಕ್ಕೆ ಇಳಿದಿದೆ ಎಂದು ಹೇಳಲಾಗಿದೆ.
“ಸಕ್ರಿಯ ಬ್ಯಾಂಕ್ ಖಾತೆ ಹೊಂದಿದ್ದರೂ ನಮಗೆ ಹಣ ಜಮಾ ಆಗಿಲ್ಲ. ನಗದು ಜಮೆಯಾಗದಿರಲು ಬ್ಯಾಂಕ್ ಅಥವಾ ನ್ಯಾಯಬೆಲೆ ಅಂಗಡಿ ಕಾರಣವನ್ನು ನೀಡಿಲ್ಲ” ಎಂದು ಧಾರವಾಡದ ಕೃಷಿ ಕಾರ್ಮಿಕ ಗಿರಿಜವ್ವ ಶೇಖಪ್ಪ ಹುಲಿಕಟ್ಟಿ ಹೇಳಿದ್ದಾರೆ.
ಯೋಜನೆಯಡಿಯಲ್ಲಿ, ಪ್ರತಿ ಪಡಿತರ ಚೀಟಿಯಲ್ಲಿ ನಮೂದಿಸಲಾದ ಕುಟುಂಬದ ಮುಖ್ಯಸ್ಥರ ಖಾತೆಗೆ ಸರ್ಕಾರವು ಹಣವನ್ನು ಜಮೆ ಮಾಡುತ್ತದೆ. ರಾಜ್ಯದಲ್ಲಿ ಸುಮಾರು 94.4% ಕುಟುಂಬಗಳ ಮುಖ್ಯಸ್ಥರು ಮಹಿಳೆಯರಾಗಿದ್ದಾರೆ. 5.2% ಪುರುಷರು ಕುಟುಂಬಗಳ ಮುಖ್ಯಸ್ಥರಾಗಿದ್ದಾರೆ.
ಸುಮಾರು 1.12 ಲಕ್ಷ ಕುಟುಂಬಗಳ ಮುಖ್ಯಸ್ಥರು ತಮ್ಮ ಆಧಾರ್ ಕಾರ್ಡ್ಗಳನ್ನು ತಮ್ಮ ಪಡಿತರ ಕಾರ್ಡ್ಗಳೊಂದಿಗೆ ಇನ್ನೂ ಲಿಂಕ್ ಮಾಡಿಸಿಲ್ಲ. ಹಲವರ ಖಾತೆಗಳು ನಿಷ್ಕ್ರಿಯವಾಗಿವೆ ಎಂದು ವರದಿಯಾಗಿದೆ.
“ಮೊದಲ ತಿಂಗಳಲ್ಲಿ (ಜುಲೈ) 21 ಲಕ್ಷ ಬಿಪಿಎಲ್ ಕುಟುಂಬಗಳು ಬ್ಯಾಂಕಿಂಗ್ ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದವು. ಹೀಗಾಗಿ ಸರ್ಕಾರಕ್ಕೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗಲಿಲ್ಲ. ಈಗ, ಎಲ್ಲ ಫಲಾನುಭವಿಗಳಿಗೂ ನಗದು ದೊರೆಯುವಂತೆ ಮಾಡಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದಿರಾ?: ಚಂದ್ರಯಾನ-3 ಲ್ಯಾಂಡರ್ ಸ್ಥಳಕ್ಕೆ ‘ಶಿವಶಕ್ತಿ’ ಎಂಬ ಹೆಸರು: ಪ್ರಧಾನಿ ಮೋದಿ ಘೋಷಣೆ
ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ ಎಚ್ ಮುನಿಯಪ್ಪ, “ಕಳೆದ ಎರಡು ತಿಂಗಳಿನಿಂದ ನಗದು ಪ್ರಯೋಜನವನ್ನು ಪಡೆಯದ ಫಲಾನುಭವಿಗಳಿಗೆ ಬಾಕಿ ಹಣವನ್ನು ಪಾವತಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದರು.
ಕಳೆದ ಮೂರು ತಿಂಗಳಲ್ಲಿ ಸರಿಸುಮಾರು 5.36 ಲಕ್ಷ ಕುಟುಂಬಗಳು ಒಮ್ಮೆಯೂ ಪಡಿತರವನ್ನು ಪಡೆದಿಲ್ಲ. ಈ ಕುಟುಂಬಗಳಿಗೆ ನಗದು ಪ್ರಯೋಜನದ ಅಗತ್ಯವಿಲ್ಲ ಎಂದು ಸರ್ಕಾರ ಭಾವಿಸಿದೆ ಎಂದು ಅವರು ಹೇಳಿದ್ದರು.