ಗೋಮಾಂಸ ರಫ್ತು ಉದ್ಯಮದಲ್ಲಿ ಮುಸ್ಲಿಂ ಸಮುದಾಯದ ಪಾಲು ಕಡಿಮೆಯಾಗಿದೆ. ಆ ಜಾಗವನ್ನು ಜೈನ ಸಮುದಾಯ ಕಬ್ಜ ಮಾಡುತ್ತಿದೆ. ಗೋಮಾಂಸ ರಫ್ತಿನಲ್ಲಿ ಜೈನ ಸಮುದಾಯದ ಕೆಲವರು ತೊಡಗಿದ್ದು, ಅವರು ವಾರ್ಷಿಕ 40,000 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ ಎಂದು ರಾಷ್ಟ್ರೀಯ ದ್ರಾವಿಡ ಸಂಘದ (ಆರ್ಡಿಎಸ್) ಅಧ್ಯಕ್ಷ ಅಗ್ನಿ ಶ್ರೀಧರ್ ಆರೋಪಿಸಿದ್ದಾರೆ.
ಮುಸ್ಲಿಂ ಸಮುದಾಯದವನ್ನು ಗೋಮಾಂಸ ರಫ್ತು ಉದ್ಯಮದಿಂದ ಹೊರಗಿಡಲು ಆರ್ಎಸ್ಎಸ್ ಅಣತಿಯಂತೆ ಬಿಜೆಪಿ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆ ಜಾರಿಯಾಗುವುದರ ಹಿಂದೆ ಜೈನ ಸಮುದಾಯದ ಹುನ್ನಾರವೂ ಇದೆ ಎಂದು ಆರೋಪ ಮಾಡಿದ್ದಾರೆ.
ಮುಸ್ಲಿಮರಲ್ಲಿ ಹಲವರು ಗೋಮಾಂಸ ತಿನ್ನುವುದಿಲ್ಲ. ಆದರೆ, ಗೋಹತ್ಯೆ ಅಂತ ಬಂದಾಗೆಲ್ಲ ಗೋಮಾಂಸ ಮುಸ್ಲಿಮರ ಆಹಾರವೆಂದು ಪ್ರಚಾರ ಮಾಡುತ್ತಿದೆ. ಹೆಚ್ಚಾಗಿ ಗೋಮಾಂಸ ತಿನ್ನುವವರು ದಲಿತರು ಮತ್ತು ಕ್ರೈಸ್ತರು. ಆದರೆ, ಇದನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ವಿಷ ಬಿತ್ತಲಾಗುತ್ತಿದೆ ಎಂದು ದೂರಿದ್ದಾರೆ.
ಹಸುವನ್ನು ಕೊಂದರೆ ತಾಯಿಯನ್ನೇ ಕೊಂದಂತೆ ಎಂದು ಭಾವನಾತ್ಮಕ ಹೇಳಿಕೆಗಳನ್ನು ಸಂಘಪರಿವಾರ ನೀಡುತ್ತಿದೆ. ಆ ಮೂಲಕ ಜನರ ಭಾವನೆಗಳನ್ನು ಕೆರಳಿಸುತ್ತಿದೆ. ಗೋಮಾಂಸದ ವಿಚಾರದಲ್ಲಿ ಆಹಾರದ ಹಕ್ಕನ್ನು ಬದಿಗೆ ಸರಿಸಿ, ಭಾವನಾತ್ಮಕ ಅಂಶಗಳನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಗೋವನ್ನು ತಾಯಿ ಎನ್ನುವವರು ಯಾಕೆ ಜಾತ್ರೆಗಳಲ್ಲಿ ಅವುಗಳನ್ನು ಮಾರಾಟ-ಖರೀದಿ ಮಾಡುತ್ತಿದ್ದಾರೆ? ಗೋಮಾತೆಯನ್ನು ಯಾಕೆ ರಸ್ತೆಯಲ್ಲಿ ಬಿಡುತ್ತಿದ್ದಾರೆ ಎಂದು ಹಸುವಿನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವವರನ್ನು ಪ್ರಶ್ನಿಸಬೇಕು ಎಂದರು.