ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಗಾಯವಾಗಿರುವ ಬಗ್ಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅಪಹಾಸ್ಯ ಮಾಡಿದ್ದಾರೆ. ಅವರ ವಿರುದ್ಧ ಟಿಎಂಸಿ ಕಿಡಿಕಾರಿದೆ.
ಗುರುವಾರ ಸಂಜೆ ಬ್ಯಾನರ್ಜಿ ಅವರ ಹಣೆಗೆ ಪೆಟ್ಟಾಗಿತ್ತು. ಆಸ್ಪತ್ರೆಯಲ್ಲಿ ಗಾಯಕ್ಕೆ ಹೊಲಿಗೆ ಹಾಕಲಾಗಿತ್ತು. ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಅವರಿಗೆ ಗಾಯವಾಗಿರುವ ಚಿತ್ರ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಮಮತಾ ಅವರಿಗೆ ಗಾಯವಾಗಿದ್ದ ಬಗ್ಗೆ ಪಶ್ಚಿಮ ಬಂಗಾಳದ ಖೇಜೂರಿಯಲ್ಲಿ ಮಾತನಾಡಿದ್ದ ಅಧಿಕಾರಿ, “ಟಿಎಂಸಿಯ ಪ್ರಾಬಲ್ಯ ಕಡಿಮೆಯಾಗಿದೆ ಮತ್ತು ಕುಸಿಯುತ್ತಿದೆ. ಟಿಎಂಸಿ ಪತನವು ಮೇಲಿನಿಂದ ಆರಂಭವಾಗಿದೆ. ತಳಮಟ್ಟಕ್ಕೂ ಹರಡುತ್ತದೆ” ಎಂದು ಯಾರನ್ನೂ ಹೆಸರಿಸದೆ ಲೇವಡಿ ಮಾಡಿದ್ದರು. ಅವರ ಹೇಳಿಕೆಗಳಿಗೆ ಆಡಳಿತಾರೂಢ ಟಿಎಂಸಿ ತೀವ್ರ ಖಂಡನೆಗೆ ವ್ಯಕ್ತಪಡಿಸಿದೆ. “ಈ ಹೇಳಿಕೆಗಳು ಬಿಜೆಪಿಯ ಮಹಿಳಾ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ” ಎಂದು ಕಿಡಿಕಾರಿದೆ.
“ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿ ವಿರುದ್ಧದ ಇಂತಹ ಹೇಳಿಕೆಗಳು ಬಿಜೆಪಿಯ ಮಹಿಳಾ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ನಾವು ಅಂತಹ ಟೀಕೆಗಳನ್ನು ಖಂಡಿಸುತ್ತೇವೆ ಮತ್ತು ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇವೆ” ಎಂದು ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಶಶಿ ಪಂಜಾ ಹೇಳಿದ್ದಾರೆ.
“ಬ್ಯಾನರ್ಜಿ ವಿರುದ್ಧದ ಮಾತಿನ ದಾಳಿಯು ಬಿಜೆಪಿಯ ಸ್ತ್ರೀದ್ವೇಷ ಮನೋಭಾವವನ್ನು ಪ್ರತಿಬಿಂಬಿಸುತ್ತದೆ” ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದಾರೆ.
“ಮಹಿಳೆಯೊಬ್ಬರ ವಿರುದ್ಧ ಅಪಹಾಸ್ಯ ಮಾಡುವುದು ಕೇವಲ ಹೇಯವಲ್ಲ, ಇದು ತಿರಸ್ಕಾರದ ಸ್ತ್ರೀದ್ವೇಷವನ್ನು ಪ್ರದರ್ಶಿಸುತ್ತದೆ. ಸುವೇಂದು ಅಧಿಕಾರಿ ಅವರ ಮಾತುಗಳು ಹತಾಶೆಯಿಂದ ತುಂಬಿವೆ. ಮೂಲಭೂತ ಮಾನವ ಸಭ್ಯತೆಯೂ ಅವರಿಗಿಲ್ಲ. ಅವರು ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಯಾರೋ ಹಿಂದಿನಿಂದ ತಳ್ಳಿದ್ದರಿಂದಾಗಿ ಮಮತಾ ಅವರು ಬಿದ್ದು, ಅವರಿಗೆ ಪೆಟ್ಟಾಗಿದೆ ಎಂದು ಹೇಳಲಾಗಿದೆ. ಈ ಆರೋಪದ ಬಗ್ಗೆ ತಿನಿಖೆ ನಡೆಸುವಂತೆ ಬಿಜೆಪಿ ಒತ್ತಾಯಿಸಿದೆ. ಗಾಯದ ವಿಚಾರವನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ ಎಂದು ಬಿಜೆಪಿಗೆ ಟಿಎಂಸಿ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದೆ.