- ಬಿಜೆಪಿ ಟಿಕೆಟ್ ಸಿಗದೇ ಪಕ್ಷೇತರವಾಗಿ ಸ್ಪರ್ಧಿಸಿದ್ದ ‘ತವಣಪ್ಪ’
- ಏಪ್ರಿಲ್ 24ರಂದು ನಾಮಪತ್ರ ಹಿಂಪಡೆಯುವುದಾಗಿ ಘೋಷಣೆ
ಹುಬ್ಬಳ್ಳಿ – ಧಾರವಾಡದ ಪ್ರಭಾವಿ ಮುಖಂಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿರ್ಗಮದಿಂದ ಹತಾಶರಾಗಿದ್ದ ಬಿಜೆಪಿಗೆ ಇಂದು ಮತ್ತೊಂದು ಶಾಕ್ ಎದುರಾಗಿದ್ದು, ಬಿಜೆಪಿ ಪ್ರಬಲ ನಾಯಕ ಧಾರವಾಡ ಗ್ರಾಮೀಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ತವಣಪ್ಪ ಅಷ್ಟಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ತವಣಪ್ಪ ಅಷ್ಟಗಿ ಭಾನುವಾರ ಕಾಂಗ್ರೆಸ್ ಸೇರಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಆನೆ ಬಲ ಬಂದಂತಾಗಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತವಣಪ್ಪ ಅಷ್ಟಗಿ ಟಿಕೆಟ್ ಕೈತಪ್ಪಿದ್ದರಿಂದ ಬಂಡಾಯವೆದ್ದು, ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು. ಎಚ್ಚೆತ್ತ ವಿನಯ್ ಕುಲಕರ್ಣಿ ಬೆಳಗಾವಿಯಲ್ಲಿ ಮಾತುಕತೆ ನಡೆಸಿ, ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿ, ಕಾಂಗ್ರೆಸ್ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಬೀದರ್ | ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು
ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಸುದ್ದಿಗಾರರ ಜೊತೆಗೆ ತವಣಪ್ಪ ಮಾತನಾಡಿ, “ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ದೊರೆಯುತ್ತಿಲ್ಲ. ಹಾಲಿ ಬಿಜೆಪಿ ಶಾಸಕ ಅಮೃತ ದೇಸಾಯಿ ಅವರಿಗೆ ಮಣೆ ಹಾಕಲಾಗಿದೆ. ಆರು ಬಾರಿ ಸೋತಿದ್ದರೂ ನನ್ನಂತ ಸಾವಿರಾರು ಕಾರ್ಯಕರ್ತರು ಅವರನ್ನು ಶಾಸಕರನ್ನಾಗಿ ಮಾಡಿದ್ದೆವು. ಆದರೆ, ಬಿಜೆಪಿಯು ಕಾರ್ಯಕರ್ತರನ್ನು ಕಡೆಗಣಿಸಿದೆ. ನಮಗೆಲ್ಲ ಕಾಂಗ್ರೆಸ್ ನಾಯಕ ಜಾರಕಿಹೊಳಿ ಧೈರ್ಯ ತುಂಬಿದ್ದಾರೆ. ಅವರ ಮಾತಿನ ಮೇರೆಗೆ ಕಾಂಗ್ರೆಸ್ ಸೇರಿದ್ದು, ನಾಳೆ ನಾಮಪತ್ರ ಹಿಂಪಡೆಯುತ್ತೇನೆ” ಎಂದು ತಿಳಿಸಿದರು.
ಸತೀಶ ಜಾರಕಿಹೊಳಿ ಮಾತನಾಡಿ, “ಕಾಂಗ್ರೆಸ್ ವರಿಷ್ಠರ ಸೂಚನೆ ಮೇರೆಗೆ ತವನಪ್ಪ ಅವರೊಂದಿಗೆ ಮಾತುಕತೆ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದು, ಅವರು ನಮ್ಮ ಪಕ್ಷದ ಪರ ಕೆಲಸ ಮಾಡಲಿದ್ದಾರೆ. ಬಿಜೆಪಿಯಿಂದ ಬಂಡಯವೆದ್ದು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಅವರು ನಾಮಪತ್ರ ಹಿಂಪಡೆದು, ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಯ ಅವರನ್ನು ಬೆಂಬಲಿಸದ್ದಾರೆ. ನಾವೇ ಮೊದಲು ಅಷ್ಟಗಿಯವರನ್ನೇ ಸಂಪರ್ಕ ಮಾಡಿದ್ದೆವು” ಎಂದು ಹೇಳಿದರು.