“ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ” ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, “ನಿಮಗೆ ತಾಕತ್ತಿದ್ದರೆ ಮತ್ತೆ ಹಿಜಾಬ್ ತನ್ನಿ ನೋಡುವ” ಎಂದು ಸವಾಲೆಸೆದಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಇಂದು ಆಯೋಜಿಸಲಾಗಿದ್ದ ಸಂಕೀರ್ತನೆ ಯಾತ್ರೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಜಾಬ್ ಮತ್ತೆ ವಾಪಸ್ ತರುತ್ತೇವೆ ಅಂತಿದ್ದಾರೆ. ಶಾಲಾ ಮಕ್ಕಳಲ್ಲಿ ಮತ್ತೆ ಪ್ರತ್ಯೇಕತೆತ ವಿಷಬೀಜ ಬಿತ್ತುತ್ತಿದ್ದಾರೆ. ನೀವೇ ಸಮವಸ್ತ್ರ ಮಾಡಿದ್ದೀರಾ. ಮತ್ತೆ ನೀವೇ ಪ್ರತ್ಯೇಕ ಮಾಡುತ್ತಿದ್ದೀರಾ. ನಿಮಗೆ ತಾಕತ್ತಿದ್ದರೆ ಮತ್ತೆ ಹಿಜಾಬ್ ತನ್ನಿ ನೋಡುವ” ಎಂದು ಹೇಳಿದ್ದಾರೆ.
ಸಿಎಂ ಹಿಜಾಬ್ ಹೇಳಿಕೆಯ ಬಳಿಕ, ‘ಮತ್ತೆ ಕಾಲೇಜಿಗೆ ಹೋಗುತ್ತೇನೆ’ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ವಿರುದ್ಧ ಆರೋಪ ಮಾಡಿರುವ ಕಲ್ಲಡ್ಕ ಪ್ರಭಾಕರ ಭಟ್, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಿಎಂ ಹಿಜಾಬ್ ಹೇಳಿಕೆಯ ಬಳಿಕ, ‘ಮತ್ತೆ ಕಾಲೇಜಿಗೆ ಹೋಗುತ್ತೇನೆ’ ಎಂದಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ವಿರುದ್ಧ ಆರೋಪ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್, ಅಲ್ಖೈದಾ ಸಂಪರ್ಕವಿದೆ ಎಂದು ವಿವಾದಾತ್ಮಕ ಹೇಳಿಕೆ
“ನೀನು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಅಲ್ಲಾಹು ಅಕ್ಬರ್ ಎಂದು ಹೇಳಬೇಕು.ಈ ದೇಶದಲ್ಲಿ ಹೇಳಬೇಕಿರೋದು ರಾಮ ನಾಮ” ಎಂದ RSS ಮುಖಂಡ pic.twitter.com/KWRsJDXHaq
— eedina.com (@eedinanews) December 24, 2023
“ಮುಸ್ಕಾನ್, ನೀನು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಅಲ್ಲಾಹು ಅಕ್ಬರ್ ಎಂದು ಹೇಳಬೇಕು.ಈ ದೇಶದಲ್ಲಿ ಹೇಳಬೇಕಿರೋದು ರಾಮ ನಾಮ. ಅಲ್ಲಾಹು ಅಕ್ಬರ್ ಎನ್ನಬೇಕಾದರೆ ನೀವು ಮುಸಲ್ಮಾನ ದೇಶಕ್ಕೆ ಹೋಗಿ. ಮುಸ್ಕಾನ್ಗೆ ಶಹಭಾಷ್ಗಿರಿ ಕೊಟ್ಟಿದ್ದು ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಸದಸ್ಯ. ಮುಸ್ಕಾನ್ಗೂ ಕೂಡ ಅಲ್ ಖೈದಾ ಜೊತೆ ಸಂಪರ್ಕ ಇದೆ. ತಾಕತ್ತಿದ್ದರೆ ಮುಸ್ಕಾನ್ ಮತ್ತೆ ಶಾಲೆಗೆ ಹೋಗುವ ಕೆಲಸ ಮಾಡಲಿ. ಇದನ್ನು ನೀವು ಹಿಂದೂಗಳ ದೌರ್ಬಲ್ಯ ಅಂದುಕೊಳ್ಳಬೇಡಿ. ನಾವು ಒಟ್ಟಾಗಿರಲು ಬಯಸುತ್ತೇವೆ” ಎನ್ನುವ ಮೂಲಕ ಮಂಡ್ಯದ ಮುಸ್ಕಾನ್ಗೆ ಅಲ್ಖೈದಾ ಭಯೋತ್ಪಾದನಾ ಸಂಘಟನೆಯ ಸಂಪರ್ಕವಿದೆ ಎಂದು ಆರೋಪ ಮಾಡಿದ್ದಾರೆ.
“ನೂರಾರು ಜನ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ್ದರು. ಸಾವಿರಾರು ವರ್ಷಗಳ ಹಿಂದೆ ನಮ್ಮ ನಮ್ಮಲ್ಲೇ ಗೊಂದಲ ಮೂಡಿಸಿದ್ದರಿಂದ ಹಿಂದೂಗಳಲ್ಲಿ ಒಡಕುಂಟಾಯಿತು. ಮೊಘಲರು ಒಳ ನುಸುಳಿದ್ದರು. ಈ ದೇಶಕ್ಕಾಗಿ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವನವರಂತಹ ಮಾತೆಯರು ಹೋರಾಡಿದ್ದಾರೆ. ಬ್ರಿಟೀಷರ ವಿರುದ್ಧ ನಾವು ಮಾನಸಿಕವಾಗಿ ಸೋತೆವು. ಈ ದೇಶವನ್ನು ಮುಸ್ಲಿಂ ದೇಶ ಮಾಡಬೇಕು ಎಂದು ಮುಸ್ಲಿಮರು ಬಂದಿದ್ದರು. ಘಜನಿ ಮಹಮ್ಮದ್ ಕಾಲದಿಂದಲೂ ಈ ದೇಶವನ್ನ ಮುಸ್ಲಿಂ ದೇಶ ಮಾಡಬೇಕು ಎಂದು ಕೊಲೆ ಅತ್ಯಾಚಾರ, ದರೋಡೆ ಮಾಡಲಾಯಿತು. ಕಾಶ್ಮೀರವನ್ನು ಪಾಕಿಸ್ತಾನ ವಶಪಡಿಸಿಕೊಂಡಾಗ ನೆಹರೂ ಮತ್ತು ಕಾಂಗ್ರೆಸ್ನಿಂದ ನಮ್ಮ ದೇಶದ ಜನರಿಗೆ ಮೋಸ ಮಾಡಲಾಯಿತು. ಈ ದೇಶದ ಮೊದಲ ಒಂದು ಭಾಗದ ಲಾಭ ಮುಸ್ಲಿಮರಿಗೆ ಎಂದು ಮನಮೋಹನ್ ಸಿಂಗ್ ಘೋಷಣೆ ಮಾಡಿದ್ದರು. ಈ ದೇಶ ಯಾರಪ್ಪನ ಮನೆ ಆಸ್ತಿ” ಎಂದು ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನಿಸುವ ಮೂಲಕ, ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.