ಛತ್ತೀಸ್ಗಢ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ. ಗೆಲ್ಲುವ ಭರವಸೆಯನ್ನು ಹೊಂದಿದ್ದ ಕಾಂಗ್ರೆಸ್ ನಿರಾಸೆ ಅನುಭವಿಸಿದೆ.
ಅತಿ ಹಿಂದುಳಿದ ಬುಡಕಟ್ಟು ಸಮುದಾಯಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ ಯೋಜನೆಗಳ ಜೊತೆಗೆ ಆಡಳಿತ ವಿರೋಧಿ ಅಲೆ ಮತ್ತು ಹಗರಣಗಳಿಗೆ ಸಿಲುಕಿದ ಕಾಂಗ್ರೆಸ್ ಬಿಜೆಪಿ ಎದುರು ನೆಲಕಚ್ಚಿದೆ.
ಮಿಷನ್ ಆದಿವಾಸಿ
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿಯವರು ನವೆಂಬರ್ 15 ರಂದು ನಿರ್ದಿಷ್ಟವಾಗಿ ಹಿಂದುಳಿದ ಬುಡಕಟ್ಟು ಗುಂಪುಗಳನ್ನು (PVTGs) ಗುರಿಯಾಗಿಟ್ಟುಕೊಂಡು ಹೊಸ ಅಭಿವೃದ್ಧಿ ಕಾರ್ಯಕ್ರಮವನ್ನು ಆರಂಭಿಸಿದರು.
₹ 24,000 ಕೋಟಿ ಮೌಲ್ಯದ ಈ ಮಿಷನ್, ದೂರದ ಪ್ರದೇಶಗಳಲ್ಲಿನ ಸ್ಥಳೀಯ ಸಮುದಾಯಗಳಿಗೆ ರಸ್ತೆ ಅಭಿವೃದ್ಧಿ ಮತ್ತು ಸಂವಹನ, ಶಿಕ್ಷಣ, ಆರೋಗ್ಯ, ಪೋಷಣೆಯ ವಿಷಯದಲ್ಲಿ ಸೌಕರ್ಯವನ್ನು ಒದಗಿಸುವ ಗುರಿಯನ್ನು ಈ ಮಿಷನ್ ಹೊಂದಿತ್ತು.
ಹೆಚ್ಚಿದ ಬಿಜೆಪಿ ಮತ ಹಂಚಿಕೆ
ಛತ್ತೀಸ್ಗಢದಲ್ಲಿ ಬಿಜೆಪಿ ಸತತ ಮೂರು ವಿಧಾನಸಭಾ ಚುನಾವಣೆಗಳನ್ನು ಗೆದ್ದಿತ್ತು (2003, 2008, ಮತ್ತು 2013). ಆದರೆ ಈ ಚುನಾವಣೆಗಳಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ ಅಂತರದಿಂದ ವಿಜಯ ಸಾಧಿಸಿತ್ತು. ಆದರೆ 2018 ರಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿದಿತ್ತು. ಈ ಬಾರಿ, ಬಿಜೆಪಿ ಮತಗಳಿಕೆಯು 45.80%ರಷ್ಟಿದೆ. ಕಾಂಗ್ರೆಸ್ ಪಕ್ಷ 41.89% ಮತಗಳನ್ನು ಪಡೆದಿದೆ.
ಹಗರಣಗಳ ಸರಮಾಲೆ
ಛತ್ತೀಸಗಡ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮೊದಲು ಬಿಜೆಪಿ ಮಹತ್ತರವಾದ ಆರೋಪವನ್ನು ಮಾಡಿತು. ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಭಾಗೇಲ್ ಅವರು ಮಹಾದೇವ್ ಆ್ಯಪ್ನಿಂದ ₹ 508 ಕೋಟಿ ಅನಧಿಕೃತವಾಗಿ ಪಡೆದಿದ್ದಾರೆಂದು ದೂರಿತು. ಇದರ ಜೊತೆಗೆ ಕಸ್ಟಮ್ ಮಿಲ್ಲಿಂಗ್ ಹಗರಣದಲ್ಲಿ, ರಾಜ್ಯ ಮಾರ್ಕ್ಫೆಡ್ನ ಮಾಜಿ ನಿರ್ದೇಶಕರು ಮತ್ತು ರಾಜ್ಯ ರೈಸ್ ಮಿಲ್ಲರ್ಸ್ ಅಸೋಸಿಯೇಷನ್ನ ಕೆಲವು ಅಧಿಕಾರಿಗಳು ಪ್ರಬಲ ವ್ಯಕ್ತಿಗಳಿಂದ ₹175 ಕೋಟಿ ಲಂಚ ಸ್ವೀಕರಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ದೂರಿತ್ತು.
ಗಣಿಗಾರಿಕೆ ಹಗರಣ
ಛತ್ತೀಸ್ಗಢದಲ್ಲಿ ಸಾಗಿಸುವ ಪ್ರತಿ ಟನ್ ಕಲ್ಲಿದ್ದಲಿಗೆ ಅಕ್ರಮವಾಗಿ ₹ 25 ರೂಗಳನ್ನು ಹಿರಿಯ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳನ್ನು ಒಳಗೊಂಡ ಕೂಟವು ಸಂಗ್ರಹಿಸುತ್ತಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಖನಿಜ ನಿಧಿ ಹಗರಣವನ್ನು ಕೈಗೆತ್ತಿಕೊಂಡಿತ್ತು.
ಪಿಎಸ್ಸಿ ಹಗರಣ
ಛತ್ತೀಸ್ಗಢ ಸಾರ್ವಜನಿಕ ಸೇವಾ ಆಯೋಗ (ಪಿಎಸ್ಸಿ) ನಡೆಸಿದ 2021 ರ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಬಿಜೆಪಿ ಪ್ರಶ್ನಿಸಿತು. ಹಲವಾರು ಸರ್ಕಾರಿ ಅಧಿಕಾರಿಗಳ ಸಂಬಂಧಿಕರೇ ಆಯ್ಕೆಯಾಗಿದ್ದಾರೆಂದು ಬಿಜೆಪಿ ಆರೋಪಿಸಿತು.
ಬಿಜೆಪಿಯ ಆಕ್ರಮಣಕಾರಿ ತಂತ್ರ
ಚುನಾವಣಾ ಪ್ರಚಾರದ ಸಮಯದಲ್ಲಿ, ಬಿಜೆಪಿಯು ಭಾಗೇಲ್ ಸರ್ಕಾರದ ಭ್ರಷ್ಟಾಚಾರದತ್ತ ಕೇಂದ್ರೀಕರಿಸಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೂಪೇಶ್ ಬಘೇಲ್ ಅವರ ಸರ್ಕಾರದ ವಿರುದ್ಧ ‘ಆರೋಪ ಪತ್ರ’ ಬಿಡುಗಡೆ ಮಾಡಿದರು.
“ಬಘೇಲ್ ಅವರು ಹಗರಣಗಳು ಮತ್ತು ಲೂಟಿಯಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಜನರ ವಿರುದ್ಧ ದೌರ್ಜನ್ಯ ಎಸಗಿದ್ದಾರೆ. ಛತ್ತೀಸ್ಗಢವನ್ನು ಗಾಂಧಿ ಕುಟುಂಬದ ಎಟಿಎಂ ಆಗಿ ಪರಿವರ್ತಿಸಿದ್ದಾರೆ. ಎಲ್ಲಾ ಭ್ರಷ್ಟಾಚಾರದ ದಾಖಲೆಗಳನ್ನು ಈ ಸರ್ಕಾರ ಮುರಿದಿದೆ” ಎಂದು ದೂರಿದರು.
ಹಗರಣಗಳು ಫಲಿತಾಂಶಗಳ ಮೇಲೆ ಪ್ರಭಾವ ಬೀರಿವೆ ಎಂದು ಸಂಪೂರ್ಣ ಖಚಿತವಾಗಿ ಹೇಳಲಾಗದಿದ್ದರೂ, ಈ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.