ಮಧ್ಯಪ್ರದೇಶದಲ್ಲಿ ಬಿಜೆಪಿ ಉಗ್ರ ಹಿಂದುತ್ವ ಪ್ರತಿಪಾದಿಸಿದರೆ, ಕಾಂಗ್ರೆಸ್ನ ಕಮಲನಾಥ್ ಸಾಫ್ಟ್ ಹಿಂದುತ್ವದ ಮೊರೆ ಹೋಗಿದ್ದರು. ಆದರೂ ಮೋದಿಯನ್ನು ಎದುರಿಸುವಲ್ಲಿ ಕಮಲನಾಥ್ ವಿಫಲರಾದರು. ಬಿಜೆಪಿಯನ್ನು ಬದಲಾಯಿಸಬೇಕು ಎನ್ನುವ ಮನಸ್ಥಿತಿಯ ನಡುವೆಯೂ ಜನ ಬಿಜೆಪಿಗೆ ಓಟು ಹಾಕಿದ್ದಾರೆ. ಕಾಂಗ್ರೆಸ್ನ ದುರ್ಬಲ ಪ್ರಚಾರವೂ ಅದಕ್ಕೆ ಒಂದು ಕಾರಣ. ಕಾಂಗ್ರೆಸ್ ಸಂಘಟನಾ ಶಕ್ತಿಯ ಕೊರತೆಯಿಂದಾಗಿ ಕೊನೆಯ ಕ್ಷಣದವರೆಗೂ ಮುನ್ನಡೆ ಕಾಯ್ದುಕೊಳ್ಳಲು ವಿಫಲವಾಗಿದೆ.
ಮಧ್ಯಪ್ರದೇಶದ 2023ರ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ನಿರ್ಣಾಯಕವಾಗಿತ್ತು. 230 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಭಾರಿ ಹೋರಾಟವನ್ನೇ ಮಾಡಿತು. ಆದರೆ, ದೊಡ್ಡ ರಾಜ್ಯವಾದ ಮಧ್ಯಪ್ರದೇಶದಲ್ಲಿ ಬಿಜೆಪಿ ಗೆದ್ದು ಬೀಗಿದರೆ, ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಬಿಜೆಪಿ 165 ಸ್ಥಾನಗಳನ್ನು ದಾಟಿ ಮುನ್ನಡೆದಿದ್ದರೆ, ಕಾಂಗ್ರೆಸ್ ಕೇವಲ 63ರ ಆಸುಪಾಸಿನಲ್ಲಿಯೇ ಕುಸಿದು ಕೂತಿದೆ. ಆಡಳಿತ ವಿರೋಧಿ ಅಲೆಯ ನಡುವೆಯೂ ಶಿವರಾಜ್ ಸಿಂಗ್ ಚೌಹಾಣ್ ಗೆಲುವಿನ ನಗೆ ಬೀರಿದ್ದಾರೆ.
ಮಧ್ಯಪ್ರದೇಶ ಚುನಾವಣೆಗೆ ಸಂಬಂಧಿಸಿದಂತೆ, ಎರಡು ಸಮೀಕ್ಷೆಗಳು ಮಾತ್ರ ಬಿಜೆಪಿಗೆ ಮುನ್ನಡೆ ಎಂದು ಹೇಳಿದ್ದವು. ಉಳಿದ ಸಮೀಕ್ಷೆಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮತ ಗಳಿಕೆಯ ಅಂತರ ಕಡಿಮೆ ಇರಲಿದೆ ಎಂದಿದ್ದವು. ಆದರೆ, ಎಲ್ಲ ಸಮೀಕ್ಷೆಗಳು ಸುಳ್ಳಾಗಿ, ಬಿಜೆಪಿ ಭಾರಿ ವಿಜಯದತ್ತ ಮುನ್ನುಗ್ಗುತ್ತಿದೆ.
19 ವರ್ಷಗಳ ಆಡಳಿತದ ನಂತರ ಬಿಜೆಪಿ ತೀವ್ರವಾದ ಆಡಳಿತ ವಿರೋಧ ಅಲೆಯನ್ನು ಎದುರಿಸುತ್ತಿತ್ತು. ಜನ ಅದನ್ನು ಮರೆಯುವಂತೆ ಮಾಡಲು ಕೇಸರಿ ಪಕ್ಷ ನಾನಾ ತಂತ್ರ ಹೂಡಿ ಯಶಸ್ವಿಯಾಗಿದೆ. ಹಲವು ಸಂಸದರನ್ನು ಹಾಗೂ ಕೇಂದ್ರ ಸಚಿವರನ್ನು ಕಣಕ್ಕಿಳಿಸಿದ್ದು, ಆಡಳಿತ ವಿರೋಧಿ ಅಲೆಯಿಂದ ಪಾರಾಗಲು ಅನೇಕ ಹಾಲಿ ಶಾಸಕರಿಗೆ, ಮಂತ್ರಿಗಳಿಗೆ ಟಿಕೆಟ್ ನಿರಾಕರಿಸಿದ್ದು ಅವುಗಳಲ್ಲಿ ಮುಖ್ಯವಾದವು. ಲಾಡ್ಲಿ ಬೆಹನಾದಂಥ ಯೋಜನೆಗಳೂ ಬಿಜೆಪಿಯ ಕೈಹಿಡಿದವು.
2008 ಮತ್ತು 2013ರ ಚುನಾವಣೆಗಳಲ್ಲಿ ಬಿಜೆಪಿಯ ಭಾರಿ ಗೆಲುವಿಗೆ ಕಾರಣರಾಗಿದ್ದವರು ಶಿವರಾಜ್ ಸಿಂಗ್ ಚೌಹಾಣ್. ಆದರೆ, 2018ರ ಚುನಾವಣೆಯಲ್ಲಿ ಮಧ್ಯಪ್ರದೇಶದ ಮತದಾರರು ಚೌಹಾಣ್ ನೇತೃತ್ವದ ಬಿಜೆಪಿಗೆ ಸೋಲಿನ ರುಚಿ ತೋರಿಸಿದ್ದರು. ಬಿಜೆಪಿ 109 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 114 ಸ್ಥಾನ ಗಳಿಸಿತ್ತು. ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ಸ್ವತಂತ್ರ ಶಾಸಕರ ನೆರವಿನಿಂದ ಕಾಂಗ್ರೆಸ್ನ ಕಮಲ್ನಾಥ್ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಿದ್ದರು. ಆದರೆ, 15 ತಿಂಗಳ ನಂತರ, 2020ರ ಮಾರ್ಚ್ನಲ್ಲಿ ಕಾಂಗ್ರೆಸ್ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಅವರ 22 ಬೆಂಬಲಿಗರನ್ನು ಬಿಜೆಪಿ ತನ್ನೆಡೆಗೆ ಸೆಳೆದುಕೊಂಡಿತು. ಕಮಲ್ನಾಥ್ ಸರ್ಕಾರ ಪತನಗೊಂಡಿತು. ಶಿವರಾಜ್ಸಿಂಗ್ ಚೌಹಾಣ್ ಮತ್ತೆ ಮುಖ್ಯಮಂತ್ರಿಯಾಗಿದ್ದರು. ಜ್ಯೋತಿರಾಧಿತ್ಯ ಸಿಂಧಿಯಾಗೆ ಕೇಂದ್ರ ಸಚಿವ ಹುದ್ದೆಯ ಬಳುವಳಿ ದಕ್ಕಿತ್ತು.
ಮಧ್ಯಪ್ರದೇಶದಲ್ಲಿ ಸತತ ಎರಡು ದಶಕಗಳಿಂದ ಬಿಜೆಪಿ ಅಧಿಕಾರದಲ್ಲಿದೆ (15 ತಿಂಗಳ ಕಮಲನಾಥ್ ಅವಧಿ ಹೊರತುಪಡಿಸಿ). ಗುಜರಾತ್ ನಂತರ ಬಿಜೆಪಿಯ ಹಿಂದುತ್ವದ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಈ ಬಾರಿ ಆಡಳಿತ ವಿರೋಧಿ ಅಲೆಯ ಕಾರಣಕ್ಕೆ ಬಿಜೆಪಿ ಒಂದಷ್ಟು ಪ್ರಚಾರ ತಂತ್ರ, ಮಾರ್ಪಾಡುಗಳನ್ನು ಮಾಡಿಕೊಂಡಿತ್ತು. ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಹಿಂದಕ್ಕೆ ತಳ್ಳಿ ಕೇಂದ್ರದ ನಾಯಕರೇ ಜನಾಶೀರ್ವಾದ ಯಾತ್ರೆ ನಡೆಸಿದ್ದರು. ಶಿವರಾಜ್ ಸಿಂಗ್ ಚೌಹಾಣ್ ಅವರ ಆಡಳಿತದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಮಹಿಳಾಪರ ಯೋಜನೆಗಳನ್ನು ಹೆಚ್ಚು ಪ್ರಚಾರ ಮಾಡಿತು. ಲಾಡ್ಲಿ ಲಕ್ಷ್ಮಿ, ಮುಖ್ಯಮಂತ್ರಿ ಕನ್ಯಾ ವಿವಾಹ ಮತ್ತು ನಿಖಾ ಮತ್ತು ಮುಖ್ಯಮಂತ್ರಿ ಕನ್ಯಾ ಅಭಿಭವಕ್ನಂಥ ಯೋಜನೆಗಳು ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿವೆ. ಚುನಾವಣೆಯನ್ನು ಎದುರಿಸಲು, ಕಾರ್ಯಕರ್ತರನ್ನು ಸೆಳೆಯಲು ಮತ್ತು ಕಾಂಗ್ರೆಸ್ನಿಂದ ಗೆಲುವನ್ನು ಕಸಿದುಕೊಳ್ಳಲು ಬಿಜೆಪಿ ಹಲವು ರಾಜಕೀಯ ತಂತ್ರಗಳನ್ನು ರೂಪಿಸಿತ್ತು. ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್ ಮತ್ತು ಫಗ್ಗನ್ ಸಿಂಗ್ ಕುಲಸ್ತೆ, ಕೈಲಾಶ್ ವಿಜಯವರ್ಗೀಯ, ರಾಕೇಶ್ ಸಿಂಗ್, ಗಣೇಶ್ ಸಿಂಗ್, ರಿತಿ ಪಾಠಕ್ ಸೇರಿದಂತೆ ಹಲವಾರು ಹಿರಿಯ ನಾಯಕರು ಮತ್ತು ಸಂಸದರನ್ನು ಕಣಕ್ಕಿಳಿಸಿತ್ತು.
ಇನ್ನೊಂದೆಡೆ, ಕಾಂಗ್ರೆಸ್ ಸಂಘಟನಾ ಶಕ್ತಿಯ ಕೊರತೆಯಿಂದಾಗಿ ಕೊನೆಯ ಕ್ಷಣದವರೆಗೂ ಮುನ್ನಡೆ ಕಾಯ್ದುಕೊಳ್ಳಲು ವಿಫಲವಾಗಿದೆ. ಬಿಜೆಪಿ ಉಗ್ರ ಹಿಂದುತ್ವ ಪ್ರತಿಪಾದಿಸಿದರೆ, ಕಾಂಗ್ರೆಸ್ನ ಕಮಲನಾಥ್ ಸಾಫ್ಟ್ ಹಿಂದುತ್ವದ ಮೊರೆ ಹೋಗಿದ್ದರು. ಆದರೂ ಮೋದಿಯನ್ನು ಎದುರಿಸುವಲ್ಲಿ ಕಮಲನಾಥ್ ವಿಫಲರಾದರು. ಬಿಜೆಪಿಯನ್ನು ಬದಲಾಯಿಸಬೇಕು ಎನ್ನುವ ಮನಸ್ಥಿತಿಯ ನಡುವೆಯೂ ಜನ ಬಿಜೆಪಿಗೆ ಓಟು ಹಾಕಿದ್ದಾರೆ.. ಕಾಂಗ್ರೆಸ್ನ ದುರ್ಬಲ ಪ್ರಚಾರವೂ ಅದಕ್ಕೆ ಒಂದು ಮುಖ್ಯ ಕಾರಣ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ: ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು
ಶಿವರಾಜ್ ಸಿಂಗ್ ಚೌಹಾಣ್ ಈ ಬಾರಿಯೇನಾದರೂ ಮುಖ್ಯಮಂತ್ರಿ ಆದರೆ, ಅವರು ಐದನೆ ಬಾರಿ ಸಿಎಂ ಆದಂತಾಗುತ್ತದೆ. ಆದರೆ, ಇಂಥ ವಿಚಾರಗಳಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಅವರು ಹೇಳುವ ಮೂಲಕ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಉಗ್ರರು ಗೆದ್ದರು.
ಶಾಂತಿ ಪ್ರಿಯರು ಸೋತರು !
ಎಂತಹ ದುರದೃಷ್ಟ ?