ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 34 ಮಂದಿ ಸಚಿವರುಳ್ಳ ಪೂರ್ಣ ಸಚಿವ ಸಂಪುಟ ರಚನೆಯಾಗಿದೆ. ಶನಿವಾರ (ಮೇ 27) 24 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಂತ್ರಿಗಿರಿ ಸಿಕ್ಕಿಲ್ಲವೆಂದು ಕೆಲವರು ಅಸಮಾಧಾನಗೊಂಡಿದ್ದಾರೆ ಎಂದೂ ತಿಳಿದುಬಂದಿದೆ. ಈ ನಡುವೆ, ತಮ್ಮ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲವೆಂದು ಹಲವು ಕ್ಷೇತ್ರಗಳಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
ಹಲವಾರು ಹಿರಿಯ ನಾಯಕರನ್ನು ಸಂಪುಟದಲ್ಲಿ ದೂರವಿಟ್ಟು, ಯುವ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಅವರಲ್ಲಿ ಎಂಟು ಮಂದಿ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿದ್ದಾರೆ.
ಹೊಸ ಸರ್ಕಾರದಲ್ಲಿ ಸಂಪುಟದಿಂದ ಪ್ರಮುಖ ನಾಯಕರು ಮತ್ತು ಹಿರಿಯರು ದೂರ ಉಳಿದಿದ್ದಾರೆ. ಅವರಲ್ಲಿ, ಐದು ಬಾರಿ ಶಾಸಕರಾಗಿ, ಎರಡು ಬಾರಿ ಮಂತ್ರಿಯಾಗಿದ್ದ ಆರ್.ವಿ ದೇಶಪಾಂಡೆ… ಮೂರು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ, ಒಮ್ಮೆ ಸಚಿವರಾಗಿದ್ದ ಪ್ರಕಾಶ್ ಹುಕ್ಕೇರಿ… ನಾಲ್ಕು ಬಾರಿ ಶಾಸಕರಾಗಿ, ಒಮ್ಮೆ ಎಂಎಲ್ಸಿಯಾಗಿ, ಒಮ್ಮೆ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ… ಮೂರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದ ಟಿ.ಬಿ ಜಯಚಂದ್ರ… ಒಮ್ಮೆಯೂ ಶಾಸಕರಾಗಿ ಆಯ್ಕೆಯಾಗದಿದ್ದರೂ, ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ, ಒಮ್ಮೆ ಎಂಎಲ್ಸಿಯಾಗಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿರುವ ಬಿ.ಕೆ ಹರಿಪ್ರಸಾದ್ ಮಂತ್ರಿಗಿರಿಯ ಅವಕಾಶ ಕಳೆದುಕೊಂಡಿದ್ದಾರೆ.
ಜೊತೆಗೆ, ರಾಯರೆಡ್ಡಿ, ತನ್ವೀರ್ ಸೇಠ್, ಸಲೀಮ್ ಅಹ್ಮದ್, ಕೃಷ್ಣಪ್ಪ, ಅಜಯ್ ಸಿಂಗ್, ಅಶೋಕ್ ಪಟ್ಟಣ್, ಗಣೇಶ್ ಹುಕ್ಕೇರಿ, ರಿಜ್ವಾನ್ ಅರ್ಷದ್, ವಿನಯ್ ಕುಲಕರ್ಣಿ, ಎನ್ಎ ಹ್ಯಾರಿಸ್ ಮತ್ತು ಪುಟ್ಟರಂಗಶೆಟ್ಟಿ ಅವರೂ ಮಂತ್ರಿಗಿರಿಯಿಂದ ವಂಚಿತರಾಗಿದ್ದಾರೆ.
ಸದ್ಯ, ಇವರಲ್ಲಿ ಹಲವರು ಸಚಿವ ಸ್ಥಾನ ಸಿಗದಿದ್ದರೂ ಸಮಾಧಾನದಿಂದಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಬಿ.ಕೆ ಹರಿಪ್ರಸಾದ್ ಅವರೊಬ್ಬರು ಮಾತ್ರ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ಅವರು ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.