ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ. ಚುನಾವಣಾ ಬಾಂಡ್ ರಾಜಕೀಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮಾತನಾಡಿದ ಅವರು, “ಪ್ರಧಾನಿ ಮೋದಿ ತಮ್ಮ ‘ಮನ್ ಕಿ ಬಾತ್’ನಲ್ಲಿ ಚುನಾವಣಾ ಬಾಂಡ್ ಲೂಟಿಯ ಬಗ್ಗೆ ಯಾಕೆ ಮಾತನಾಡಲಿಲ್ಲ. ಚುನಾವಣೆಗೆ ಹಣಕ್ಕಾಗಿ ಬಾಂಡ್ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಪ್ರಪಂಚದ ದೊಡ್ಡ ಹಗರಣ” ಎಂದು ಕಿಡಿಕಾರಿದ್ದಾರೆ.
“ಲಾಟರಿ ಏಜೆಂಟ್ ಮರ್ಟಿನ್ ಅವರಿಂದ ಚುನಾವಣಾ ಬಾಂಡ್ ತೆಗೆದುಕೊಂಡಿದ್ದಾಗಿ ಡಿಎಂಕೆ ಹೇಳಿಕೊಂಡಿದೆ. ಇದೇ ರೀತಿ, ಸತ್ಯ ಹೇಳಲು ಪ್ರಧಾನಿ ಮೋದಿ ಸಿದ್ದರಿಲ್ಲ. ಬಾಂಡ್ನಿಂದ ಪಡೆದ ಹಣದಲ್ಲಿ ಶಾಸಕರನ್ನು ಖರೀದಿಸಿದ್ದಾರಾ” ಎಂದು ಪ್ರಶ್ನಿಸಿದ್ದಾರೆ.
“ಬಿಜೆಪಿಗರು ನಮ್ಮಲ್ಲಿ 330 ಸಂಸದರಿದ್ದಾರೆ. ನಾವು ಚುನಾವಣಾ ಬಾಂಡ್ ಮೂಲಕ 6,000 ಕೋಟಿ ರೂ. ಪಡೆದ್ದೇವೆ. ಕಡಿಮೆ ಸಂಸದರಿರುವ ಪಕ್ಷದವರು ಜಾಸ್ತಿ ಹಣ ಪಡೆದಿದ್ದಾರೆ ಎನ್ನುತ್ತಿದ್ದಾರೆ. ಇದರರ್ಥ ಏನು?” ಎಂದು ಕಿಡಿಕಾರಿದ್ದಾರೆ.
“ಆಳುವ ಪಕ್ಷವನ್ನು ನಾನು ಪ್ರಶ್ನಿಸುತ್ತೇನೆ. ಯಾರ ಒರವಾಗಿಯೂ ಪ್ರಚಾರ ಮಾಡಲು ಹೋಗುವುದಿಲ್ಲ. ಜನರು ಪಕ್ಷ ನೋಡಿ ಮತ ಹಾಕಬಾರದು. ಕೆಲಸ ಮಾಡುವ, ನಮ್ಮ ಕೈಗೆ ಸಿಗಬಲ್ಲ ಅಭ್ಯರ್ಥಿಗೆ ಮತ ಚಲಾಯಿಸಬೇಕು” ಎಂದಿದ್ದಾರೆ.