ಜಾರಿ ನಿರ್ದೇಶನಾಲಯವು (ಇಡಿ) ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಕೆಲಸ ಮಾಡುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಫೋನ್ಅನ್ನು ಪರಿಶೀಲಿಸುವ ಮೂಲಕ ಎಎಪಿಯ ಲೋಕಸಭಾ ಚುನಾವಣಾ ಕಾರ್ಯತಂತ್ರದ ವಿವರಗಳನ್ನು ಪಡೆಯಲು ಯತ್ನಿಸುತ್ತಿದೆ ಎಂದು ಎಎಪಿ ಹಿರಿಯ ನಾಯಕಿ, ದೆಹಲಿ ಸಚಿವೆ ಅತಿಶಿ ಆರೋಪಿಸಿದ್ದಾರೆ.
ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಮಾರ್ಚ್ 21ರಂದು ಬಂಧಿಸಿದೆ. ಅವರನ್ನು ಏಪ್ರಿಲ್ 1ರವರೆಗೆ ಕಸ್ಟಡಿಗೆ ತೆಗೆದುಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅತಿಶಿ, “ಕೇಜ್ರಿವಾಲ್ ಅವರ ಮೊಬೈಲ್ಅನ್ನು ಪರಿಶೀಲಿಸಲು ಇಡಿ ಒತ್ತಾಯಿಸುತ್ತಿದೆ. ಆ ಮೊಬೈಲ್ ಕೆಲವು ತಿಂಗಳ ಹಿಂದೆಯಷ್ಟೇ ಖರೀಸಲಾಗಿದೆ. ಅಬಕಾರಿ ನೀತಿ ರೂಪಿಸಿದಾಗ ಈ ಮೊಬೈಲ್ ಇರಲಿಲ್ಲ. ಆದರೂ, ಅದನ್ನು ಪರಿಶೀಲಿಸಲು ಇಡಿ ಯತ್ನಿಸುತ್ತಿದೆ. ಇದು ಈ ಸಂಸ್ಥೆಯು ಬಿಜೆಪಿಯ ‘ರಾಜಕೀಯ ಅಸ್ತ್ರ’ವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸಾಬೀತು ಮಾಡುತ್ತದೆ” ಎಂದು ಆರೋಪಿಸಿದ್ದಾರೆ.
“ವಾಸ್ತವವಾಗಿ, ಕೇಜ್ರಿವಾಲ್ ಅವರ ಮೊಬೈಲ್ನಲ್ಲಿ ಏನಿದೆ ಎಂಬುದನ್ನು ತಿಳಿಯಲು ಇಡಿ ಬಯಸುತ್ತಿಲ್ಲ. ಬದಲಾಗಿ, ಬಿಜೆಪಿ ಬಯಸುತ್ತಿದೆ. ಅಬಕಾರಿ ನೀತಿಯನ್ನು 2021-22ರಲ್ಲಿ ಜಾರಿಗೆ ತರಲಾಗಿತ್ತು. ಕೇಜ್ರಿವಾಲ್ ಅವರ ಬಳಿ ಈಗಿರುವ ಫೋನ್ ಕೆಲವೇ ತಿಂಗಳ ಹಿಂದೆಯಷ್ಟೇ ಖರೀದಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
“ಕೇಜ್ರಿವಾಲ್ ಅವರ ಹೊಸ ಫೋನ್ನ ಪಾಸ್ವರ್ಡ್ಅನ್ನು ಇಡಿ ಕೇಳುತ್ತಿದೆ. ಯಾರೆಂದರೆ, ಅದರಲ್ಲಿ ಲೋಕಸಭಾ ಚುನಾವಣೆಗೆ ಎಎಪಿ ಕಾರ್ಯತಂತ್ರ, ಪ್ರಚಾರ ಯೋಜನೆಗಳು, ‘ಇಂಡಿಯಾ’ ಮೈತ್ರಿಕೂಟದ ನಾಯಕರ ಜೊತೆಗಿನ ಮಾತುಕತೆಗಳು ಹಾಗೂ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಕಾರ್ಯತಂತ್ರದ ಬಗ್ಗೆ ಮಾಹಿತಿಯನ್ನು ಹುಡುಕಲು ಬಯಸಿದೆ” ಎಂದು ದೂರಿದ್ದಾರೆ.