ಕಳೆದ ವರ್ಷ ಮಣಿಪುರದ ಚುರಾಚಂದ್ಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಸ್ಥಳಾಂತರಗೊಂಡ ನಗಂಥೋಯಿಬಿ ಮುತ್ತುಮ್ ಮತ್ತು ಅವರ ಕುಟುಂಬವು ಇಂಫಾಲ್ನ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗ, ಹಿಂಸಾಚಾರ ಪೀಡಿತ ರಾಜ್ಯದ ಸಾವಿರಾರು ಮಂದಿ ಮತದಾರರು ಪ್ರಸ್ತುತ ಪರಿಹಾರ ಶಿಬಿರಗಳನ್ನು ಆಶ್ರಯಿಸಿದ್ದಾರೆ. ಅವರಿಗೆ ಅಲ್ಲಿಂದಲೇ ಮತ ಚಲಾಯಿಸಲು ಅವಕಾಶ ನೀಡುವುದಾಗಿಯೂ ಚುನಾವಣಾಧಿಕಾರಿಗಳು ಹೇಳಿದ್ದಾರೆ.
ಮಣಿಪುರದಲ್ಲಿ ಏಪ್ರಿಲ್ 19 ಮತ್ತು 26ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಹಿಂಸಾಚಾರದಿಂದ ಸ್ಥಳಾಂತರಗೊಂಡ ಮತ್ತು ನಾಯಕರಿಂದ ನಿರಾಶೆಗೊಂಡಿರುವ ಸಂತ್ರಸ್ತರು, ‘ಮತದಾನದ ಸಮಯ ಸಮೀಪಿಸುತ್ತಿದ್ದಂತೆ ಚುನಾವಣೆಗಳು ತಮ್ಮ ಮನಸ್ಸಿನಲ್ಲಿರುವ ಕೊನೆಯ ಆಲೋಚನೆ’ ಎಂದು ಹೇಳುತ್ತಿದ್ದಾರೆ.
“ನಾವೆಲ್ಲರೂ ಇಲ್ಲಿ ನಿರಾಶ್ರಿತರು. ನಮ್ಮ ಅನಿಶ್ಚಿತ ಭವಿಷ್ಯದ ಬಗ್ಗೆ ನಾವು ಚಿಂತಿಸುತ್ತಿದ್ದೇವೆ. ನಾವು ಸಂಘರ್ಷದ ಮಧ್ಯದಲ್ಲಿದ್ದೇವೆ. ಆದ್ದರಿಂದ ಚುನಾವಣೆಯ ಬಗ್ಗೆ ಯೋಚಿಸಲು ಇದು ಸರಿಯಾದ ಸಮಯವಲ್ಲ. ನಾವು ಇನ್ನು ಮುಂದೆ ನಮ್ಮನ್ನಾಳುವ ಜನನಾಯಕರನ್ನು ನಂಬುವುದಿಲ್ಲ. ಅವರು ನಮಗಾಗಿ ಈವರೆಗೆ ಏನನ್ನೂ ಮಾಡಿಲ್ಲ” ಎಂದು ನಗಂಥೋಯಿಬಿ ಹೇಳುತ್ತಾರೆ.
“ಮತದಾನಕ್ಕೆ ಅನುಕೂಲವಾಗುವಂತೆ ಚುನಾವಣಾ ಆಯೋಗವು ವಿಶೇಷ ಕ್ರಮಗಳನ್ನು ಕೈಗೊಂಡಿದ್ದರೂ, ಸ್ಥಳಾಂತರಗೊಂಡ ಮತದಾರರು ತಮ್ಮ ಆಯ್ಕೆಯ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಸರ್ಕಾರ ಇನ್ನೂ ನಮ್ಮ ಸಂಪೂರ್ಣ ಹಕ್ಕುಗಳನ್ನು ನೀಡಿಲ್ಲವೆಂಬುದು ನಮ್ಮ ಭಾವನೆ. ವಿಶೇಷ ಮತಗಟ್ಟೆಗಳಿದ್ದರೂ ಕೂಡಾ, ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಮಗೆ ನೆಮ್ಮದಿಯ ಬದುಕು ಇನ್ನೂ ಮರಳಿಲ್ಲ. ನಾವು ಮನೆಯಲ್ಲಿದ್ದರೆ, ಚುನಾವಣೆಯ ಬಗ್ಗೆ ಯೋಚಿಸುತ್ತಿದ್ದೆವು” ಎಂದು ಸುರೇಶ್ ಹೇಳಿದರು.
“ನಮ್ಮ ಮತಗಳಿಗೆ ಈಗ ಯಾವುದೇ ಅರ್ಥವಿಲ್ಲ. ನಾವು ಸ್ಥಳಾಂತರಗೊಂಡು 10 ತಿಂಗಳಿಗೂ ಹೆಚ್ಚು ಸಮಯವಾಗಿದೆ. ನಮಗೆ ಚುನಾವಣೆಯ ಮೇಲೆ ಯಾವುದೇ ಭರವಸೆ ಇಲ್ಲ” ಎಂದು ಚುರಾಚಂದ್ಪುರದಿಂದ ಸ್ಥಳಾಂತರಗೊಂಡ ಲುಲುನ್ ಹೇಳಿದರು.
“ನಾವು ಪರಿಹಾರ ಶಿಬಿರಗಳಲ್ಲಿ ನರಳುತ್ತಿದ್ದೇವೆ. ನಮಗೆ ಆಹಾರ ಪೂರೈಕೆಯೂ ಸರಿಯಾಗಿಲ್ಲ. ಇಂತಹ ದುಃಸ್ಥಿತಿಗಳ ಮಧ್ಯೆ ಬದುಕುತ್ತಿರುವಾಗ ನಾವು ಮತ ಚಲಾಯಿಸುವುದರಿಂದ ಯಾವುದೇ ಅರ್ಥವಿಲ್ಲ” ಎಂದು ಹೇಳಿದ್ದಾರೆ.
“ಶಾಶ್ವತವಾಗಿ ಮನೆಗಳನ್ನು ಕಳೆದುಕೊಂಡವರು ಮತದಾರರ ಗುರುತಿನ ಚೀಟಿಗಳಂತಹ ಪ್ರಮುಖ ಗುರುತಿನ ದಾಖಲೆಗಳನ್ನೂ ಕೂಡಾ ಹೊಂದಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಹಿಂಸಾಚಾರ ಕಡಿಮೆಯಾಗಿದ್ದರೂ, ಮಣಿಪುರದ ಎರಡು ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿ ಉಳಿದಿದೆ” ಎಂದರು.
“ನಮ್ಮ ಸಿಬ್ಬಂದಿಗಳನ್ನೂ ಕೂಡಾ ಸ್ಥಳಾಂತರಿಸಲಾಗಿದೆ. ಸೀಮಿತ ಮಾನವ ಸಂಪನ್ಮೂಲದೊಂದಿಗೆ, ಎರಡು ಹಂತಗಳಲ್ಲಿ ಚುನಾವಣೆಗಳನ್ನು ನಡೆಸುತ್ತಿರುವ ಕಾರಣ ಉತ್ತಮ ಭದ್ರತೆ ಸಿಗಬಹುದು” ಎಂದು ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ ಪಿ.ಕೆ ಝಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೇಜ್ರಿವಾಲ್ ಫೋನ್ನಿಂದ ಲೋಕಸಭಾ ಚುನಾವಣೆಗೆ ಎಎಪಿ ತಂತ್ರದ ವಿವರ ಪಡೆಯಲು ಇಡಿ ಯತ್ನಿಸುತ್ತಿದೆ: ಅತಿಶಿ
“2019 ರಲ್ಲಿ, ಬಿಜೆಪಿ ಮೈಥೇಯಿ ಪ್ರಾಬಲ್ಯದ ಒಳಮಣಿಪುರ ಸ್ಥಾನವನ್ನು ಗೆದ್ದರೆ, ಅದರ ಮಿತ್ರ ಪಕ್ಷ ಎನ್ಪಿಎಫ್ ಬುಡಕಟ್ಟು ಮೀಸಲು ಹೊರಮಣಿಪುರ ಸ್ಥಾನವನ್ನು ಗೆದ್ದಿದೆ. ಈ ಬಾರಿ, ಬಿಜೆಪಿ ಯಶಸ್ಸನ್ನು ಪುನರಾವರ್ತಿಸಲು ಬಯಸಿದೆ. ಆದರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮಣಿಪುರ ಹಿಂಸಾಚಾರವನ್ನು ರಾಷ್ಟ್ರೀಯವಾಗಿ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿರುವುದರಿಂದ ಬಿಜೆಪಿಗೆ ಇದು ಸುಲಭದ ಕೆಲಸವಲ್ಲ.
ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ಮೈಥೇಯಿ ಮತ್ತು ಬುಡಕಟ್ಟು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳಿಂದ 200ಕ್ಕೂ ಅಧಿಕ ಮಂದಿ ತಮ್ಮ ಜೀವತೆತ್ತಿದ್ದಾರೆ. ಜತೆಗೆ 25,000ಕ್ಕೂ ಹೆಚ್ಚು ಜನರನ್ನು ಭದ್ರತಾ ಪಡೆಗಳು ರಕ್ಷಿಸಿದ್ದು, ಸುಮಾರು 50,000 ಮಂದಿ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿರುವುದಾಗಿ ಎನ್ಡಿಟಿವಿ(NDTV) ವರದಿ ಮಾಡಿದೆ.
ಕನ್ನಡಕ್ಕೆ: ರೇಖಾ ಹಾಸನ