ಕಳೆದ ಎರಡು ವಾರಗಳಲ್ಲಿ ಎರಡನೇ ಬಾರಿಗೆ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ನಡೆಯ ವಿರುದ್ಧ ಕೇರಳ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ವಿಧಾನಸಭೆಯಲ್ಲಿ ಅಂಗೀಕಾರಗೊಂಡ ನಿರ್ಣಾಯಕ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದೆ ಸಾರ್ವಜನಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದೆ.
ರಾಜ್ಯವನ್ನು ಪ್ರತಿನಿಧಿಸುವ ವಕೀಲ ಸಿ ಕೆ ಸಸಿ, ರಾಜ್ಯಪಾಲರ ಈ ಕ್ರಮವು ಕೇರಳ ಜನರ ಬದುಕುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
“ರಾಜ್ಯದ ಜನರ ಕಲ್ಯಾಣಕ್ಕಾಗಿ ಅಂಗೀಕಾರಗೊಂಡ ಮಸೂದೆಗಳನ್ನು ದೀರ್ಘಕಾಲದವರೆಗೂ ಹಾಗೂ ಅನಿರ್ದಿಷ್ಟ ಕಾಲದವರೆಗೂ ರಾಜ್ಯಪಾಲರು ಇರಿಸಿಕೊಂಡಿರುವ ಕ್ರಮ ಸ್ಪಷ್ಟವಾಗಿ ನಿರಂಕುಶವಾಗಿದೆ ಮತ್ತು ಇದು ಸಂವಿಧಾನದ 14ನೇ ವಿಧಿ(ಸಮಾನತೆಯ ಹಕ್ಕು)ಯನ್ನು ಉಲ್ಲಂಘಿಸುತ್ತದೆ. ಅಲ್ಲದೆ ಇದು ಸಂವಿಧಾನದ 21 ನೇ ವಿಧಿ (ಜೀವನದ ಹಕ್ಕು) ಅಡಿಯಲ್ಲಿ ಬರುವ ಕೇರಳ ರಾಜ್ಯದ ಜನರ ಹಕ್ಕುಗಳನ್ನು ಕಸಿಯುತ್ತದೆ” ಎಂದು ಸಿ ಕೆ ಸಸಿ ತಿಳಿಸಿದ್ದಾರೆ.
8 ಮಸೂದೆಗಳು ಬಾಕಿ
ಎಂಟು ಪ್ರಮುಖ ಮಸೂದೆಗಳು ಪ್ರಸ್ತುತ ರಾಜ್ಯಪಾಲರ ಬಳಿ ಬಾಕಿ ಉಳಿದಿವೆ ಎಂದು ಕೇರಳ ಹೇಳಿದೆ. ಈ ಕೆಲವು ಮಸೂದೆಗಳು ಎರಡು ವರ್ಷಗಳಿಂದ ತಡೆಹಿಡಿಯಲ್ಪಟ್ಟಿವೆ.
ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆಕೆ ವೇಣುಗೋಪಾಲ್, ಕೇರಳ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ರಾಜ್ಯಪಾಲರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು.
ಹಲವು ಮಸೂದೆಗಳು ಅಪಾರ ಸಾರ್ವಜನಿಕ ಹಿತಾಸಕ್ತಿ, ಕಲ್ಯಾಣ ಕಾರ್ಯಕ್ರಮಗಳನ್ನು ಒದಗಿಸುವುದಾಗಿದ್ದು, ಇವುಗಳ ವಿಳಂಬದಿಂದ ರಾಜ್ಯದ ಜನರ ಹಲವು ಕಲ್ಯಾಣ ಕಾರ್ಯಕ್ರಮಗಳಿಗೆ ಅಡ್ಡಿಯಾಗುತ್ತದೆ. ಜೊತೆಗೆ ರಾಜ್ಯದ ಜನತೆಗೆ ಘೋರ ಅನ್ಯಾಯವಾಗುತ್ತಿದೆ ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ಸಹಪಾಠಿಗಳಿಂದ ಹಲ್ಲೆ, ಜಾತಿ ನಿಂದನೆ; ದಲಿತ ವಿದ್ಯಾರ್ಥಿ ಆತ್ಮಹತ್ಯೆ
ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರ ಅನುಮೋದನೆಗಾಗಿ ಬಾಕಿ ಇರುವ ಎಂಟು ಮಸೂದೆಗಳಲ್ಲಿ ಎರಡು 2021ರ ವಿಶ್ವವಿದ್ಯಾಲಯ ಕಾನೂನುಗಳ ತಿದ್ದುಪಡಿ ಮಸೂದೆಗಳು (1 ನೇ ತಿದ್ದುಪಡಿ) ಮತ್ತು ವಿಶ್ವವಿದ್ಯಾಲಯ ಕಾನೂನುಗಳ ತಿದ್ದುಪಡಿ ಮಸೂದೆ (2 ನೇ ತಿದ್ದುಪಡಿ) ಇದೆ. ಇದಲ್ಲದೆ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ 2022, 2022ರ ವಿಶ್ವವಿದ್ಯಾನಿಲಯ ಕಾನೂನುಗಳ ತಿದ್ದುಪಡಿ ಮಸೂದೆ, 2022ರ ಕೇರಳ ಲೋಕಾಯುಕ್ತ ತಿದ್ದುಪಡಿ ಮಸೂದೆ, 2022ರ ವಿಶ್ವವಿದ್ಯಾನಿಲಯ ಕಾನೂನುಗಳ ತಿದ್ದುಪಡಿ ಮಸೂದೆ ಮತ್ತು 2021ರ ಸಾರ್ವಜನಿಕ ಆರೋಗ್ಯ ಮಸೂದೆ ಸೇರಿದೆ.
ರಾಜ್ಯಪಾಲರು 8 ಬಾಕಿ ಇರುವ ಮಸೂದೆಗಳನ್ನು ಪರಿಗಣಿಸುವಲ್ಲಿ ವಿನಾಕಾರಣ ವಿಳಂಬ ಮಾಡುವ ಮೂಲಕ ತಮ್ಮ ಸಾಂವಿಧಾನಿಕ ಕರ್ತವ್ಯಗಳಲ್ಲಿ ವಿಫಲರಾಗಿದ್ದಾರೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.
ಕೇರಳದ ಹೊರತಾಗಿ, ಇತರ ಬಿಜೆಪಿಯೇತರ ಆಡಳಿತದ ರಾಜ್ಯಗಳು ತಮ್ಮ ರಾಜ್ಯಪಾಲರ ವಿರುದ್ಧ ನಿರ್ಣಾಯಕ ಮಸೂದೆಗಳನ್ನು ಕಾನೂನಾತ್ಮಕವಾಗಿ ಅಂಗೀಕರಿಸಲು ವಿಳಂಬ ಮಾಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿವೆ.