- ಮೇ 10 ರ ಮತದಾನದ ದಿನಕ್ಕೆ ಖಾಕಿ ಬಿಗಿ ಭದ್ರತೆ
- ರಾಜ್ಯಾದ್ಯಂತ ಕಟ್ಟೆಚ್ಚರದ ಕಾನೂನು ಪಾಲನೆ
ಮೇ 10ರಂದು ನಡೆಯಲಿರುವ ಮತದಾನ ಪ್ರಕ್ರಿಯೆಯನ್ನೂ ಒಳಗೊಂಡಂತೆ ರಾಜ್ಯ ಚುನಾವಣಾ ಭದ್ರತೆಗೆ ಖಾಕಿ ಪಡೆ ಸರ್ವ ಸನ್ನದ್ಧವಾಗಿದೆ.
ಮತದಾನದ ದಿನಕ್ಕೂ ಮುಂಚಿತವಾಗಿ ಕಾರ್ಯಾಚರಣೆ ಆರಂಭಿಸಲಿರುವ ಪೊಲೀಸ್ ಇಲಾಖೆ ಇದಕ್ಕೆ ಅಗತ್ಯ ಪ್ರಕ್ರಿಯೆಗಳನ್ನು ಮಾಡಿ ಮುಗಿಸಿಕೊಂಡಿದೆ. ಚುನಾವಣಾ ಭದ್ರತೆ ಸಲುವಾಗಿಯೇ 1.60 ಲಕ್ಷ ಪೊಲೀಸರನ್ನು ನಿಯೋಜಿಸಲಾಗಿದ್ದು ಮತ ಏಣಿಕೆ ಮುಗಿಯುವವರೆಗೂ ಇವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
ಭದ್ರತಾ ಕಾರ್ಯದಲ್ಲಿ 304 ಡಿವೈಎಸ್ಪಿ, 991 ಪೊಲೀಸ್ ಇನ್ಸ್ ಪೆಕ್ಟರ್, 2,610 ಪಿಎಸ್ಐ, 5,803 ಎಎಸ್ಐ ಸೇರಿದಂತೆ 84,000 ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಇವರೊಂದಿಗೆ 8.5 ಸಾವಿರ ಹೋಂಗಾರ್ಡ್ಗಳನ್ನು, 650 ಸಿಆರ್ಪಿಎಫ್ ತುಕಡಿ, ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಹಾಗೆಯೇ ಹೆಚ್ಚಿನ ಭದ್ರತೆಗಾಗಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಗೋವಾ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ.
ಸೂಕ್ಷ್ಮ ಮತಗಟ್ಟೆಗಳ ಮಾಹಿತಿ
ಈ ಬಾರಿ ಚುನಾವಣೆಯಲ್ಲಿ11,617 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿ ಪರಿಗಣಿಸಲಾಗಿದ್ದು, ವರುಣಾ, ಚಾಮುಂಡೇಶ್ವರಿ, ಹಾಸನ, ಚನ್ನಪಟ್ಟಣ, ಶಿಗ್ಗಾಂವಿ, ರಾಮನಗರಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?:ದಾವಣಗೆರೆ | ನೀತಿ ಸಂಹಿತೆ ಉಲ್ಲಂಘನೆ; 14 ಮಂದಿ…
ಇನ್ನು ರಾಜಧಾನಿ ಬೆಂಗಳೂರಿನಲ್ಲೂ ಭದ್ರತೆಗೆ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಇಲ್ಲಿ 16 ಸಾವಿರ ಪೊಲೀಸರು, ಕೆಎಸ್ಆರ್ಪಿ ಹಾಗೂ ಹೋಮ್ ಗಾರ್ಡ್ಗಳು ಕೆಲಸ ಮಾಡಲಿದ್ದಾರೆ ಎಂದು ಉನ್ನತಾಧಿಕಾರಿಗಳು ಹೇಳಿದ್ದಾರೆ.
ನಗರದಾದ್ಯಂತ ಒಟ್ಟು 7916 ಮತಗಟ್ಟೆಗಳಿವೆ. ಇದರಲ್ಲಿ 1907ನ್ನು ಅತಿಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಅತಿಸೂಕ್ಷ್ಮ ಪ್ರದೇಶಗಳಲ್ಲಿ ಬಿಎಸ್ ಎಫ್, ಆರ್ ಪಿ ಎಫ್ , ಸಿಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹಾಗೆಯೇ ರಾಜ್ಯಾದ್ಯಂತ ಚುನಾವಣಾ ನೀತಿ ಸಂಹಿತಿ ಘೋಷಣೆಯಾದ ಬಳಿಕ 230 ಕೋಟಿ ಮೌಲ್ಯದ ವಸ್ತುಗಳು, 105 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ.
ಇಲ್ಲಿಯವರೆಗೆ 53,406 ವ್ಯಕ್ತಿಗಳ ವಿರುದ್ಧ ಬಾಂಡ್ ಓವರ್, ಭದ್ರತಾ ಪ್ರಕರಣ ಉಲ್ಲಂಘಿಸಿದ 115 ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ 714 ಜನರ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ನಗರದಲ್ಲೇ 10ಕೋಟಿ ನಗದು 28.5 ಕೆಜಿ ಚಿನ್ನ, 140 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.