- ಚುನವಣಾಧಿಕಾರಿ ಅನುಮತಿ ಇಲ್ಲದೆ ಜಾಥಾ ಆಯೋಜನೆ
- ಬಜರಂಗದಳ ನಿಷೇಧದ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ
ಬಜರಂಗದಳ ಸಂಘಟನೆ ನಿಷೇಧಿಸುವ ಕಾಂಗ್ರೆಸ್ ಹೇಳಿಕೆ ವಿರೋಧಿಸಿ ಹಿಂದು ಜನಜಾಗೃತಿ ವೇದಿಕೆ ನಡೆಸಿದ ಜಾಥಾದಲ್ಲಿ ಭಾಗಿಯಾಗಿದ್ದ 14 ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದಾರೆ.
ಬಜರಂಗದಳ ಸಂಘಟನೆ ನಿಷೇಧಿಸುವ ಹೆಸರಲ್ಲಿ ಹಿಂದುಗಳನ್ನು ಭಾವನಾತ್ಮಕವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ದಾವಣಗೆರೆಯಲ್ಲಿ ಹಿಂದು ಸಂಘಟನೆ ಸಮಾವೇಶ ನಡೆಸಿತ್ತು.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಾಥಾ ಆರಂಭದಿಂದಲೇ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಸಿದ್ದರು. ಕೆಲ ಕಾಲ ಡಿಆರ್ ಮೈದಾನದಲ್ಲಿ ಇರಿಸಿದ್ದರು. ಬಳಿಕ, ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.
ಮಾಜಿ ಮೇಯರ್ ಎಸ್ ಟಿ ವೀರೇಶ್, ಎನ್ ರಾಜಶೇಖರ್, ಎಲ್ ಎನ್ ಕಲ್ಲೇಶ್, ಕೆ ಪ್ರಸನ್ನಕುಮಾರ್, ಚಂದ್ರಶೇಖರ್, ಶಿವಯೋಗಿ, ಹರೀಶ್ ಶಾಮನೂರು, ಚುಕ್ಕಿ ಮಂಜುನಾಥ್ ಇತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ಜಿಲ್ಲೆ | ಬಿಜೆಪಿ ಭದ್ರಕೋಟೆಯನ್ನು ಭೇದಿಸಲಿದ್ದಾರೆಯೇ ಕಾಂಗ್ರೆಸ್ ಕಲಿಗಳು?
ನೀತಿ ಸಂಹಿತೆಗೆ ಅಡ್ಡಿಯಾಗಿಲ್ಲ: ಸ್ಪಷ್ಟನೆ
“ಜಾಥಾ ಮತ್ತು ಕಾರ್ಯಕ್ರಮ ನಡೆಸುವ ಸಂಬಂಧ ಮೂರು ದಿನದ ಹಿಂದೆ ದಾವಣಗೆರೆ ಉತ್ತರ ಚುನಾವಣಾಧಿಕಾರಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಕಾರ್ಯಕ್ರಮ ನಡೆಸಬೇಡಿ ಎಂದು ಹೇಳುವುದಾದಲ್ಲಿ ಎಂಡಾರ್ಸ್ಮೆಂಟ್ ಕೊಡಬೇಕಿತ್ತು. ಯಾವುದೇ ಮಾಹಿತಿ ನೀಡದ್ದರಿಂದ ಕಾರ್ಯಕ್ರಮ ನಡೆಸಿದ್ದೇವೆ. ಇದು ಮಾದರಿ ನೀತಿ ಸಂಹಿತೆಗೆ ಅಡ್ಡಿಯಾಗಿಲ್ಲ. ಇದರ ನೆಪದಲ್ಲಿ ನಮ್ಮನ್ನು ವಶಕ್ಕೆ ಪಡೆಯಲಾಗಿತ್ತು” ಎಂದು ದಾವಣಗೆರೆ ಪಾಲಿಕೆ ಬಿಜೆಪಿ ಸದಸ್ಯ ಪ್ರಸನ್ನಕುಮಾರ್ ಆರೋಪಿಸಿದ್ದಾರೆ.