- ಖೇಮಸುಲಿ ರೈಲು ನಿಲ್ದಾಣದಲ್ಲಿ ಕುಡ್ಮಿ ಸಮುದಾಯ ಪ್ರತಿಭಟನೆ
- ಸಮುದಾಯದ 25 ಸಾವಿರ ಮಂದಿ ಪ್ರತಿಭಟನೆಯಲ್ಲಿ ಭಾಗಿ
ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರದಲ್ಲಿಯ ಖೇಮಸುಲಿ ರೈಲು ನಿಲ್ದಾಣದ ಹಳಿಗಳ ಮೇಲೆ ಮತ್ತು ರಸ್ತೆಯಲ್ಲಿ ಕುಡ್ಮಿ ಸಮುದಾಯ ಜನರು ಭಾನುವಾರ (ಏಪ್ರಿಲ್ 9) ಪ್ರತಿಭಟನೆ ನಡೆಸಿದರು.
ಕಳೆದ ಐದು ದಿನಗಳಿಂದ ಖೇಮಸುಲಿ ರೈಲು ನಿಲ್ದಾಣ ಮತ್ತು ರಸ್ತೆಗಳ ಮೇಲೆ ಪ್ರತಿಭಟನೆ ನಡೆಸುತ್ತ ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸಬೇಕು ಎಂದು ಕುಡ್ಮಿ ಜನಾಂಗ ಒತ್ತಾಯಿಸಿದೆ.
“ಸ್ವಾತಂತ್ರ್ಯ ಪೂರ್ವದಲ್ಲಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನವಿತ್ತು. 1950ರಲ್ಲಿ ಕೇಂದ್ರ ಸರ್ಕಾರ ಕುಡ್ಮಿ ಜನಾಂಗ ಹೊರತುಪಡಿಸಿ 12 ಬುಡಕಟ್ಟು ಸಮುದಾಯಗಳಿಗೆ ಎಸ್ಟಿ ಸ್ಥಾನಮಾನ ನೀಡಿ ಅಧಿಸೂಚನೆ ಹೊರಡಿಸಿತು. ನಮಗೆ ಇತರ ಹಿಂದುಳಿದ ಸಮುದಾಯ (ಒಬಿಸಿ) ಸ್ಥಾನಮಾನ ನೀಡಲಾಯಿತು. ರಾಜ್ಯದಲ್ಲಿನ 43 ಸಮುದಾಯಗಳಿಗೆ ಎಸ್ಟಿ ಸ್ಥಾನಮಾನವಿರುವಂತೆ ನಮ್ಮ ಸಮುದಾಯಕ್ಕೂ ಈ ಮಾನ್ಯತೆ ನೀಡಬೇಕೆಂದು ನಾವು ಹೋರಾಡುತ್ತಿದ್ದೇವೆ” ಎಂದು ಆದಿವಾಸಿ ಕುಡ್ಮಿ ಸಮಾಜ ಕೇಂದ್ರ ಸಮಿತಿ ಜಂಟಿ ಕಾರ್ಯದರ್ಶಿ ಸಂಜಯ್ ಮಹತೊ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
“ದೂರದ ಸಲ್ಬೋನಿ, ಕೇಶಿಯಾರಿ ಗ್ರಾಮಗಳಿಂದ ಕುಡ್ಮಿ ಜನಾಂಗದ ಸುಮಾರು 25 ಸಾವಿರ ಮಂದಿ ಖೇಮಸುಲಿಗೆ ಆಗಮಿಸಿ ಪ್ರತಿಭಟಿಸುತ್ತಿದ್ದಾರೆ.
ಕುಡ್ಮಿ ಜನಾಂಗದವರು ಎಸ್ಟಿ ಬೇಡಿಕೆಗೆ ಆಗ್ರಹಿಸಿ ಕಳೆದ ವರ್ಷ ಸೆಪ್ಟೆಂಬರ್ನಲ್ಲೂ ಪ್ರತಿಭಟಿಸಿದ್ದರು. ಅವರು 123 ಗಂಟೆಗಳ ಕಾಲ ನಿರಂತರ ಹೋರಾಟ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಎನ್ಸಿಇಆರ್ಟಿ | ಪಠ್ಯ ಪರಿಷ್ಕರಣೆಗೆ ಸಮ್ಮತಿಸದ ಕೇರಳ ಸರ್ಕಾರ
“ರಾಜ್ಯದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರ ಕೇಂದ್ರಕ್ಕೆ ಈ ಕುರಿತು ಪತ್ರ ಬರೆದಿದೆ. ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಈ ಕುರಿತು ಮಸೂದೆ ಅಂಗೀಕರಿಸಿದೆ. ಸಮುದಾಯವನ್ನು ಎಸ್ಟಿಗೆ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ಅಚಲ ನಿರ್ಧಾರ ಪ್ರಕಟಿಸಬೇಕು” ಎಂದು ಕುಡ್ಮಿ ನಾಯಕರೊಬ್ಬರು ಹೇಳಿದರು.
ರಾಜ್ಯದ ಬಂಕುರಾ, ಪಶ್ಚಿಮ ಮೇದಿನಿಪುರ ಹಾಗೂ ಝಾರ್ಗ್ರಾಮ್ ಜಿಲ್ಲೆಗಳಲ್ಲಿ ಕುಡ್ಮಿ ಸಮುದಾಯ ಜನರು ಸುಮಾರು 55 ಲಕ್ಷದಷ್ಟು ಜನಸಂಖ್ಯೆ ಹೊಂದಿದ್ದಾರೆ. ಕೃಷಿ ಹಾಗೂ ಪಶು ಪಾಲನೆ ಇವರ ಪ್ರಾಥಮಿಕ ವೃತ್ತಿ.