- ಎಲ್ಲ ರಾಜ್ಯಗಳ ಜೊತೆ ಸಮಾಲೋಚಿಸಿ ಮತ್ತೊಮ್ಮೆ ಪಠ್ಯ ಪರಿಷ್ಕರಣೆಗೆ ಒತ್ತಾಯ
- ವಿದ್ಯಾರ್ಥಿಗಳಿಗೆ ಮೂಲ ಪಠ್ಯ ಬೋಧಿಸಲು ಕೇರಳ ಸರ್ಕಾರ ನಿರ್ಧಾರ ಎಂದ ಸಚಿವ
ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ (ಎನ್ಸಿಇಆರ್ಟಿ) ಸೈದ್ಧಾಂತಿಕ ನೆಲೆಯಲ್ಲಿ ಪಠ್ಯ ಪರಿಷ್ಕರಣೆ ಮಾಡಿರುವುದನ್ನು ಕೇರಳ ಸರ್ಕಾರ ಅಸಮಧಾನ ವ್ಯಕ್ತಪಡಿಸಿದೆ.
ಈ ಕುರಿತು ಕೇರಳ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಅವರು ಶನಿವಾರ (ಏಪ್ರಿಲ್ 8) ಹೇಳಿಕೆ ನೀಡಿದ್ದು, ಸೈದ್ಧಾಂತಿಕ ನೆಲೆಯಲ್ಲಿ ಪಠ್ಯದ ಅನೇಕ ಭಾಗಗಳನ್ನು ಅಳಿಸಿ ಹಾಕಿರುವ ಮಂಡಳಿ ನಿರ್ಧಾರವನ್ನು ಕೇರಳ ಸರ್ಕಾರ ಒಪ್ಪುವುದಿಲ್ಲ. ಮಂಡಳಿಯು ಮತ್ತೊಮ್ಮೆ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಜೊತೆ ಚರ್ಚಿಸಿ ಪಠ್ಯ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
“12ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ನಂತರದ ಅವಧಿಯ ಭಾಗಗಳನ್ನು ತೆಗೆದುಹಾಕಿರುವುದಕ್ಕೆ ಕೇರಳ ಸರ್ಕಾರದ ಅಸಮ್ಮತಿಯಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ನಿರ್ಧಾರವನ್ನು ನಾವು ಒಪ್ಪುವುದಿಲ್ಲ” ಎಂದು ಶಿವನ್ಕುಟ್ಟಿ ತಿಳಿಸಿದರು.
ಕಳೆದ ವರ್ಷ ಪಠ್ಯಕ್ರಮದಲ್ಲಿ ಸೈದ್ಧಾಂತಿಕ ನೆಲೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದ ಸಂದರ್ಭದಲ್ಲಿ ಎನ್ಸಿಇಆರ್ಟಿ ಅಳಿಸಿ ಹಾಕಿದ ಕೆಲವು ಬಾಗಗಳು ವಿವಾದ ಸೃಷ್ಟಿಸಿದ್ದವು. ಮಂಡಳಿ ಸೂಚಿಸಿದ ವಿಜ್ಞಾನ ವಿಷಯದ ಭಾಗಗಳಿಗೆ ಕೇರಳ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ ಮಂಡಳಿ ಅಳಿಸಿ ಹಾಕಿದ ಮಾನವೀಯ ವಿಷಯದ ಭಾಗಗಳನ್ನು ಕೇರಳ ಶಿಕ್ಷಣ ಇಲಾಖೆ ಮತ್ತೆ ಸೇರಿಸಿತ್ತು.
ಕೇರಳ ಶೈಕ್ಷಣಿಕ ಮಂಡಳಿ ಮತ್ತು ಎನ್ಸಿಇಆರ್ಟಿ ಜತೆ ಮಾಡಿಕೊಂಡ ಒಪ್ಪಂದದ ಭಾಗವಾಗಿ ಪ್ರತಿವರ್ಷ ಪಠ್ಯ ಪುಸ್ತಕಗಳನ್ನು ಮರುಮುದ್ರಣ ಮಾಡಲಾಗುತ್ತದೆ. ಆದರೆ ಈ ಬಾರಿ ಮಂಡಳಿಯೇ ತಾನು ಕೈಬಿಟ್ಟ ಪಠ್ಯದ ಭಾಗಗಳನ್ನು ಹೊರತುಪಡಿಸಿ ಉಳಿದ ಪಠ್ಯಪುಸ್ತಕಗಳನ್ನು ಮುದ್ರಿಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಅಣ್ಣನ ಜೊತೆ ಜಗಳ; ಕೋಪದಲ್ಲಿ ಮೊಬೈಲ್ ನುಂಗಿದ 15 ವರ್ಷದ ಬಾಲಕಿ!
“ಕೇರಳ ಸರ್ಕಾರ ಎನ್ಸಿಇಆರ್ಟಿನಿಂದ ಅಳಿಸದ ಭಾಗಗಳಿರುವ ಪಠ್ಯವನ್ನು ಪಡೆಯಲಿದೆ. ಇದನ್ನೇ ಮಕ್ಕಳಿಗೆ ಕಲಿಸಲು ನೀಡಲಾಗುತ್ತದೆ” ಎಂದು ಕೇರಳ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದರು.