ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯಗಳ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕಾರಕ್ಕೂ ಮುನ್ನ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿವಾಸದಲ್ಲಿ ಸಭೆ ನಡೆಸಿದ ಸಚಿವರು, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನದ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು. ಅವಕಾಶಗಳ ಬಗ್ಗೆ ಶೀಘ್ರವೇ ಸಮಗ್ರ ಮಾಹಿತಿ ಕೊಡುವಂತೆ ಅಧಿಕಾರಿಗಳಿಗೆ ಕುಮಾರಸ್ವಾಮಿ ಸೂಚಿಸಿದರು.
ಕುದುರೆಮುಖದಲ್ಲಿ ಸಿಗುತ್ತಿದ್ದ ಕಬ್ಬಿಣದ ಅದಿರು ಜಗತ್ತಿನಲ್ಲಿಯೇ ಶ್ರೇಷ್ಠ ಗುಣಮಟ್ಟದ ಅದಿರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಜೊತೆಗೆ ಬೆಂಗಳೂರಿನಲ್ಲಿ ಉಕ್ಕು ಸಂಶೋಧನಾ ಕೇಂದ್ರ ಸ್ಥಾಪನೆ ಬಗ್ಗೆ ಸಚಿವರ ಗಮನ ಸೆಳೆದರು.
ಉಕ್ಕು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರೆ ಕೈಗಾರಿಕೆಗಳಿಗೆ ಅನುಕೂಲವಾಗುತ್ತದೆ. ಬೃಹತ್ ಕೈಗಾರಿಕೆ ಖಾತೆಯನ್ನು ತಮಗೇ ಕೊಟ್ಟಿರುವ ಕಾರಣ ಉಕ್ಕು ಖಾತೆಗೆ ಹೆಚ್ಚು ಸಹಾಯ ಆಗುತ್ತಿದೆ. ಸಿಎಂ ಆಗಿದ್ದ ವೇಳೆ ಕರ್ನಾಟಕದಲ್ಲಿ ಕೈಗಾರಿಕೆ ಕ್ಷೇತ್ರದಲ್ಲಿ ತಾವು ಮಾಡಿದ್ದ ಕೆಲಸಗಳ ಮಾಹಿತಿಯನ್ನು ಅಧಿಕಾರಿಗಳಿಗೆ ಸಚಿವರು ನೀಡಿದರು.
ಸಭೆಯಲ್ಲಿ ‘ಚೀನಾದೊಂದಿಗೆ ಸ್ಪರ್ಧೆʼ ಪರಿಕಲ್ಪನೆ ಬಗ್ಗೆ ವಿವರಣೆ ನೀಡಿದ ಅಧಿಕಾರಿಗಳಿಗೆ ಮೆಚ್ಚುಗೆ ಸೂಚಿಸಿದರು. ಇಡೀ ದೇಶದ ಎಲ್ಲ ರಾಜ್ಯಗಳ ಅಭಿವೃದ್ಧಿ ನನ್ನ ಗುರಿ ಎಂದು ಸಚಿವರು ತಿಳಿಸಿದರು.
“ಅವಕಾಶ ಇರುವ ಕೈಗಾರಿಕೆಗಳನ್ನು ಪುನಃಶ್ಚೇತನ ಮಾಡೋಣ. ಸುಖಾ ಸುಮ್ಮನೆ ಜನರ ತೆರಿಗೆ ಹಣ ಪೋಲು ಮಾಡೋದು ಬೇಡ. ಪ್ರಧಾನಿಗಳು ಬಹಳ ವಿಶ್ವಾಸ ಇಟ್ಟು ಮಹತ್ವದ ಖಾತೆಗಳನ್ನು ಕೊಟ್ಟಿದ್ದಾರೆ. ಅವರ ನಿರೀಕ್ಷೆ ಹುಸಿ ಆಗಬಾರದು” ಎಂದರು.
ಸಭೆಯಲ್ಲಿ ಸುಕೃತಿ ಲಿಖಿ – ಉಕ್ಕು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ವಿನೋದ್ ಕುಮಾರ್ ತ್ರಿಪಾಠಿ – ಜಂಟಿ ಕಾರ್ಯದರ್ಶಿ, ಅಶ್ವಿನಿ ಕುಮಾರ್, ಆರ್ಥಿಕ ಸಲಹೆಗಾರರು, ಸುಭಾಷ್ ಕುಮಾರ್, ಉಪ ಕಾರ್ಯದರ್ಶಿ ಭಾಗಿಯಾಗಿದ್ದರು.
![](https://eedina.com/wp-content/uploads/ಈದಿನ-1-150x150.jpg)