- ಮೋಗಾ ಜಿಲ್ಲೆಯ ರೋಡೆ ಗ್ರಾಮದಲ್ಲಿರುವ ಗುರುದ್ವಾರದಲ್ಲಿ ಅಮೃತ್ಪಾಲ್ ಸಿಂಗ್ ಶರಣು
- ಇತ್ತೀಚೆಗೆ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೃತ್ಪಾಲ್ ಪತ್ನಿ ಬಂಧನ
ಮಾರ್ಚ್ 18ರಿಂದ ತಲೆಮರೆಸಿಕೊಂಡಿದ್ದ ಸಿಖ್ ಮೂಲಭೂತವಾದಿ ಅಮೃತ್ಪಾಲ್ ಸಿಂಗ್ ಭಾನುವಾರ (ಏಪ್ರಿಲ್ 23) ಬೆಳಿಗ್ಗೆ ಪಂಚಾಬ್ನ ಮೋಗಾದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಅಮೃತ್ಪಾಲ್ ಶರಣಾಗಿದ್ದು, ಅವರನ್ನು ಬಂಧಿಸಲಾಗಿದೆ ಎನ್ನುವುದನ್ನು ಪಂಜಾಬ್ ಪೊಲೀಸರು ದೃಢೀಕರಿಸಿದ್ದಾರೆ.
ಮಾರ್ಚ್ 18ರಿಂದ ಪಂಜಾಬ್ ಪೊಲೀಸರು ಅಮೃತ್ಪಾಲ್ ಸಿಂಗ್ ಬಂಧನಕ್ಕೆ ಭಾರೀ ಕಾರ್ಯಾಚರಣೆ ನಡೆಸಿದ್ದರು. ಈಗಾಗಲೇ ಅಮೃತ್ಪಾಲ್ ಅವರ ನೂರಾರು ಬೆಂಬಲಿಗರನ್ನು ಬಂಧಿಸಲಾಗಿದೆ. ಅಮೃತ್ಪಾಲ್ ಬಂಧನದ ಸಂದರ್ಭದಲ್ಲಿ ಅವರ ವಶದಲ್ಲಿದ್ದ ರೈಫಲ್, ರಿವಾಲ್ವರ್, ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಮೃತ್ಪಾಲ್ ಬಂಧನವನ್ನು ಖಚಿತಪಡಿಸಿ ಪಂಜಾಬ್ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
“ಪಂಜಾಬ್ನ ಮೋಗಾದಲ್ಲಿ ಅಮೃತ್ಪಾಲ್ರನ್ನು ಬಂಧಿಸಲಾಗಿದೆ. ಜನರು ಶಾಂತಿ ಕಾಪಾಡಿಕೊಳ್ಳಬೇಕು. ಯಾವುದೇ ಸುಳ್ಳು ಸುದ್ದಿಯ ಪ್ರಚಾರಕ್ಕೆ ಆಸ್ಪದ ನೀಡಬಾರದು” ಎಂದು ಪಂಜಾಬ್ ಪೊಲೀಸರು ಟ್ವೀಟ್ನಲ್ಲಿ ಹೇಳಿದ್ದಾರೆ.
ಮೋಗಾ ಜಿಲ್ಲೆಯ ರೋಡೆ ಗ್ರಾಮದಲ್ಲಿರುವ ಗುರುದ್ವಾರದಲ್ಲಿ ಅಮೃತ್ಪಾಲ್ ಶರಣಾಗಿದ್ದಾರೆ. ಇವರನ್ನು ವಶಕ್ಕೆ ಪಡೆದಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಸ್ಸಾಂನ ದಿಬ್ರುಗಢಕ್ಕೆ ಅಮೃತ್ಪಾಲ್ ಅವರನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. ಅಲ್ಲಿ ಈಗಾಗಲೇ ಅಮೃತ್ಪಾಲ್ ಅವರ ಬೆಂಬಲಿಗರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ.
ಯಾವುದೇ ದೋಷಾರೋಪವಿಲ್ಲದೆ ವ್ಯಕ್ತಿಯನ್ನು ವರ್ಷದವರೆಗೆ ಬಂಧಿಸಲು ಕಾಯ್ದೆ ಅನುವು ಮಾಡುತ್ತದೆ. ಖಾಲಿಸ್ತಾನಿ ಅಥವಾ ಪಾಕಿಸ್ತಾನದ ಗೂಢಾಚಾರ ಎಂದು ಸರ್ಕಾರ ಅಮೃತ್ಪಾಲ್ ಸಿಂಗ್ ಅವರ ಮೇಲೆ ಆರೋಪ ಹೊರಿಸಿದೆ. ಅಮೃತ್ಪಾಲ್, ಖಾಲಿಸ್ತಾನಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಅವರ ಅನಾಯಿಯಾಗಿದ್ದ ಎನ್ನಲಾಗಿದೆ.
ಕಳೆದ ಫೆಬ್ರವರಿಯಲ್ಲಿ ತಮ್ಮ ಸಂಘಟನೆಯ ಒಬ್ಬ ಸದಸ್ಯನ ಬಿಡುಗಡೆಗೆ ಆಗ್ರಹಿಸಿ ಅಮೃತಸರ ನಗರದಲ್ಲಿನ ಅಜ್ನಾಲಾ ಪ್ರದೇಶದ ಪೊಲೀಸ್ ಠಾಣೆಯ ಹೊರಗೆ ಅಮೃತ್ಪಾಲ್ ಮತ್ತು ಆತನ ಬೆಂಬಲಿಗರು ಕತ್ತಿ ಹಾಗೂ ಬಂದೂಕುಗಳನ್ನು ಹಿಡಿದು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆ ವೇಳೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಧ್ವಂಸಗೊಳಿಸಿದರು. ಸಂಘಟನೆಯ ಸದಸ್ಯನ ಬಿಡುಗಡೆಗೆ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು.
ಈ ಗಲಭೆಯ ತಿಂಗಳ ಬಳಿಕ ಮಾರ್ಚ್ 18ರಲ್ಲಿ ಪಂಜಾಬ್ ಪೊಲೀಸರು ‘ವಾರಿಸ್ ಪಂಜಾಬ್ ದೇ’ ಸಂಘಟನೆ ಸದಸ್ಯರು ಮತ್ತು ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಮನೆ ಮೇಲೆ ದಾಳಿ ನಡೆಸಿದ್ದರು. ಅಮೃತ್ಪಾಲ್ ಹಾಗೂ ಅವರ ಬೆಂಬಲಿಗರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಲಾಯಿತು. ಅಮೃತ್ಪಾಲ್ ಬಂಧನಕ್ಕೆ ಚರ್ಚೆಗಳು ನಡೆದವು.
ಅಮೃತ್ ಪಾಲ್ ಅವರು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುತ್ತಿದ್ದರು ಎಂದು ಗುಪ್ತಚರ ಮೂಲಗಳು ಆರೋಪಿಸಿವೆ.
ಈ ಸುದ್ದಿ ಓದಿದ್ದೀರಾ? ಸುದ್ದಿ ನೋಟ | ರಾಬರ್ಟ್ ವಾದ್ರಾ ಕ್ಲೀನ್ಚಿಟ್; ವ್ಯರ್ಥ ವಿಚಾರಣೆಯಿಂದ ಬಿಜೆಪಿ ಚುನಾವಣಾ ಲಾಭ ಪಡೆಯಿತೆ?
ಬಂದೂಕು ಸಂಸ್ಕೃತಿಯನ್ನು ಯುವ ಜನರಲ್ಲಿ ಬಿತ್ತಲು ಅಮೃತ್ಪಾಲ್ ಸಿಂಗ್ ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ.
ಇತ್ತೀಚೆಗೆ ಲಂಡನ್ಗೆ ತೆರಳಲು ಮುಂದಾಗಿದ್ದ ಅಮೃತ್ಪಾಲ್ ಅವರ ಪತ್ನಿ ಕಿರಣ್ದೀಪ್ ಕೌರ್ ಅವರನ್ನು ಅಮೃತಸರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.