- ಅಸಲಿ ಸಮಸ್ಯೆ ತಿರುಚಬೇಡಿ ಎಂದ ಕಾಂಗ್ರೆಸ್
- ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ಜರ್ಮನಿ ಪ್ರತಿಕ್ರಿಯೆ
ರಾಹುಲ್ ಗಾಂಧಿ ಅನರ್ಹತೆ ವಿವಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಮುನ್ನುಡಿ ಬರೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಜರ್ಮನಿಗೆ ಧನ್ಯವಾದ ತಿಳಿಸಿರುವ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಟ್ವೀಟ್ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ.
ದೇಶಾದ್ಯಂತ ರಾಹುಲ್ ಗಾಂಧಿ ಅವರ ಅನರ್ಹತೆ ವಿಚಾರ ಚರ್ಚೆಯಲ್ಲಿದೆ. ಈ ನಡುವೆ ಜರ್ಮನಿ ವಿದೇಶಾಂಗ ಸಚಿವಾಲಯದ ವಕ್ತಾರರು ಸಹ ಮಾತನಾಡಿದ್ದು, “ರಾಹುಲ್ ಗಾಂಧಿ ವಿರುದ್ಧದ ಪ್ರಕರಣದಲ್ಲೂ ಮೂಲಭೂತ ಪ್ರಜಾಸತ್ತಾತ್ಮ ತತ್ವಗಳು ಪಾಲನೆಯಾಗಬೇಕು” ಎಂದು ರಾಹುಲ್ ಗಾಂಧಿ ಪರ ಬ್ಯಾಟ್ ಬೀಸಿದ್ದರು.
ಜರ್ಮನಿ ವಕ್ತಾರರ ವಿಡಿಯೋವನ್ನು ಹಿರಿಯ ಪತ್ರಕರ್ತ ರಿಚರ್ಡ್ ವಾಕರ್ ಅವರು ಟ್ವೀಟ್ ಮಾಡಿದ್ದರು. ಅದಕ್ಕೆ ದಿಗ್ವಿಜಯ ಸಿಂಗ್ ಪ್ರತಿಕ್ರಿಯೆ ನೀಡಿದ್ದು, “ಶೋಷಣೆಯ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಗಮನಿಸಿದ ಜರ್ಮನಿಯ ವಿದೇಶಾಂಗ ಸಚಿವಾಲಯ ಮತ್ತು ರಿಚರ್ಡ್ ವಾಕರ್ ಅವರಿಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದರು.
ದಿಗ್ವಿಜಯ ಸಿಂಗ್ ಅವರ ಟ್ವೀಟ್ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕಾಂಗ್ರೆಸ್ ವಿದೇಶಿ ಹಸ್ತಕ್ಷೇಪ ಬಯಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಅವಕಾಶಕ್ಕಾಗಿ ಕಾಯುತ್ತಿದ್ದ ಬಿಜೆಪಿ ಸಚಿವರು ಮತ್ತೆ ಕಾಂಗ್ರೆಸ್ ವಿರುದ್ಧ ವಿದೇಶಿ ಹಸ್ತಕ್ಷೇಪ ಪ್ರಯತ್ನದ ಆರೋಪ ಹೊರಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, “ನಮ್ಮ ರಾಷ್ಟ್ರದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪವನ್ನು ಕಾಂಗ್ರೆಸ್ ಬಯಸುತ್ತದೆ. ರಾಹುಲ್ ಗಾಂಧಿ ಚೀನಾದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ. ವಿದೇಶದಲ್ಲಿನ ಸಂವಾದದ ವೇಳೆಯಲ್ಲಿ ಭಾರತ ಸರ್ಕಾರವನ್ನು ಉರುಳಿಸಲು ಸಹಾಯ ಮಾಡುವಂತೆ ಕೋರಿದ್ದಾರೆ. ಇದೀಗ ದಿಗ್ವಿಜಯ ಸಿಂಗ್ ಅವರು ಜರ್ಮನಿಗೆ ಧನ್ಯವಾದ ತಿಳಿಸಿದ್ದಾರೆ. ಕಾಂಗ್ರೆಸ್ ವಿದೇಶಿ ಹಸ್ತಕ್ಷೇಪಕ್ಕೆ ಹಪಹಪಿಸುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಪುರಾವೆ ಬೇಕೇ?” ಎಂದು ಆರೋಪಗಳನ್ನು ಹೊರಿಸಿದ್ದಾರೆ.
“ರಾಹುಲ್ ಗಾಂಧಿಗೆ ಭಾರತದ ಪ್ರಜಾಪ್ರಭುತ್ವ ಮತ್ತು ಕಾನೂನು ಹೋರಾಟದಲ್ಲಿ ನಂಬಿಕೆ ಇಲ್ಲ. ಆದ್ದರಿಂದ ನಮ್ಮ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ವಿದೇಶಿ ಶಕ್ತಿಗಳನ್ನು ಆಹ್ವಾನಿಸುತ್ತಿದ್ದಾರೆ” ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿ, ಕಾಂಗ್ರೆಸ್ ಎತ್ತಿರುವ ವಿಷಯ ಬಿಜೆಪಿಯ ನಿದ್ದೆಗೆಡಿಸಿದೆ: ಆನಂದ್ ಶರ್ಮಾ ವಾಗ್ದಾಳಿ
“ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ವಿದೇಶಿ ಶಕ್ತಿಗಳನ್ನು ಆಹ್ವಾನಿಸಿದ್ದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು. ನೆನಪಿಡಿ, ಭಾರತೀಯ ನ್ಯಾಯಾಂಗವು ವಿದೇಶಿ ಹಸ್ತಕ್ಷೇಪದಿಂದ ಪ್ರಭಾವಿತವಾಗುವುದಿಲ್ಲ. ಭಾರತವು ಇನ್ನು ಮುಂದೆ ‘ವಿದೇಶಿ ಪ್ರಭಾವ’ ಸಹಿಸುವುದಿಲ್ಲ” ಎಂದು ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
ಕಿರಣ್ ರಿಜಿಜು ಟ್ವೀಟ್ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, “ಮಿಸ್ಟರ್ ರಿಜಿಜು, ಮುಖ್ಯ ಸಮಸ್ಯೆಯನ್ನು ಬೇರೆಡೆಗೆ ಏಕೆ ತಿರುಗಿಸುತ್ತೀರಿ? ಅದಾನಿ ಬಗ್ಗೆ ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಲು ಸಾಧ್ಯವಿಲ್ಲ ಎಂಬುದು ಸಮಸ್ಯೆಯಾಗಿದೆ. ಜನರನ್ನು ದಾರಿ ತಪ್ಪಿಸುವ ಬದಲು ದಯವಿಟ್ಟು ಪ್ರಶ್ನೆಗಳಿಗೆ ಉತ್ತರಿಸಿ” ಎಂದಿದ್ದಾರೆ.