- ಸಚಿವ ನಾರಾಯಣಗೌಡ ವಿರುದ್ಧ ಎಚ್ಡಿಕೆ ವಾಗ್ದಾಳಿ
- ಕ್ಷೇತ್ರದ ಜನರೇ ನಿಮಗೆ ಪಾಠ ಕಲಿಸುತ್ತಾರೆಂದು ಕಿಡಿ
‘ಕತ್ತು ಕೊಯ್ದವರಿಂದ ನೀತಿ ಪಾಠ ಕಲಿಯುವ ಅಗತ್ಯ ಇಲ್ಲ’ ಎಂದು ಜೆಡಿಎಸ್ ಮುಖುಂಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (ಎಚ್ಡಿಕೆ) ಕಿಡಿ ಕಾರಿದರು.
ದೇವೇಗೌಡರ ಕುಟುಂಬದ ವಿರುದ್ಧ ಆರೋಪ ಮಾಡಿದ ಸಚಿವ ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿದ ಎಚ್ಡಿಕೆ ನಾರಾಯಣಗೌಡರಿಗೆ ಏಕವಚನದಲ್ಲಿ ವಾಕ್ಪ್ರಹಾರ ನಡೆಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಟಿಕೆಟ್ ಕೊಡಿಸಿದ ನನ್ನನ್ನೇ ದೂರ ತಳ್ಳಿ ಕುತ್ತಿಗೆ ಕೊಯ್ದವನು ನೀನು. ನಿನಗೆ ನಮ್ಮ ಕುಟುಂಬದ ಬಗ್ಗೆ ಮಾತನಾಡಲು ನೈತಿಕತೆ ಏನಿದೆ. ನಿನ್ನಂತಹ ವಂಚಕನಿಂದ ನಾನು ಕಲಿಯುವುದು ಏನೂ ಇಲ್ಲ’ ಎಂದು ಆಕ್ರೋಶ ಹೊರ ಹಾಕಿದರು.
‘ಇವರನ್ನು ಬೆಳೆಸುವುದಕ್ಕೆ ನಾನು ಪಕ್ಷ ಹಾಳುಮಾಡಿಕೊಳ್ಳಬೇಕಾ? ಇವರೇನು ಮಹಾನ್ ಕೆಲಸ ಮಾಡಿದ್ದಾರಾ..? ಅಂದು ಕೃಷ್ಣ ವಿರುದ್ಧ ಅಭ್ಯರ್ಥಿ ಆಗಬೇಕು ಅಂತಾ ಬಂದಾಗ ಪರಿಜ್ಞಾನ ಇರಲಿಲ್ವಾ’ ಎಂದು ಪ್ರಶ್ನಿಸಿದರು.
‘ಕಳೆದ ಬಾರಿ ನಿನ್ನ ನಡವಳಿಕೆ ನೋಡಿ ಟಿಕೆಟ್ ನೀಡಲಿಲ್ಲ. ಎರಡನೇ ಬಾರಿಗೆ ಟಿಕೆಟ್ ಕೊಡಬಾರದು ಅಂತ ಇದ್ದರು. ಆದರೆ ನಿನಗೆ ಟಿಕೆಟ್ ಕೊಟ್ಟವರು ಯಾರು? ಟಿಕೆಟ್ ಕೊಡಿಸಿದವನು ನಾನು. ಕುತ್ತಿಗೆ ಕುಯ್ದು ಹೋದವನು ನೀನು. ನಿನ್ನಿಂದ ಪಾಠ ಕಲಿಯಬೇಕಿಲ್ಲ. ನಿನ್ನ ಕಾಲ ಮುಗಿದಿದೆ. ಈ ಬಾರಿಯ ಚುನಾವಣೆಯಲ್ಲಿ ಕೆ ಆರ್ ಪೇಟೆ ಜನ ನಿನಗೆ ಪಾಠ ಕಲಿಸುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ?:ಹೈಕಮಾಂಡ್ ನಿರ್ಧರಿಸಿದರೆ ಕೋಲಾರದಲ್ಲೂ ಸ್ಪರ್ಧೆ: ಸಿದ್ದರಾಮಯ್ಯ
‘ಜೆಡಿಎಸ್ ಕಾರ್ಯಕರ್ತರಿಗೆ ಅಧಿಕಾರಿಗಳಿಂದ ಕಿರುಕುಳವಾಗುತ್ತಿರುವ ಆರೋಪ ಬಂದಿದೆ. ಈ ವಿಚಾರದಲ್ಲಿ ಪೊಲೀಸರು ಶಾಸಕರ ಜೊತೆ ಶಾಮೀಲಾಗಿದ್ದಾರೆ. ನಮ್ಮ ಪಕ್ಷಕ್ಕೆ ಬರುವವರಿಗೆ ಧಮಕಿ ಹಾಕಲಾಗುತ್ತಿದೆ. ಇವುಗಳೆಲ್ಲ ಸರಿಯಾದ ಕ್ರಮವಲ್ಲ’ ಎಂದು ಕುಮಾರಸ್ವಾಮಿ ಕೋಪ ವ್ಯಕ್ತಪಡಿಸಿದರು.
ಇದೇ ವೇಳೆ ಪೊಲೀಸರಿಗೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಚ್ಡಿಕೆ, ‘ಇನ್ನು ಒಂದು ತಿಂಗಳಷ್ಟೇ ನಿಮ್ಮ ಸಮಯ. ಸರ್ಕಾರಿ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡಿ’ ಎಂದರು.
ಜೊತೆಗೆ ಖಾಕಿ ಪಡೆಗೆ ಎಚ್ಚರಿಕೆ ನೀಡಿದ ಅವರು ‘ಶಾಸಕರಿಗೆ ಅಡಿಯಾಳಾಗಿ ಕೆಲಸ ಮಾಡಿದರೆ ಪ್ರಾಯಶ್ಚಿತ್ತವಾಗುತ್ತದೆ. ಜೂನ್ ನಂತರ ಎಚ್ಚರ. ಈಗ ಮಾತು ಮೀರಿ ನಿಂತರೆ ಪ್ರಾಯಶ್ಚಿತ್ತವಾಗಲಿದೆ’ ಎಂದರು.
ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ‘ದೇವೇಗೌಡರ ಕುಟುಂಬ ಯಾರನ್ನೂ ಬೆಳೆಯಲು ಬಿಟ್ಟಿಲ್ಲ. ಜೆಡಿಎಸ್ನಲ್ಲಿ ಒಬ್ಬರನ್ನ ಬೆಳೆಸಲು ಇನ್ನೊಬ್ಬರನ್ನು ತುಳಿಯುತ್ತಾರೆ’ ಎಂದು ಸಚಿವ ನಾರಾಯಣಗೌಡ ಟೀಕಿಸಿದ್ದರು.