ಇಮ್ರಾನ್ ಖಾನ್ ಬಂಧನ ಕಾನೂನು ಬಾಹಿರ ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್ ತಕ್ಷಣ ಬಿಡುಗಡೆ ಮಾಡಬೇಕೆಂದು ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋಗೆ (ಎನ್ಎಬಿ)ಗೆ ನಿರ್ದೇಶಿಸಿದೆ. ಈ ಹಿನ್ನಲೆ ಮಾಜಿ ಪ್ರಧಾನಿಯವರನ್ನು ಬಿಡುಗಡೆ ಮಾಡಲಾಗಿದೆ.
ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಇಮ್ರಾನ್ ಖಾನ್ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಉಮರ್ ಅತ ಬಂದಿಯಾಲ್ ನೇತೃತ್ವದ ಪೀಠ ನಡೆಸಿ, ಇಮ್ರಾನ್ ಖಾನ್ ಅವರನ್ನು ಒಂದು ಗಂಟೆಯೊಳಗೆ ಕೋರ್ಟ್ಗೆ ಹಾಜರುಪಡಿಸಿ ಎಂದು ನಿರ್ದೇಶನ ನೀಡಿತ್ತು. ಇದರಂತೆ ಎನ್ಎಬಿ ಅಧಿಕಾರಿಗಳು ಬಿಗಿಭದ್ರತೆಯಲ್ಲಿ ಇಮ್ರಾನ್ ಖಾನ್ ಅವರನ್ನು ಪೀಠದ ಎದುರು ಹಾಜರುಪಡಿಸಿದರು.
ಲಾಹೋರ್ಗೆ ಆಗಮಿಸಿದ್ದ 70 ವರ್ಷದ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ನ ಆವರಣದಿಂದ ಬಂಧಿಸಿದ ಕ್ರಮ ಸರಿಯಿಲ್ಲ ಎಂದು ಪೀಠವು ವಿಚಾರಣೆಯ ಸಮಯದಲ್ಲಿ ಸಿಟ್ಟು ಹೊರಹಾಕಿತ್ತು. 90 ಮಂದಿ ನ್ಯಾಯಾಲಯದ ಆವರಣವನ್ನು ಪ್ರವೇಶಿಸಿದರೆ ಅದರ ಘನತೆ ಏನಾಗಬೇಕು, ಯಾವುದೇ ವ್ಯಕ್ತಿಯನ್ನು ನ್ಯಾಯಾಲಯದ ಆವರಣದಿಂದ ಹೇಗೆ ಬಂಧಿಸಲು ಸಾಧ್ಯ ಎಂದು ಮುಖ್ಯ ನ್ಯಾಯಾಧೀಶರು ಕೇಳಿದರು.
ಈ ಸುದ್ದಿ ಓದಿದ್ದೀರಾ? ಆಸ್ಟ್ರೇಲಿಯಾದ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕನ್ನಡತಿ
ಬಂಧನಕ್ಕೆ ಮುನ್ನ ನ್ಯಾಯಾಲಯದ ರಿಜಿಸ್ಟ್ರಾರ್ನಿಂದ ಅನುಮತಿ ಪಡೆಯಬೇಕಿತ್ತು. ನ್ಯಾಯಾಲಯದ ಸಿಬ್ಬಂದಿಯೂ ನಿಂದನೆಗೆ ಒಳಗಾಗಿದ್ದಾರೆ ಎಂದು ಕೋರ್ಟ್ ಹೇಳಿತ್ತು.
ಇಮ್ರಾನ್ ಆಪ್ತ ಬಂಧನ; 1500 ಕಾರ್ಯಕರ್ತರ ವಿರುದ್ಧ ಪ್ರಕರಣ
ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಮತ್ತು ದೇಶದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕಾಗಿ ಇಮ್ರಾನ್ ಖಾನ್ ಆಪ್ತ ಶಾ ಮೊಹಮದ್ ಖುರೇಶಿ ಅವರನ್ನು ಬಂಧಿಸಲಾಗಿದೆ.
ಇಮ್ರಾನ್ ಖಾನ್ ಬಂಧನ ನಂತರ ಉನ್ನತ ಸೇನಾಧಿಕಾರಿ ಮನೆಗೆ ಬೆಂಕಿ ಹಚ್ಚಿರುವ ಘಟನೆ ಸಂಬಂಧ ಪಿಟಿಐ ಪಕ್ಷದ 1500 ಕಾರ್ಯಕರ್ತರ ವಿರುದ್ಧ ಲಾಹೋರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಮಂಗಳವಾರ ಪಾಕ್ನ ಅರೆಸೇನಾ ಪಡೆಯ ಯೋಧರು ಬಂಧಿಸಿದ್ದನ್ನು ವಿರೋಧಿಸಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೇನಾ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿದ್ದರು. ಸೇನಾ ವಾಹನಗಳು ಮತ್ತು ನೆಲೆಗಳ ಮೇಲೆ ದಾಳಿ ನಡೆಸಿದ ವೇಳೆ ಲಾಹೋರ್ ಕಾರ್ಪ್ಸ್ ಕಮಾಂಡರ್ ನಿವಾಸಕ್ಕೂ ಬೆಂಕಿ ಹಚ್ಚಿದ್ದರು. ಪಾಕಿಸ್ತಾನದಾದ್ಯಂತ ಗಲಭೆಗಳು ಭುಗಿಲೆದ್ದ ಕಾರಣ ಸುಮಾರು ಎಂಟು ಮಂದಿ ಮೃತಪಟ್ಟಿದ್ದಾರೆ.