- ಗಾಂಧಿ ಗ್ರಾಮ ಪುರಸ್ಕಾರ, ನರೇಗಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಮುಖ್ಯಮಂತ್ರಿ
- ‘ನರೇಗಾ ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತರಲು ಕಾನೂನಿಗೆ ತಿದ್ದುಪಡಿ ತರಲಾಗುವುದು’
ನರೇಗಾದಲ್ಲಿ ಕರ್ನಾಟಕದ ಪಂಚಾಯತ್ ರಾಜ್ ಇಲಾಖೆ ಅತ್ಯುತ್ತಮ ಕೆಲಸ ಮಾಡಿದ್ದು ದೇಶದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಶುಕ್ರವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ 2019-2020, 2020-2021 ಹಾಗೂ 2021-2022ನೇ ಸಾಲಿನ ʼಗಾಂಧಿ ಗ್ರಾಮ ಪುರಸ್ಕಾರ ಹಾಗೂ ಮಹಾತ್ಮಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಸಮಾರಂಭʼ ಹಾಗೂ ಪಂಚತಂತ್ರ 2.0 ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ ತೆರಿಗೆ ಸಂಗ್ರಹದ PoS ಉಪಕರಣಗಳ ಲೋಕಾರ್ಪಣೆ ಹಾಗೂ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
“ನರೇಗಾದಿಂದ ಸಾಕಷ್ಟು ಆಸ್ತಿ ನಿರ್ಮಾಣವಾಗಿದೆ. ಸಾಕಷ್ಟು ಜನರಿಗೆ ಕೆಲಸ ದೊರೆತಿದೆ. ಇದನ್ನು ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತರಲು ಕಾನೂನಿನಲ್ಲಿ ಕೆಲವು ಬದಲಾವಣೆ ತರಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ, ಆಸ್ಪತ್ರೆಗಳಿಗೆ ನರೇಗಾ ಬಳಕೆ ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರ ಬಳಿ ಮಾತನಾಡಿದ್ದು, ಶೀಘ್ರದಲ್ಲಿಯೇ ಬದಲಾವಣೆ ನಿರೀಕ್ಷೆ ಮಾಡುತ್ತಿದ್ದೇವೆ” ಎಂದರು.
“ಪ್ರತಿ ಗ್ರಾಮ ಪಂಚಾಯಿತಿಗಳು ಆಸ್ತಿ ನಿರ್ವಹಣೆ ಮಾಡುವ ಸಲುವಾಗಿ ದುಪ್ಪಟ್ಟು ಅನುದಾನ ನೀಡಲಾಗುತ್ತಿದೆ. ರಾಜಕೀಯ ವಿಕೇಂದ್ರೀಕರಣದ ಜೊತೆಗೆ ಆರ್ಥಿಕ ವಿಕೇಂದ್ರೀಕರಣವನ್ನೂ ಮಾಡಲಾಗುತ್ತಿದೆ” ಎಂದರು.
“ಅಭಿವೃದ್ಧಿಗಾಗಿ ಜನ ಓಡಾಡುವಂತಾಗಬಾರದು. ಜನರಿದ್ದಲ್ಲಿ ಆಡಳಿತ, ಅಭಿವೃದ್ಧಿಯಾಗಬೇಕು. ಬಾಪೂಜಿ ಕೇಂದ್ರದ ತಂತ್ರಾಂಶಗಳ ಮೂಲಕ ಇನ್ನಷ್ಟು ವೇಗವಾಗಿ ಕೆಲಸಗಳನ್ನು ಮಾಡಲು ಅನುಕೂಲವಾಗಲಿದೆ. ಇದರ ಜೊತೆಗೆ ಸೇವಾ ಭತ್ಯೆಗಳನ್ನು ಒಂದು ಸಾವಿರದಿಂದ 2 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಧ್ಯಕ್ಷರಿಗೆ ಆರು ಸಾವಿರ ದೊರೆಯುವಂತೆ ಮಾಡಲಾಗಿದೆ” ಎಂದು ಹೇಳಿದರು.
“ಗ್ರಾಮೀಣಾಭಿವೃದ್ಧಿ ಈ ದೇಶದ ಸಮಗ್ರ ಅಭಿವೃದ್ಧಿಯ ಮೂಲ. ಅಬ್ದುಲ್ ನಜೀರ್ ಸಾಬ್ ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಹರಿಕಾರರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವಧಿಯಲ್ಲಿ 73ನೇ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲಾಯಿತು” ಎಂದರು.