- ಯತ್ನಾಳ್ಗೆ ಮಾನಸಿಕ ಸ್ಥಿಮಿತ ಇಲ್ಲವೆಂದ ಉಗ್ರಪ್ಪ
- ಬಿಜೆಪಿ ಪ್ರಚಾರ ಸಭೆಯಲ್ಲಿ ಯತ್ನಾಳ್ ಹೇಳಿಕೆ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಷಕನ್ಯೆಗೆ ಹೋಲಿಸಿದ್ದಾರೆ.
ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಬಸನಗೌಡ ಪಾಟೀಲ್, ಸೋನಿಯಾ ಗಾಂಧಿ ಅವರನ್ನು ಚೀನಾ ಮತ್ತು ಪಾಕಿಸ್ತಾನದ ಎಜೆಂಟ್ ಎಂದು ಕರೆದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ವಿಷದ ಹಾವಿಗೆ ಹೋಲಿಸಿದ್ದರು. ಖರ್ಗೆ ಹೇಳಿಕೆ ಬೆನ್ನಲ್ಲೇ ಯತ್ನಾಳ್ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆಗೆ ಹೋಲಿಸಿದ್ದಾರೆ.
“ಮೋದಿ ನಾಗರಹಾವು ಆದರೆ ಸೋನಿಯಾ ಗಾಂಧಿ ವಿಷಕನ್ಯೆನಾ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಹುಚ್ಚ” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ವಿರುದ್ದ ವಾಗ್ದಾಳಿ ನಡೆಸಿರುವ ಯತ್ನಾಳ್, “ಸಿದ್ದರಾಮಯ್ಯ ಲಿಂಗಾಯತರನ್ನು ಭ್ರಷ್ಟರು ಎನ್ನುತ್ತಾರೆ. ವೈಯಕ್ತಿಕವಾಗಿ ಅವರು ನಮ್ಮನ್ನು ಎಷ್ಟೇ ಬೈಯಲಿ. ಆದರೆ, ಇಡೀ ಸಮುದಾಯದ ಬಗ್ಗೆ ಮಾತನಾಡಬಾರದು” ಎಂದರು.
ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರ ಕುರಿತ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಎಸ್ ಉಗ್ರಪ್ಪ, “ಯತ್ನಾಳ್ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹೆಣ್ಣನ್ನು ತಾಯಿ ಎಂದು ಗೌರವಿಸಬೇಕಾಗಿರುವುದು ಭಾರತದ ಸಂಸ್ಕೃತಿ. ಹೀಗಿರುವಾಗ ಒಬ್ಬ ತಾಯಿಗೆ ವಿಷಕನ್ಯೆ ಎಂದು ಕರೆಯಲು ನಾಚಿಕೆ ಆಗಬೇಕು” ಎಂದು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಷ ವಿವಾದ | ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ದೂರು
“ಯತ್ನಾಳ್ ಮಾತಿಗೆ ಹಿಡಿತವೇ ಇಲ್ಲ. ಒಬ್ಬ ಮನುಷ್ಯನ ಯೋಗ್ಯತೆ ಏನು ಎಂದು ಅವರ ಮಾತು ತೋರಿಸುತ್ತದೆ. ಇಂತವರನ್ನು ಒದ್ದು ಜೈಲಿಗೆ ಹಾಕಬೇಕು” ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ.