- ಸೂರತ್ ನ್ಯಾಯಾಲಯದಿಂದ ರಾಹುಲ್ ಗಾಂಧಿ ಅವರಿಗೆ 2 ವರ್ಷ ಶಿಕ್ಷೆ
- 2019ರಲ್ಲಿ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ರಾಹುಲ್
ಪ್ರಧಾನಿ ಮೋದಿ ಉಪನಾಮದ ಕುರಿತ ಹೇಳಿಕೆ ಸಂಬಂಧ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ (ಏಪ್ರಿಲ್ 3) ಶಿಕ್ಷೆ ಆದೇಶ ಪ್ರಶ್ನಿಸಿ ಸೂರತ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮೇಲ್ಮನವಿ ಸಲ್ಲಿಸಲು ರಾಹುಲ್ ಅವರ ವಕೀಲರ ತಂಡ ಸಕಲ ಸಿದ್ಧತೆಗಳನ್ನೂ ಪೂರ್ಣಗೊಳಿಸಿದೆ. ಸೋಮವಾರ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮಾನಹಾನಿ ಮೊಕದ್ದಮೆಯಲ್ಲಿ ತನಗೆ ಶಿಕ್ಷೆ ವಿಧಿಸಿರುವ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ರಾಹುಲ್ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. ಈ ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯ ನೀಡಿರುವ ಶಿಕ್ಷೆಗೆ ಮಧ್ಯಂತರ ತಡೆ ನೀಡುವಂತೆಯೂ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಮಾನಹಾನಿ ಮೊಕದ್ದಮೆಯಲ್ಲಿ ಮಾರ್ಚ್ 23ರಂದು ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಲ್ಲದೆ ನ್ಯಾಯಾಲಯ ಪ್ರಕರಣದಲ್ಲಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಹುಲ್ ಅವರಿಗೆ ಜಾಮೀನು ನೀಡಿ 30 ದಿನಗಳವರೆಗೆ ಕಾಲಾವಕಾಶ ಒದಗಿಸಿತು.
ಮಾರ್ಚ್ 24 ರಂದು ರಾಹುಲ್ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಸಂಸದ ಸ್ಥಾನದಿಂದ ರಾಹುಲ್ ಅವರನ್ನು ಅನರ್ಹಗೊಳಿಸಿದ ಕೆಲವು ದಿನಗಳ ನಂತರ, ರಾಹುಲ್ ಗಾಂಧಿ ಅವರು ತಮ್ಮ ಅಧಿಕೃತ ದೆಹಲಿ ಬಂಗಲೆಯನ್ನು ತೆರವು ಮಾಡುವಂತೆ ಲೋಕಸಭೆ ನೋಟಿಸ್ ನೀಡಿದೆ.
2004ರಲ್ಲಿ ಅವರು ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದಾಗ ಅವರಿಗೆ ನವದೆಹಲಿಯ ಲುಧಿಯಾನ ಏರಿಯಾದ 12 ತುಘಲಕ್ ರಸ್ತೆಯಲ್ಲಿರುವ ಬಂಗಲೆಯನ್ನು ಸರಕಾರದ ವತಿಯಿಂದ ನೀಡಲಾಗಿತ್ತು.
ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಕಾರಣ ಏಪ್ರಿಲ್ 22ರೊಳಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಲೋಕಸಭಾ ವಸತಿ ಸಮಿತಿ ನೀಡಿರುವ ನೋಟಿಸ್ನಲ್ಲಿ ತಿಳಿಸಲಾಗಿದೆ.
2019ರ ಹೇಳಿಕೆ ವಿರುದ್ಧ ಸುಶೀಲ್ ಕುಮಾರ್ ಮೋದಿ ಎಂಬುವವರು ರಾಹುಲ್ ಅವರ ವಿರುದ್ಧ ಪಾಟ್ನಾ ನ್ಯಾಯಾಲಯದಲ್ಲಿ ಮತ್ತೊಂದು ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 12ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ರಾಹುಲ್ ಅವರಿಗೆ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ? ಕೋಮು ಉದ್ವಿಗ್ನತೆ ಹಿನ್ನೆಲೆ ಅಮಿತ್ ಶಾ ಬಿಹಾರ ಭೇಟಿ ರದ್ದು; ಜನ ಬಾರದ ಕಾರಣ ವಾಪಸ್ ಎಂದ ಜೆಡಿಯು
2019ರ ಲೋಕಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋಲಾರದಲ್ಲಿ ಸಮಾವೇಶದ ಭಾಷಣದಲ್ಲಿ ರಾಹುಲ್ ಗಾಂಧಿ ಅವರು, “ಎಲ್ಲ ಕಳ್ಳರಿಗೂ ಮೋದಿ ಎಂಬ ಹೆಸರು ಏಕಿರುತ್ತದೆ?” ಎಂದು ಟೀಕಿಸಿದ್ದರು.