ಮುಂದಿನ ಲೋಕಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ಭಾನುವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಕೊಡುತ್ತಾರೆ” ಎಂದು ತಿಳಿಸಿದ್ದಾರೆ.
“ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಏನೂ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ನ ಒಳಗಿರುವ ಗುಂಪುಗಾರಿಕೆ, ಬಣ ರಾಜಕೀಯದಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ಅದನ್ನು ಈಗಾಗಲೇ ಬಹಿರಂಗಗೊಳಿಸಿದ ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ ಅವರ ಹೇಳಿಕೆಯೇ ಸಾಕ್ಷಿ” ಎಂದು ಶೆಟ್ಟರ್ ಹೇಳಿದರು.
“ಚುನಾವಣೆ ಹೊಸ್ತಿಲಲ್ಲಿ ದಲಿತ ಸಿಎಂ, ಡಿಸಿಎಂ ಕೂಗು ಎದ್ದಿದೆ. ಕಾಂಗ್ರೆಸ್ನೊಳಗಡೆಯೇ ಬೇರೆ ಬೇರೆ ಗುಂಪುಗಳಿವೆ. ಈ ಗುಂಪುಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ. ಅಧಿಕಾರಕ್ಕಾಗಿ ಅವರಲ್ಲಿಯೇ ಕಿತ್ತಾಟ ನಡೆದಿದ್ದು, ಕೆಲವು ದಿನಗಳ ಹಿಂದಷ್ಟೇ ದಲಿತ ಸಿಎಂ ಕೂಗು ಕೇಳಿ ಬಂದಿತ್ತು. ಅನಂತರ ನಾಲ್ಕು ಡಿಸಿಎಂ ಮಾಡಬೇಕೆಂಬುದು ಮುನ್ನಲೆಗೆ ಬಂದಿತ್ತು. ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಸದ್ದು ಮಾಡುತ್ತಿದೆ” ಎಂದು ತಿಳಿಸಿದರು.
“ಹಿಂದಿನ ಇತಿಹಾಸ, ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ನೋಡಿದರೆ ಲೋಕಸಭಾ ಚುನಾವಣೆ ನಂತರ ಸರ್ಕಾರ ಪತನವಾಗುವುದು ಖಚಿತವಾಗುತ್ತಿದೆ. ಸರ್ಕಾರ ಪತನವಾದರೆ ಅದನ್ನು ವಿನಾಕಾರಣ ಬಿಜೆಪಿ ಪಕ್ಷದ ಮೇಲೆ ಹೊರಿಸಬಹುದು” ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಇದನ್ನು ಓದಿದ್ದೀರಾ? ಐಪಿಎಲ್ | ಮೈದಾನದಲ್ಲಿ ಅನುಚಿತ ವರ್ತನೆ: ಕೆಕೆಆರ್ನ ಗೆಲುವಿನ ರೂವಾರಿ ಹರ್ಷಿತ್ ರಾಣಾಗೆ ದಂಡ
“ಸಿದ್ದರಾಮಯ್ಯರನ್ನು ಕೆಡವಲು ಪಕ್ಷದೊಳಗೇ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂಬ ಡಿಸಿಎಂ ಹೇಳಿಕೆಯನ್ನು ಸ್ವತಃ ಪಕ್ಷದ ಹಿರಿಯರಾದ ಶಾಮನೂರು ಶಿವಶಂಕರಪ್ಪನವರೇ ಸ್ಪಷ್ಟ ಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಬೀಳಿಸಲು ಕಾಂಗ್ರೆಸ್ನಲ್ಲಿಯೇ ಒಳತಂತ್ರವನ್ನ ರೂಪಿಸಲಾಗುತ್ತದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ” ಎಂದು ಮಾಜಿ ಸಿಎಂ ಶೆಟ್ಟರ್ ಆರೋಪಿಸಿದರು.